ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರದ್ದುಪಡಿಸಿರುವ ಎಂಟು ಕೋರ್ಸಗ ಳನ್ನು ಮುಂದುವರಿಸುವಂತೆ ಆಗ್ರಹಿಸಿ ಹಾಗೂ ಸರದಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟವನ್ನು ಬೆಂಬಲಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಹಾವೇರಿ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಶುಕ್ರವಾರ ಧರಣಿ ನಡೆಸಲಾಯಿತು.
ಶಿಗ್ಗಾಂವಿ: ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ರದ್ದುಪಡಿಸಿರುವ ಎಂಟು ಕೋರ್ಸಗ ಳನ್ನು ಮುಂದುವರಿಸುವಂತೆ ಆಗ್ರಹಿಸಿ ಹಾಗೂ ಸರದಿ ಅನಿರ್ದಿಷ್ಟಾವಧಿ ಉಪವಾಸ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟವನ್ನು ಬೆಂಬಲಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಹಾವೇರಿ ಜಿಲ್ಲಾ ಸಮಿತಿಗಳ ನೇತೃತ್ವದಲ್ಲಿ ಶುಕ್ರವಾರ ಧರಣಿ ನಡೆಸಲಾಯಿತು.
ಪ್ರತಿಭಟನಾಕಾರರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕುಲಸಚಿವರ ಕಾರ್ಯದರ್ಶಿ ಶಹಜಹಾನ್ ಮುದಕವಿ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆ ಉದ್ದೇಶಿಸಿ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಏಕಾಏಕಿ ಎಂಟು ಕೋರ್ಸಗಳನ್ನು ರದ್ದುಪಡಿಸಿರುವ ಕ್ರಮಕ್ಕೆ ಹೊಣೆ ಯಾರು ಎಂಬುದನ್ನು ಸ್ಪಷ್ಪಪಡಿಸಬೇಕು. ಆಡಳಿತ ಮಂಡಳಿಯ ಲೋಪದೋಷಗಳಿಂದ ವಿವಿ ಅಭಿವೃದ್ಧಿ ಕುಂಠಿತವಾಗಿದ್ದು, ರಾಜ್ಯ ಸರ್ಕಾರ ಈ ಕುರಿತು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಸಮಸ್ಯೆ ಪರಿಹರಿಸಲು ಒತ್ತಾಯ: ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಅತಿಥಿ ಉಪನ್ಯಾಸಕರನ್ನು ಹಲವು ವರ್ಷಗಳಿಂದ ನೇಮಕ ಮಾಡಿಕೊಂಡು, ಯಾವುದೇ ನೋಟಿಸ್ ನೀಡದೆ ದಿಢೀರ್ ಕೆಲಸದಿಂದ ಬಿಡುಗಡೆ ಮಾಡಿರುವುದು ಸರಿಯಲ್ಲ. ವಾರ್ಷಿಕ ಅವಧಿ ಮುಗಿಯುವವರೆಗೆ ಅವರನ್ನು ಸೇವೆಯಲ್ಲಿ ಮುಂದುವರಿಸಬೇಕು. ಬಾಕಿ ವೇತನ ಬಿಡುಗಡೆ ಸೇರಿದಂತೆ ಉಪವಾಸ ಧರಣಿ ನಿರತ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಲು ಆಡಳಿತ ಮಂಡಳಿ ಹಾಗೂ ಉನ್ನತ ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಹೇಳಿದರು.ಪ್ರಗತಿಪರ ಚಿಂತಕ ಮಂಜುನಾಥ ಕರ್ಜಗಿ ಮಾತನಾಡಿದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ನಗವತ ಮಾತನಾಡಿ, ಪಿಎಚ್ಡಿ ಸಂಶೋಧನಾ ವಿದ್ಯಾರ್ಥಿಗಳು ಸೇರಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ದೊರೆಯಬೇಕಾದ ವಿದ್ಯಾರ್ಥಿ ವೇತನವನ್ನು ಬಾಕಿ ಉಳಿಸದೆ ಕೂಡಲೇ ಬಿಡುಗಡೆ ಮಾಡಬೇಕು ಎಂದರು.ಕಾಲೇಜು ಶುಲ್ಕ ಹಾಗೂ ವಿದ್ಯಾರ್ಥಿ ವೇತನದ ಗೊಂದಲಗಳ ಕುರಿತು ವಿದ್ಯಾರ್ಥಿಗಳಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಈ ಕುರಿತು ನೋಟಿಸ್ ಪ್ರಕಟಿಸಿ, ಯಾವುದೇ ವಿದ್ಯಾರ್ಥಿ ವಿದ್ಯಾರ್ಥಿ ವೇತನದಿಂದ ವಂಚಿತನಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಉಪವಾಸ ಧರಣಿ ನಿರತ ಅತಿಥಿ ಉಪನ್ಯಾಸಕರಾದ ಡಾ. ಅಭಿಲಾಷ ಎಚ್.ಕೆ., ಡಾ. ಶಿಲಿನಾ ಕೋಟೆ ಎನ್., ಡಾ. ಸುವರ್ಣ ಶೃಂಗೇರಿ, ಡಾ. ನದಾಫ್ ಎಚ್.ಎಚ್., ಎಸ್ಎಫ್ಐ ತಾಲೂಕು ಕಾರ್ಯದರ್ಶಿ ಅಣ್ಣಪ್ಪ ಕೊರವರ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಖಲಂದರ್ ಅಲ್ಲಿಗೌಡ್ರು, ಜಿಲ್ಲಾ ಸಂಚಾಲಕ ವೀರಣ್ಣ ಗಡ್ಡಿಯಾರ, ಪ್ರಬುದ್ಧ ವಿದ್ಯಾರ್ಥಿ ಸಂಘಟನೆ ಜಿಲ್ಲಾ ಸಂಚಾಲಕ ಚನ್ನಬಸವ ಸಿದಣ್ಣನವರ, ಎಸ್ಎಫ್ಐ–ಡಿವೈಎಫ್ಐ ಮುಖಂಡರಾದ ರವಿ ಬಂಕಾಪುರ, ನಾಗರಾಜ, ಕೃಷ್ಣ್ಣಪ್ಪ ಗದಗ, ಯೋಗೇಶ ಗೌಡ್ರು, ಕುಮಾರ್ ಹಡಪದ್, ಕಾರ್ತಿಕ್ ನೀರಲಗಿ, ಚೇತನ್ ಕುಮಾರ್, ಫಾತಿಮಾ ಬೇಗಮ್, ಭಾಗ್ಯಶ್ರೀ ಕೊತಂಬರಿ, ಪ್ರೀತಿ ಹಿರೇಮಠ, ಪೂಜಾ ಸುತಗಟ್ಟಿ, ಪವಿತ್ರ ಹರಿಕೇರಿ, ರಕ್ಷಿತಾ ಓಲೇಕಾರ್ ಪಾಲ್ಗೊಂಡಿದ್ದರು.