ಪೌರ ಸೇವಾ ನೌಕರರಿಗೆ ಸರ್ಕಾರಿ ನೌಕರರ ಸೌಲಭ್ಯ ನೀಡಲು ಆಗ್ರಹಿಸಿ ಮುಷ್ಕರ

| Published : May 28 2025, 12:21 AM IST

ಪೌರ ಸೇವಾ ನೌಕರರಿಗೆ ಸರ್ಕಾರಿ ನೌಕರರ ಸೌಲಭ್ಯ ನೀಡಲು ಆಗ್ರಹಿಸಿ ಮುಷ್ಕರ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ನಾಗರಿಕ ಸೇವಾ ನಿಯಮ ಅಧಿನಿಯಮ 1978ನ್ನು ಪೌರಸೇವಾ ನೌಕರರಿಗೆ ಅನ್ವಯಿಸಬೇಕು ಹಾಗೂ ಪಂಚಾಯತ್‌ರಾಜ್ ಇಲಾಖೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿರುವ ರೀತಿಯಲ್ಲಿಯೇ ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಪರಿಗಣಿಸಬೇಕು.

ರಾಣಿಬೆನ್ನೂರು: ಸರ್ಕಾರಿ ನೌಕರರು ಎಂದು ಪರಿಗಣಿಸಿ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಸ್ಥಳೀಯ ನಗರಸಭೆ ಪೌರ ನೌಕರರು ಮಂಗಳವಾರ ನಗರಸಭೆ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಕರ್ನಾಟಕ ನಾಗರಿಕ ಸೇವಾ ನಿಯಮ ಅಧಿನಿಯಮ 1978ನ್ನು ಪೌರಸೇವಾ ನೌಕರರಿಗೆ ಅನ್ವಯಿಸಬೇಕು ಹಾಗೂ ಪಂಚಾಯತ್‌ರಾಜ್ ಇಲಾಖೆ ನೌಕರರನ್ನು ರಾಜ್ಯ ಸರ್ಕಾರಿ ನೌಕರರೆಂದು ಪರಿಗಣಿಸಿರುವ ರೀತಿಯಲ್ಲಿಯೇ ರಾಜ್ಯದ ನಗರ ಸ್ಥಳೀಯ ಸಂಸ್ಥೆ ನೌಕರರನ್ನು ಪರಿಗಣಿಸಬೇಕು.

ಜಿಪಿಎಫ್, ಕೆಜಿಐಡಿ, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರು ಪಡೆಯುವ ಎಲ್ಲ ಸೌಲಭ್ಯಗಳನ್ನು ಪೌರ ಸೇವಾ ನೌಕರರಿಗೆ ಒದಗಿಸಲು ಕಾಯ್ದೆ ಮತ್ತು ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಬೇಕು. ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಬೀದಿದೀಪ ಸಹಾಯಕರು, ಲೋಡರ್ಸ್, ಪಾರ್ಕ್ ಗಾರ್ಡನರ್, ಕಾವಲುಗಾರ, ಸ್ಯಾನಿಟರಿ ಸೂಪರ್‌ವೈಸರ್ ಸೇರಿದಂತೆ ವಿವಿಧ ವೃಂದಗಳಲ್ಲಿ ಹೊರಗುತ್ತಿಗೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ನೇರ ಪಾವತಿಗೆ ಒಳಪಡಿಸುವುದು ಸೇರಿದಂತೆ 19 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಸ್ಥಳೀಯ ಘಟಕದ ಅಧ್ಯಕ್ಷ ಏಳುಕೋಟೆಪ್ಪ ಗೋಣಿಬಸಮ್ಮನವರ, ಕಾರ್ಯದರ್ಶಿ ಮಾಧವ ಸಾತೇನಹಳ್ಳಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ. ಮರಿಗೌಡ್ರ, ಎಂ.ಆರ್. ಮಂಜುನಾಥ, ಗಣೇಶ ಪಾಸಿಗಾರ, ಬಿ. ವಸಂತ, ಪ್ರಭು ಬಾಲೆಹೊಸೂರ, ಎಸ್.ಪಿ. ದೊಡ್ಡಮನಿ, ಎನ್.ಬಿ. ಕೋರಿ, ವಾಣಿಶ್ರೀ, ನಿಂಗಪ್ಪ ಮಧುಕರಿಯಪ್ಪನವರ, ದಿಳ್ಳೆಪ್ಪ ಅಂಕಸಾಪುರ, ನಿಖಿತಾ ಮೆಣಸಿನಹಾಳ, ದೇವೇಂದ್ರ, ದುರ್ಗವ್ವ ಶಿವಪ್ಪನವರ, ಮಲ್ಲವ್ವ ಮಧುಕರಿಯಪ್ಪನವರ, ಕವಿತಾ ಅಯ್ಯಜ್ಜನವರ, ರಾಮಪ್ಪ ಸಿ.ಟಿ. ಸೇರಿದಂತೆ ನೂರಾರು ನೌಕರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಸ್ಥಳಕ್ಕೆ ಶಾಸಕ ಭೇಟಿ

ಪ್ರತಿಭಟನಾ ಸ್ಥಳಕ್ಕೆ ಶಾಸಕ ಪ್ರಕಾಶ ಕೋಳಿವಾಡ ಭೇಟಿ ನೀಡಿ ಮುಷ್ಕರ ನಿರತರಿಂದ ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದ ಅವರು, ನೌಕರರ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಅನುಷ್ಠಾನಗೊಳಿಸಬೇಕಾಗುತ್ತದೆ. ಅದಕ್ಕಾಗಿ ನೌಕರರ ಬೇಡಿಕೆಗಳ ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸುತ್ತೇನೆ. ಪೌರ ನೌಕರರು ನಗರದ ಸ್ವಚ್ಛತೆಗೆ ಹಾಗೂ ಸೌಂದರ್ಯಕ್ಕೆ ಧಕ್ಕೆಯಾಗದಂತೆ ದೈನಂದಿನ ಕೆಲಸಗಳನ್ನು ಮಾಡುತ್ತಾ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದರು..