ಸಾರಾಂಶ
ಕನ್ನಡಪ್ರಭ ವಾರ್ತೆ ಹಾನಗಲ್ಲ
ದಿಕ್ಕು ದೆಸೆ ತಪ್ಪಿ ಹರಿದು ಹಂಚಿ ಹೋದ ಪಂಚಮಸಾಲಿ ಸಮಾಜ, ಈಗ ಒಗ್ಗೂಡಿ ಉಪಕಾರ ಮಾಡುವ ಸಮಾಜವಾಗಿ ಹೊರ ಹೊಮ್ಮಿದೆ. ಆದರೂ ಮೀಸಲಾತಿಗಾಗಿ ಮಾತ್ರ ಸದನದ ಒಳಗೂ ಹೊರಗೂ ಗೆಲ್ಲುವವರೆಗೂ ಹೋರಾಟ ಅನಿವಾರ್ಯವಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು.ಭಾನುವಾರ ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ಹಾಗೂ ಜಾಗೃತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪಂಚಮಸಾಲಿ ಸಮಾಜ ಬಡವರ ಕಣ್ಣೀರು ಒರೆಸುವ ಸಮಾಜ. ಆದರೆ ಪಂಚಮಸಾಲಿ ಸಮುದಾಯದ ಏಳಿಗೆಯೇ ಕುಂಠಿತವಾಗಿದೆ. ಇಲ್ಲಿರುವವರು ಬಹುತೇಕ ರೈತರು, ಕೂಲಿ ಕಾರ್ಮಿಕರು. ಇಂತಹ ಸಮಾಜಕ್ಕೆ ೨ಎ ಮೀಸಲಾತಿ ಅತ್ಯವಶ್ಯವಿದ್ದು, ನಮ್ಮ ಸರ್ಕಾರದಲ್ಲಿ ಮೀಸಲಾತಿ ದೊರೆಯುವ ವಿಶ್ವಾಸವಿದೆ. ಆದರೆ ಕೇವಲ ಮೀಸಲಾತಿಗಾಗಿ ಕಾದು ಕೂಡದೇ ಪಂಚಮಸಾಲಿ ಸಮಾಜದವರು ತಮ್ಮ ಮಕ್ಕಳಿಗೆ ಒಳ್ಳೆಯ ಭವಿಷ್ಯ ನೀಡಲು ಉತ್ತಮ ಶಿಕ್ಷಣ ನೀಡಬೇಕು. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನುಡಿದಂತೆ ನಡೆದಿದೆ. ಬಡವರ ಬದುಕಿನ ಸಮಸ್ಯೆಗೆ ಸ್ಪಂದಿಸಿದೆ ಎಂದರು.ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಕೂಡಲ ಸಂಗಮ ಪೀಠದ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ, ವೀರರಾಣಿ ಕಿತ್ತೂರು ಚೆನ್ನಮ್ಮ ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಹೇಳಿಕೊಳ್ಳುವ ಬ್ರಿಟಿಷರಿಗೆ ಸವಾಲು ಹಾಕಿ, ಭಾರತ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿ ಹೊಸ ಇತಿಹಾಸ ಬರೆದವಳು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ವೈಮಸ್ಸುಗಳಿಂದ ಸಮಾಜದ ವಾತಾವರಣ ಕಲುಷಿತಗೊಳ್ಳುತ್ತಿದೆ. ಸಂಸ್ಕೃತಿ ಮರೆತು ತಪ್ಪು ದಾರಿಯಲ್ಲಿ ಸಾಗುತ್ತಿರುವ ಪರಿಣಾಮಕ್ಕೆ ಪ್ರಕೃತಿಯೂ ಮುನಿದಿದೆ. ಪರಕೀಯರ ದಾಸ್ಯದಿಂದ ನಮ್ಮನ್ನು ಮುಕ್ತಗೊಳಿಸಿದ ಕಿತ್ತೂರು ರಾಣಿ ಚೆನ್ನಮ್ಮನ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯುವ ಸಂಕಲ್ಪ ಮಾಡಬೇಕಿದೆ. ರಾಜ್ಯ ಸರ್ಕಾರ ಜನಹಿತ ಕಾಯಲು ಹಲವು ಯೋಜನೆ ರೂಪಿಸಿದೆ. ನಗರದಲ್ಲಿ ಪಂಚಮಸಾಲಿ ಸಮುದಾಯದ ಭವನ ನಿರ್ಮಾಣಕ್ಕೆ ೮ ಗುಂಟೆ ನಿವೇಶನ ಮೀಸಲಿರಿಸಿದೆ. ಸಮಾಜದ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ನಾನು ಸದಾ ಸಿದ್ಧ ಎಂದರು.ರಾಣಿಬೆನ್ನೂರು ಶನೀಶ್ವರ ಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಹೋತನಹಳ್ಳಿ ಸಿಂದಗಿ ಶಾಂತವೀರಮಠದ ಶಂಭುಲಿಂಗ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಸಂಗಯ್ಯ ಹಿರೇಮಠ ಇದ್ದರು. ಇದೇ ಸಂದರ್ಭ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪುರ ಹಾಗೂ ನಿವೃತ್ತ ಶಿಕ್ಷಕಿ ಶೈಲಜಾ ಯಾದವಾಡ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕರಾದ ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಜಿಪಂ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ, ಸಮಾಜದ ತಾಲೂಕು ಅಧ್ಯಕ್ಷ ಮಹಾದೇವಪ್ಪ ಬಾಗಸರ್, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಶಿವೂರ, ಹಾನಗಲ್ಲ ನಗರ ಅಧ್ಯಕ್ಷ ಸಿ. ಮಂಜುನಾಥ, ಮುಖಂಡರಾದ ರಾಜಶೇಖರ ಕಟ್ಟೇಗೌಡರ, ಎ.ಎಸ್. ಬಳ್ಳಾರಿ, ಮಹಾಂತೇಶ ಮೂಡೂರು, ಮಂಜುನಾಥ ನೀಲಗುಂದ, ಬಸವರಾಜ ಅಗಸನಹಳ್ಳಿ, ರೇಣುಕಾ ಅಜಗುಂಡಿ, ಕಲವೀರಪ್ಪ ಪವಾಡಿ, ಉಮೇಶ ಗೌಳಿ, ನಿಂಗಪ್ಪ ಪೂಜಾರ, ಗೀತಾ ಪೂಜಾರ, ಮಧು ಪಾಣೀಗಟ್ಟಿ, ಪಂಚಾಕ್ಷರಿಗೌಡ ಪಾಟೀಲ, ವಿಜಯಕುಮಾರ ದೊಡ್ಡಮನಿ ಇತರರಿದ್ದರು. ಪಂಚಮಸಾಲಿ ಸಮಾಜದ ಮುಖಂಡರು, ಹರ ಸೇನೆ, ಯುವ ಸೇನೆ ಕಾರ್ಯಕರ್ತರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.ಅನಿತಾ ಕುಂಟನಹೊಸಳ್ಳಿ ಪ್ರಾರ್ಥಿಸಿದರು. ವೀರಣ್ಣ ದೊಡ್ಡಮನಿ ಸ್ವಾಗತಿಸಿದರು. ನೀಲಮ್ಮ ಮೂರಮಟ್ಟಿ ಕಾರ್ಯಕ್ರಮ ನಿರೂಪಿಸಿದರು.