ಸಾರಾಂಶ
ಅಂಕೋಲಾ: ಅಂಗನವಾಡಿ ನೌಕರರ ಸಮಸ್ಯೆ ಮುಕ್ತವಾಗಿಸಲು ಹಾಗೂ ಸರ್ಕಾರದ ಗಮನ ಸೆಳೆಯಲು ನಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕಿದೆ ಎಂದು ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಯಮುನಾ ಗಾಂವ್ಕರ ಕರೆ ನೀಡಿದರು.
ಅವರು ಪಟ್ಟಣದಲ್ಲಿ ಅಂಗನವಾಡಿ ನೌಕರರ ಸಮಸ್ಯೆಗಳ ಕುರಿತು ಮಾತನಾಡಿ, ಮಾತೆತ್ತಿದರೆ, ಅಮೃತ ಕಾಲದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಈಗ ಸಬ್ ಕಾ ವಿಶ್ವಾಸ್ ಅಂತಾ ಘೋಷಣೆಗಳಲ್ಲಿ ಮಾತ್ರ ಬಜೆಟ್ ಮುಳುಗಿದೆ.
ರಾಮರಾಜ್ಯ ಎನ್ನುವ ಸರ್ಕಾರದಲ್ಲಿ ಹಸಿವಿನ ಸೂಚ್ಯಾಂಕ 111ನೇ ಸ್ಥಾನದಿಂದ ಮೇಲೆತ್ತಲು ಪ್ರಯತ್ನ ಬಜೆಟ್ನಲ್ಲಿ ಮಾಡಲಿಲ್ಲ. ಐಸಿಡಿಎಸ್ಗೆ ಕಳೆದ ಅವಧಿಯಲ್ಲಿ ₹ 21521.13 ಕೋಟಿ ಇರುವುದನ್ನು ಕಡಿತ ಮಾಡಿ ₹ 21200 ಕೋಟಿಗಿಳಿಸಿ ಮಧ್ಯಂತರ ಬಜೆಟ್ನಲ್ಲಿ ಮಂಡಿಸಲಾಗಿದೆ. ಇದೊಂದು ಮಹಾದ್ರೋಹವಾಗಿದೆ ಎಂದು ದೂರಿದರು.
ಅನುದಾನ ಕಡಿತದಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ವೇತನ ವಿಳಂಬ, ಬಾಡಿಗೆ ಪಾವತಿ, ಪೌಷ್ಟಿಕ ಆಹಾರಕ್ಕಾಗಿ ಹಣ ಬಿಡುಗಡೆ ಕಾಲಾನುಕಾಲಕ್ಕೆ ಬಿಡುಗಡೆ ಇಲ್ಲವೆಂಬುದು ಸ್ಪಷ್ಟವಾಗಿದೆ.
ಈ ಬಜೆಟ್ ಕಡಿತಗೊಳಿಸುವ ಪರಿಕಲ್ಪನೆಯಿರುವ ಸರ್ಕಾರ 2 ಕೋಟಿ ತಾಯಂದಿರ 8 ಕೋಟಿ ಮಕ್ಕಳ ಆರೋಗ್ಯ, ಆಹಾರ, ಶಿಕ್ಷಣದ ಹಕ್ಕನ್ನು ಕಾಪಾಡಲು ಸಾಧ್ಯವೇ? ಅದೇ ರೀತಿಯಲ್ಲಿ ಬಿಸಿಯೂಟ ಕಾರ್ಯಕರ್ತರಿಗೆ ಕಳೆದ 5 ವರ್ಷಗಳಲ್ಲಿ ₹ 1 ಅನುದಾನ, ವೇತನ ಹೆಚ್ಚಳ ಮಾಡಿಲ್ಲ.
ಸರ್ಕಾರದ ಈ ಧೋರಣೆ ಖಂಡಿಸಿ ದೇಶಾದ್ಯಂತ ಮತ್ತೊಮ್ಮೆ ಅಂಗನವಾಡಿ ನೌಕರರು ಪ್ರತಿಭಟನೆಗಿಳಿಯವುದು ಅನಿವಾರ್ಯವಾಗಿದೆ ಎಂದು ಎಚ್ಚರಿಸಿದರು.ಈ ವೇಳೆ ಶಾಂತಾರಾಮ ನಾಯಕ, ಎಚ್.ಬಿ. ನಾಯಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.