ಸಾರಾಂಶ
ಶಿವಾಜಿ ಮಹಾರಾಜರ ಕನಸು ನನಸು ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಹಾವೇರಿ: ಶಿವಾಜಿ ಮಹಾರಾಜರ ಕನಸು ನನಸು ಮಾಡಲು ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ನಗರದಲ್ಲಿ ಮರಾಠ ಸಮುದಾಯದ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಸ್ತುತ ದೇಶದ ಚುನಾವಣೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಶಿವಾಜಿ ಮಹಾರಾಜರ ಅಪ್ಪಟ ಶಿಷ್ಯ. ಶಿವಾಜಿ ಮಹಾರಾಜರು ಯಾವುದಕ್ಕೆ ಹೋರಾಟ ಮಾಡಿದ್ದರೋ ಅದನ್ನು ಮೋದಿ ಅವರು ಮುಂದುವರಿಸುತ್ತಿದ್ದಾರೆ. ಮರಾಠ ಸಮುದಾಯ ಯಾವಾಗಲೂ ದೇಶಪ್ರೇಮ ಹೊಂದಿರುವ ಸಮುದಾಯ ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಿ ಎಂದು ಮನವಿ ಮಾಡಿದರು.ಚಿಕ್ಕಂದಿನಿಂದಲೂ ನಾನು ಹುಬ್ಬಳ್ಳಿ ಮರಾಠ ಗಲ್ಲಿಯಲ್ಲಿ ಆಟ ಆಡಿ ಬೆಳೆದಿದ್ದು, ಈ ಸಮಾಜದ ಜತೆಗೆ ನನಗೆ ಉತ್ತಮ ಸಂಬಂಧ ಇದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಮರಾಠ ಸಮುದಾಯದ ಅಭಿವೃದ್ಧಿ ನಿಗಮ ಮಾಡಿ ನೂರು ಕೋಟಿ ರು. ನೀಡಿದ್ದೇನೆ. ಇದರ ಮೂಲಕ ಸುಮಾರು ೨೭ ಸಾವಿರ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಕೊಟ್ಟಿದ್ದೇನೆ. ಸುಮಾರು ಎಂಟು ಸಾವಿರ ಮರಾಠ ಸಮುದಾಯದ ರೈತರಿಗೆ ಗಂಗಾ ಕಲ್ಯಾಣ ಬೋರ್ವೆಲ್ ಹಾಕಿಸಿಕೊಟ್ಟಿದ್ದೇವೆ. ನಾನು ಈ ಸಮಾಜದೊಂದಿಗೆ ಯಾವಾಗಲೂ ಇದ್ದೇನೆ. ಸಮಾಜದ ಬೇಡಿಕೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಕೆಲಸ ಮಾಡುತ್ತೇನೆ ಎಂದರು.
ಸಭೆಯಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸುಭಾಷ ಚವ್ಹಾಣ ಹಾಗೂ ಮರಾಠ ಸಮುದಾಯದ ಮುಖಂಡರು ಇದ್ದರು. ವಿಶ್ವಕರ್ಮ ಸಮುದಾಯ ಹಾಗೂ ಸವಿತಾ ಸಮುದಾಯದ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದರು.