ಸಾಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾದರೆ ಕಠಿಣ ಕ್ರಮ

| Published : Jun 25 2025, 11:47 PM IST / Updated: Jun 25 2025, 11:48 PM IST

ಸಾರಾಂಶ

ರೌಡಿ ಶೀಟರ್‌ಗಳು ಯಾವುದೇ ಕಾರಣಕ್ಕೂ ಸಮಾಜಘಾತುಕ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು. ಇಂಥ ಕೃತ್ಯಗಳಿಗೆ ಕುಮ್ಮಕ್ಕು ನೀಡಬಾರದು. ತಪ್ಪು ಮಾಡಿದ್ದು ಕಂಡುಬಂದರೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಆರ್‌. ಎಂ. ಮೋಹನ್ ಎಚ್ಚರಿಕೆ ನೀಡಿದರು. ಆಲೂರು ತಾಲೂಕಿನಲ್ಲಿ 78 ಜನ ರೌಡಿ ಶೀಟರ್‌ಗಳಿದ್ದಾರೆ. ಪಟ್ಟಿಯಲ್ಲಿ ಕೆಲವು ವಯಸ್ಸಾದವರಿದ್ದಾರೆ. ಅಂತಹವರನ್ನು ಗುರುತಿಸಿ ಮಾನವೀಯತೆ ಆಧಾರದಲ್ಲಿ ರೌಡಿ ಪಟ್ಟಿಯಿಂದ ಕೈ ಬಿಡಲು ಶಿಫಾರಸು ಮಾಡಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಆಲೂರು ರೌಡಿ ಶೀಟರ್‌ಗಳು ಯಾವುದೇ ಕಾರಣಕ್ಕೂ ಸಮಾಜಘಾತುಕ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು. ಇಂಥ ಕೃತ್ಯಗಳಿಗೆ ಕುಮ್ಮಕ್ಕು ನೀಡಬಾರದು. ತಪ್ಪು ಮಾಡಿದ್ದು ಕಂಡುಬಂದರೆ ತಕ್ಕ ಶಾಸ್ತಿ ಮಾಡಲಾಗುವುದು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಆರ್‌. ಎಂ. ಮೋಹನ್ ಎಚ್ಚರಿಕೆ ನೀಡಿದರು.ಪಟ್ಟಣದ ಪೊಲೀಸ್ ಠಾಣಾ ಆವರಣದಲ್ಲಿ ಆಯೋಜಿಸಿದ್ದ ರೌಡಿಶೀಟರ್‌ಗಳ ಪರೇಡ್‌ ವೇಳೆ ಮಾತನಾಡಿದ ಅವರು, ರೌಡಿಗಳು ಹಳೆಯ ಚಾಳಿ ಮುಂದುವರಿಸಬಾರದು. ಸಮಾಜದಲ್ಲಿ ಗೌರವಯುತ ಬದುಕು ರೂಪಿಸಿಕೊಳ್ಳಬೇಕು. ಅನಗತ್ಯ ತಂಟೆಗಳಲ್ಲಿ ಮೂಗು ತೂರಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಕಾನೂನು ಬಾಹಿರ ಚಟುವಟಿಕೆಗಳನ್ನು ಮುಂದುವರಿಸುವುದು ಹಾಗೂ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಪ್ರಯತ್ನ ಮಾಡಿದ್ದಕ್ಕೆ ರೌಡಿ ಶೀಟರ್‌ ಆಗಿದ್ದೀರಿ. ಅದರಿಂದ ಹೊರಬರಬೇಕೆಂದರೆ ಗೌರವಯುತ ಜೀವನ ನಡೆಸಬೇಕು. ಮತ್ತೆ ಅಂಥದ್ದೇ ಕುಮ್ಮಕ್ಕು ಮುಂದುವರಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದರು. ನಿರಂತರ ಹತ್ತು ವರ್ಷ ಸಮಾಜದಲ್ಲಿ ಯಾರ ನೆಮ್ಮದಿಗೂ ಧಕ್ಕೆ ತರದಂತೆ ಜೀವನ ನಡೆಸಬೇಕು. ದೂರುಗಳೂ ಬರದಂತೆ ಇರಬೇಕು ಹಾಗೆ ಮಾಡಿದರೆ ಮಾತ್ರ ರೌಡಿಶೀಟರ್‌ನಿಂದ ತೆರವು ಮಾಡುತ್ತೇವೆ. ಆಲೂರು ತಾಲೂಕಿನಲ್ಲಿ 78 ಜನ ರೌಡಿ ಶೀಟರ್‌ಗಳಿದ್ದಾರೆ. ಪಟ್ಟಿಯಲ್ಲಿ ಕೆಲವು ವಯಸ್ಸಾದವರಿದ್ದಾರೆ. ಅಂತಹವರನ್ನು ಗುರುತಿಸಿ ಮಾನವೀಯತೆ ಆಧಾರದಲ್ಲಿ ರೌಡಿ ಪಟ್ಟಿಯಿಂದ ಕೈ ಬಿಡಲು ಶಿಫಾರಸು ಮಾಡಲಾಗುವುದು ಎಂದರು.ಈ ಸಂದರ್ಭದಲ್ಲಿ ಆಲೂರು ಸಬ್ ಇನ್ಸ್‌ಪೆಕ್ಟರ್‌ ಜನಬಾಯ್ ಕಡಪಟ್ಟಿ, ಎಎಸ್‌ಐ ನಾಗೇಶ್, ಅನಂತ್, ಸಿಬ್ಬಂದಿಯಾದ ಹರೀಶ್, ಸಂಗಮ್, ಪೂರ್ಣಚಂದ್ರ, ಪುನೀತ್, ಸೇರಿ ಇತರ ಸಿಬ್ಬಂದಿಯಿದ್ದರು.