ಸಾರಾಂಶ
ಈಕೆ ಗುರುಪುರ ಕಲ್ಲಕಲಂಬಿ ನಿವಾಸಿಯಾಗಿದ್ದು, ಹರೀಶ್ ಶೆಟ್ಟಿ ಅವರ ಪುತ್ರಿ, ಮಂಗಳೂರಿನ ಕಾಲೇಜಲ್ಲಿ ಚಾರ್ಟೆಡ್ ಅಕೌಂಟೆಂಟ್ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಕನ್ನಡಪ್ರಭ ವಾರ್ತೆ ಮಂಗಳೂರು
ಗುರುಪುರದ ಮೂಳೂರು ಗ್ರಾಮದ ಕಲ್ಲಕಲಂಬಿ ಎಂಬಲ್ಲಿ ಶುಕ್ರವಾರ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ ಶ್ವಾನವನ್ನು ರಕ್ಷಿಸಲು ಯತ್ನಿಸಿದ ವಿದ್ಯಾರ್ಥಿನಿಯೂ ದಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.ಮೃತ ವಿದ್ಯಾರ್ಥಿನಿ ಅಶ್ವಿನಿ ಶೆಟ್ಟಿ(೨೧) ಎಂದು ತಿಳಿದುಬಂದಿದೆ. ಈಕೆ ಗುರುಪುರ ಕಲ್ಲಕಲಂಬಿ ನಿವಾಸಿಯಾಗಿದ್ದು, ಹರೀಶ್ ಶೆಟ್ಟಿ ಅವರ ಪುತ್ರಿ, ಮಂಗಳೂರಿನ ಕಾಲೇಜಲ್ಲಿ ಚಾರ್ಟೆಡ್ ಅಕೌಂಟೆಂಟ್ ವಿದ್ಯಾಭ್ಯಾಸ ಮಾಡುತ್ತಿದ್ದಳು.ಎಡೆಬಿಡದೆ ಸುರಿಯುವ ಮಳೆಯಿಂದಾಗಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗ್ಗಿನ ಹೊತ್ತು ಹರೀಶ್ ಶೆಟ್ಟಿ ಅವರು ತಮ್ಮ ಮನೆಯ ದನಗಳನ್ನು ಗದ್ದೆಯಲ್ಲಿ ಮೇಯಲು ಕಟ್ಟಲು ಹೋಗಿದ್ದರು. ಅವರನ್ನುಮನೆಯ ಎರಡು ನಾಯಿಗಳು ಹಿಂಬಾಲಿಸಿ ಹೋಗಿದ್ದವು. ಇದೇ ವೇಳೆ ಮನೆಯ ನಾಯಿಗಳನ್ನು ವಾಪಸ್ ತರಲೆಂದು ಆಶ್ವಿನಿ ಶೆಟ್ಟಿ ಕೂಡ ತೆರಳಿದ್ದರು. ಅಷ್ಟರಲ್ಲಿ ನಾಯಿ ಒದ್ದಾಡುತ್ತಿದ್ದುದನ್ನು ಅಶ್ವಿನಿ ಗಮನಿಸಿದ್ದಾರೆ. ಅಷ್ಟರಲ್ಲೇ ಅಶ್ವಿನಿಗೂ ಅದಾಗಲೇ ಕಡಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿದೆ. ಕೂಡಲೇ ತೀವ್ರ ಅಸ್ವಸ್ಥ ಗೊಂಡ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ವಿದ್ಯುತ್ ತಂತಿ ಬಿದ್ದಿದ್ದ ಸ್ಥಳದಲ್ಲಿ ಮೂರು ನಾಯಿಗಳು ಹಾಗೂ ಒಂದು ಕೇರೆ ಹಾವು ಸತ್ತು ಬಿದ್ದಿದೆ. ಘಟನೆ ಕುರಿತು ಬಜಪೆ ಪೊಲೀಸರು ಕೇಸು ದಾಖಲಿಸಿದ್ದಾರೆ.