ಸಮಾಜ ಪ್ರಗತಿಗೆ ಶ್ರಮಿಸಿ: ಮಹದೇವ ಶ್ರೀ

| Published : Aug 19 2024, 12:47 AM IST

ಸಾರಾಂಶ

ಹೊಸಕೋಟೆ: ಭಾರತೀಯ ಇತಿಹಾಸದ ಪ್ರಾಚೀನ ಪರಂಪರೆಯಲ್ಲಿ ವೀರಶೈವ ಲಿಂಗಾಯತ ಸಮಾಜ ತನ್ನದೇ ಆದ ಮನ್ನಣೆ ಇದೆ. ದೇಶದ ಅತಿ ದೊಡ್ಡ ಸಮಾಜ ಎಂದು ವಿಜಯಪುರದ ಬಸವ ಕಲ್ಯಾಣ ಮಠದ ಶ್ರೀ ಮಹದೇವ ಸ್ವಾಮೀಜಿ ತಿಳಿಸಿದರು.

ಹೊಸಕೋಟೆ: ಭಾರತೀಯ ಇತಿಹಾಸದ ಪ್ರಾಚೀನ ಪರಂಪರೆಯಲ್ಲಿ ವೀರಶೈವ ಲಿಂಗಾಯತ ಸಮಾಜ ತನ್ನದೇ ಆದ ಮನ್ನಣೆ ಇದೆ. ದೇಶದ ಅತಿ ದೊಡ್ಡ ಸಮಾಜ ಎಂದು ವಿಜಯಪುರದ ಬಸವ ಕಲ್ಯಾಣ ಮಠದ ಶ್ರೀ ಮಹದೇವ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ವೀರಶೈವ ಧರ್ಮ ಜಾತಿ, ಮತ, ಪಂಥಗಳ ಗಡಿ ಮೀರಿ ವಿಶ್ವ ಬಂಧುತ್ವದ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಿದೆ. ಮಾನವೀಯ ಸಂಬಂಧಗಳು ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಜನ ಸಮುದಾಯಕ್ಕೆ ಸಂಸ್ಕಾರ ಮತ್ತು ಆದರ್ಶ ಶಿಕ್ಷಣ ಕೊಡಿಸುವ ಅಗತ್ಯವಿದೆ. ಅನೇಕ ಮಹನೀಯರು ಸೇವೆ ಸಲ್ಲಿಸಿ, ಸಮಾಜ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಆದ್ದರಿಂದ ಪರಸ್ಪರ ದ್ವೇಷ, ಅಸೂಯೆ ತೊರೆದು ಸಮುದಾಯ ಒಗ್ಗೂಡಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಹಾದಿಯಲ್ಲಿ ಸಾಗಬೇಕು ಎಂದರು.

ತಾಲೂಕು ಅಧ್ಯಕ್ಷ ಓರೋಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ, ಸಮುದಾಯದ ಪ್ರತಿಯೊಬ್ಬರು ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ ಸಂಘಟನೆಯನ್ನು ಬೇರುಮಟ್ಟದಲ್ಲಿ ಬಲಪಡಿಸುತ್ತೇನೆ. ಸಮುದಾಯದವನ್ನು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಮೇಲೆತ್ತುವ ಕಾರ್ಯ ಮಾಡುತ್ತೇನೆ ಎಂದರು.

ವೈಜ್ಞಾನಿಕ ಸಂಶೋಧನಾ ಪರಿಷತ್ ರಾಜ್ಯಾಧ್ಯಕ್ಷ ಹುಲಿಕಲ್ ನಟರಾಜ್‌ ಮಾತನಾಡಿ, ಇದೀಗ ಧರ್ಮ ಬೀದಿಯಲ್ಲಿ ಬಿದ್ದಿದೆ. ಪ್ರತಿಯೊಬ್ಬರೂ ಅದನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಸ್ವಾರ್ಥದ ಪರಿಣಾಮ ಧರ್ಮಕ್ಕೆ ಈ ಸ್ಥಿತಿ ಬಂದೊದಗಿದೆ. ಒಂದೇ ಧರ್ಮದ ಸಣ್ಣ ಸಣ್ಣ ಸಮುದಾಯಗಳು ಸ್ವಾರ್ಥ ಮನೋಭಾವ ಬಿಟ್ಟು ಒಗ್ಗೂಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಿ, ಧರ್ಮದ ಹಾದಿಯಲ್ಲಿ ಬದುಕುವುದನ್ನು ಕಲಿಯಬೇಕು ಎಂದರು.

ನೂತನ ಪದಾಧಿಕಾರಿಗಳು:

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸದಸ್ಯರಾಗಿ ಟಿ.ಎಸ್.ರಾಜ್‌ಶೇಖರ್, ದೇವಲಾಪುರ ಸುವರ್ಣ, ರಾಜಶೇಖರ್, ತಾಲೂಕು ಮಹಾಸಭಾ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್, ಉಪಾಧ್ಯಕ್ಷರಾಗಿ ಗುರುಬಸಪ್ಪ, ಖಜಾಂಚಿಯಾಗಿ ದಯಾನಂದ್ ಕುಮಾರ್, ಕಾರ್ಯದರ್ಶಿ ಕುಮಾರ್ ಹಾಗೂ ಸದಸ್ಯರಾಗಿ ಮಂಜುನಾಥ್ ಭಾರತಿ, ಮಂಜುನಾಥ್ ಎಸ್‌ಸಿ, ಪ್ರವೀಣ್, ಕೆ.ಎಂ ಮಂಜುನಾಥ್, ಬಸವಪ್ರಕಾಶ್, ನಂದೀಶಪ್ಪ, ವಿಜಯ ನಾಗರಾಜ್, ಎನ್.ಆರ್.ನಾಗೇಶ್, ಬಿ ಮಂಜುನಾಥ್, ವಿದ್ಯ, ಬಿಂದು, ಶೈಲ, ದ್ರಾಕ್ಷಾಯಿಣಿ, ಚಂದ್ರಶೇಖರ್, ಬಸವರಾಜ್, ವೀಣಾ ಹಾಗೂ ಶಂಕರ್ ಆಯ್ಕೆಯಾಗಿದ್ದು, ಎಲ್ಲರಿಗೂ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಮುಖಂಡ ರುದ್ರಾರಾಧ್ಯ, ನಟರಾಜ್ ಶಾಸ್ತ್ರಿ, ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷ, ಬಸವ ಸಮಿತಿ ಅಧ್ಯಕ್ಷ ಮಂಜುನಾಥ್, ದೇವನಹಳ್ಳಿ ತಾಲೂಕು ಅಧ್ಯಕ್ಷ ರಮೇಶ್ ಇತರರು ಹಾಜರಿದ್ದರು.

ಫೋಟೋ : 18 ಹೆಚ್‌ಎಸ್‌ಕೆ 1

ಹೊಸಕೋಟೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ಕಾರ್ಯಕಾರಿ ಸಮಿತಿ ಸದಸ್ಯರ ಅಭಿನಂದನಾ ಕಾರ್ಯಕ್ರಮವನ್ನು ವಿಜಯಪುರ ಬಸವ ಕಲ್ಯಾಣ ಮಠದ ಶ್ರೀ ಮಹಾದೇವ ಸ್ವಾಮೀಜಿ ಉದ್ಘಾಟಿಸಿದರು.