ಸಾರಾಂಶ
ಕುಶಾಲನಗರ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿ ಕೌಶಿಕ್ ಅವರಿಗೆ ವಿದ್ಯಾಸಂಸ್ಥೆಯ ಪರವಾಗಿ ಗೌರವಿಸಲಾಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಸಿಇಟಿ ಪರೀಕ್ಷೆ 2025ರಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯದಲ್ಲಿ 875ನೇ ಸ್ಥಾನ ಗಳಿಸಿದ ಕುಶಾಲನಗರ ವಿವೇಕಾನಂದ ಪಿಯು ಕಾಲೇಜಿನ ವಿದ್ಯಾರ್ಥಿ ಕೌಶಿಕ್ ಅವರಿಗೆ ವಿದ್ಯಾಸಂಸ್ಥೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎನ್ ಎನ್ ಶಂಭುಲಿಂಗಪ್ಪ ಮತ್ತು ವಿವೇಕಾನಂದ ಪಿಯು ಕಾಲೇಜ್ ಪ್ರಾಂಶುಪಾಲರಾದ ಕ್ಲಾರಾ ರೇಷ್ಮಾ ಅವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಯ ಪೋಷಕರೊಂದಿಗೆ ಸಾಧಕ ವಿದ್ಯಾರ್ಥಿಯನ್ನು ಸನ್ಮಾನಿಸಿದರು.
ವಿವೇಕಾನಂದ ಪಿಯು ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಈ ಸಾಲಿನ ಪರೀಕ್ಷೆಯಲ್ಲಿ ಶೇಕಡ 96 ಅಂಕ ಪಡೆದಿರುವ ಕೌಶಿಕ್ ಉತ್ತಮ ಸಾಧನೆ ಗಳಿಸಿರುವ ಬಗ್ಗೆ ಸಂಸ್ಥೆಯ ಅಧ್ಯಕ್ಷರಾದ ಶಂಭುಲಿಂಗಪ್ಪ ಅವರು ಸಂತಸ ವ್ಯಕ್ತಪಡಿಸಿ ಶುಭ ಕೋರಿದರು. ಉನ್ನತ ವ್ಯಾಸಂಗಕ್ಕೆ ಸಂಸ್ಥೆಯ ಮೂಲಕ ಸಹಾಯ ಹಸ್ತ ನೀಡುವ ಭರವಸೆ ವ್ಯಕ್ತಪಡಿಸಿದರು.ಕೌಶಿಕ್ ಕುಶಾಲನಗರ ಗೊಂದಿ ಬಸವನಹಳ್ಳಿಯ ನಿವಾಸಿ ಆಟೋ ಚಾಲಕರಾಗಿರುವ ಗಂಗರಾಜು ಮತ್ತು ಲತಾ ಮಣಿ ಅವರ ಪುತ್ರ.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ಕೌಶಿಕ್ ತಾನು ಇಂಜಿನಿಯರಿಂಗ್ ವಿಭಾಗದಲ್ಲಿ ಉನ್ನತ ಮಟ್ಟದ ಶಿಕ್ಷಣ ಪಡೆಯುವ ಗುರಿ ಹೊಂದಿರುವುದಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಈ ಸಂದರ್ಭ ನಡೆದ ಸರಳ ಸಮಾರಂಭದಲ್ಲಿ ಸಂಸ್ಥೆಯ ಆಡಳಿತ ಅಧಿಕಾರಿ ಮಹೇಶ್ ಅಮೀನ್, ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲರಾದ ಟಿ ಎ ಲಿಖಿತ, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿ ಕೌಶಿಕ್ ಪೋಷಕರು ಇದ್ದರು.