ಕುರುಗೋಡು: ಯುವ ಜನತೆಯನ್ನು ಗುರಿಯಾಗಿಟ್ಟುಕೊಂಡ ಪಟ್ಟಭದ್ರ ಹಿತಾಸಕ್ತಿಗಳು ವಿವಿಧ ಮಾದರಿಯಲ್ಲಿ ಮಾದಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಲು ಮುಂದಾಗಿರುವುದು ದುರದೃಷ್ಟ ಸಂಗತಿ ಎಂದು ಡಿವೈಎಸ್ಪಿ ಪ್ರಸಾದ್ ಗೋಖಲೆ ವಿಷಾದ ವ್ಯಕ್ತಪಡಿಸಿದರು.

ಇಲ್ಲಿನ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ಆಯೋಜಿಸಿದ್ದ ಮಾದಕವಸ್ತು ವಿರೋಧ ದಿನಾಚರಣೆ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಮಾದಕ ವಸ್ತುಗಳ ಸಾಗಣೆ, ಸಂಗ್ರಹ ಮತ್ತು ಜಮೀನುಗಳಲ್ಲಿ ಗಾಂಜಾ ಬೆಳೆಯುವ ಪ್ರಕರಣಗಳನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ. ಅಕ್ರಮ ಚಟುವಟಿಕೆಗಳನ್ನು ತೊಡಗಿರುವ ಬಗ್ಗೆ ಮಾಹಿತಿ ದೊರೆತರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.

ಸಿಪಿಐ ಬಾಳನಗೌಡ ಎಸ್. ಮಾನಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ರೌಡಿ ನಿಗ್ರಹದಳ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ. ಹಣಬಲ, ತೋಳ್ಬಲ ಇರುವ ವ್ಯಕ್ತಿಗಳು ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿರುವುದು, ಅಮಾಯಕರ ಮೇಲೆ ದೌರ್ಜನ್ಯ ಎಸಗುವುದು, ಗ್ರಾಮಗಳಲ್ಲಿ ರೌಡಿಗಳಂತೆ ವರ್ತಿಸುವುದು, ಭೂಮಿ ಕಬಳಿಕೆ, ಹಣ ವಂಚನೆ ಮತ್ತು ರಾಜಿ ಪಂಚಾಯಿತಿಗಳಲ್ಲಿ ಮೂಗು ತೂರಿಸುವ ಘಟನೆಗಳು ಕಂಡುಬಂದರೆ ಅಂಥವರ ವಿರುದ್ಧ ರೌಡಿ ಪಟ್ಟಿ ತೆರೆಯಲಾಗುವುದು ಎಂದು ಎಚ್ಚರಿಸಿದರು.

ಸಮಾಜ ಘಾತುಕ ಕೆಲಸದಲ್ಲಿ ತೊಡಗಿದ ವ್ಯಕ್ತಿ ಪ್ರಭಾವಿಯಾಗಿದ್ದರೂ ಪ್ರಭಾವಕ್ಕೆ ಮಣಿದು ಬಿಡುವ ಪ್ರಶ್ನೆಯೇ ಇಲ್ಲ. ಕ್ರಮ ಕೈಗೊಳ್ಳುವುದು ಖಚಿತ ಎಂದು ಎಚ್ಚರಿಸಿದರು.


ಪಿಎಸ್ಐ ಸುಪ್ರಿತ್ ವಿರುಪಾಕ್ಷಪ್ಪ ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ಮಾತನಾಎಡಿದರು. ಪುರಸಭೆ ಅಧ್ಯಕ್ಷ ಜಿ.ಮಂಜುನಾಥ, ಉಪಾಧ್ಯಕ್ಷೆ ನಾಗವೇಣಿ ಅಂಜಿನಪ್ಪ, ಪಿಎಸ್ಐ ಕರೆಮ್ಮ ಇದ್ದರು.

ಕುರುಗೋಡಿನಲ್ಲಿ ಸೋಮವಾರ ಜರುಗಿದ ಮಾದಕ ವಸ್ತು ವಿರೋಧಿ ಜಾಗೃತಿ ಸಭೆಯಲ್ಲಿ ಡಿವೈಎಸ್ಪಿ ಪ್ರಸಾದ್ ಗೋಖಲೆ ಮಾತನಾಡಿದರು.