ರಾಮನಗರ: ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಹೊಣೆಗಾರಿಕೆ, ಶಿಸ್ತು, ಸಂಯಮ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಇವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಸಾಧನೆಗೆ ಮುನ್ನುಡಿಯಾಗಲಿದೆ ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು ಕಿವಿಮಾತು ಹೇಳಿದರು.

ತಾಲೂಕಿನ ಯರೇಹಳ್ಳಿ ಗ್ರಾಮದ ಶ್ರೀ ಮಾರಮ್ಮ ದೇವಿ ದೇವಾಲಯದ ಆವರಣದಲ್ಲಿ ಮಾಗಡಿ ಕ್ಷೇತ್ರದ ಶಾಸಕ ಎಚ್.ಸಿ.ಬಾಲಕೃಷ್ಣರ 61ನೇ ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರು ವಿಶ್ವ ವಿದ್ಯಾಲಯ, ಜ್ಞಾನ ವಿಕಾಸ್ ವಿದ್ಯಾ ಸಂಘ ಹಾಗೂ ಜ್ಞಾನ ವಿಕಾಸ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಅಂಡ್ ಕಾಮರ್ಸ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ವಾರ್ಷಿಕ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು ಹಾಗೂ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಡುಗೊರೆ ವಿತರಿಸಿ ಅವರು ಮಾತನಾಡಿದರು.

ಶಿಬಿರದ ಅನುಭವಧಾರೆಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಸಮರ್ಥ ನಾಯಕತ್ವ ಹಾಗೂ ಸಮಾಜಪರ ಚಟುವಟಿಕೆಗಳನ್ನು ನಡೆಸಲು ಸ್ಪೂರ್ತಿ ನೀಡುತ್ತವೆ. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸುವ ಮೂಲಕ ಪೋಷಕರು, ಶಿಕ್ಷಣ ಸಂಸ್ಥೆ ಹಾಗೂ ಗ್ರಾಮಕ್ಕೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದು ಹೇಳಿದರು.

ಬಡವರಿಗಾಗಿ ಮಿಡಿಯುವ ಹೃದಯ:

ಸಾರ್ವಜನಿಕ ಸೇವೆಯ ಮೂಲಕ ವ್ಯಕ್ತಿತ್ವವನ್ನು ವೃದ್ಧಿಗೊಳಿಸುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳನ್ನು ಲೋಕ ಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಅಲ್ಲದೆ, ರಾಷ್ಟ್ರಪ್ರೇಮ ಮತ್ತು ಸೇವಾಭಾವನೆಗಳನ್ನು ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.


ಜ್ಞಾನ ವಿಕಾಸ್ ವಿದ್ಯಾ ಸಂಸ್ಥೆ ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಕ್ರೀಡೆ ಮೂಲಕ ಮಹತ್ತರ ಸಾಧನೆಗಳನ್ನು ಮಾಡಿ ಹೆಸರು ಮಾಡುತ್ತಿರುವ ಪ್ರತಿಷ್ಠಿತ ವಿದ್ಯಾದೇಗುಲ. ಸಂಸ್ಥೆಯ ಅಧ್ಯಕ್ಷರಾದ ಸಿ.ಎಂ.ಲಿಂಗಪ್ಪರವರ ಹೃದಯ ಬಡವರು ಮತ್ತು ಬಡ ಮಕ್ಕಳಿಗಾಗಿ ಸದಾ ಮಿಡಿಯುತ್ತಿರುತ್ತದೆ. ಅವರ ಶಿಕ್ಷಣ ಸಂಸ್ಥೆಯಲ್ಲಿ ಎಷ್ಟೋ ಬಡ ಮಕ್ಕಳ ಶುಲ್ಕವನ್ನು ಕಡಿಮೆ ಮಾಡಿ ಶಿಕ್ಷಣ ನೀಡಿದ ಉದಾಹರಣೆಗಳಿವೆ ಎಂದು ಯರೇಹಳ್ಳಿ ಮಂಜು ಶ್ಲಾಘಿಸಿದರು.

ಶಿಕ್ಷಣಕ್ಕಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ :

ತಾಪಂ ಮಾಜಿ ಅಧ್ಯಕ್ಷ ಜಗದೀಶ್ ಮಾತನಾಡಿ, ಮನುಷ್ಯ ಪರಿಪೂರ್ಣನಾಗಲು ಕೇವಲ ನಾಲ್ಕು ಗೋಡೆಯ ನಡುವಿನ ಪಠ್ಯಪುಸ್ತಕದ ಶಿಕ್ಷಣ ಸಾಲದು. ರಾಷ್ಟ್ರೀಯ ಸೇವಾ ಯೋಜನೆಯಡಿ ಶಿಕ್ಷಣದ ಅರಿವು ಮೂಡಿಸಿದಾಗ ಶಿಕ್ಷಣಕ್ಕೆ ನಿಜವಾದ ಅರ್ಥ ಸಿಗುತ್ತವೆ. ಯುವಜನರ ಬುದ್ಧಿಮತ್ತೆ ವೃದ್ಧಿಸಲು ಶಿಬಿರಗಳು ಸಹಕಾರಿ. ಪೋಷಕರು ಮಕ್ಕಳಿಗೆ ಆಸ್ತಿ ಮಾಡಬೇಕಾಗಿಲ್ಲ. ಉತ್ತಮ ಶಿಕ್ಷಣ ನೀಡಿದರೆ ಅದಕ್ಕಿಂತ ದೊಡ್ಡ ಆಸ್ತಿ ಮತ್ತೊಂದಿಲ್ಲ. ಹಾಗೆಯೇ ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉದ್ಯೋಗ ಹಿಡಿಯುವುದೇ ಜೀವನದ ಗುರಿ ಆಗಬಾರದು. ಸಮಾಜ ಮುಖಿ ವ್ಯಕ್ತಿತ್ವ ರೂಢಿಸಿಕೊಂಡು ಸಮಾಜಕ್ಕೆ ಉಪಕಾರ ಮಾಡುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿ. ಅವುಗಳನ್ನು ಇಂತಹ ಶಿಬಿರಗಳು ಕಲಿಸಿಕೊಡುತ್ತವೆ ಎಂದರು.

ಗ್ರಾಪಂ ಸದಸ್ಯ ಮಂಚೇಗೌಡ ಮಾತನಾಡಿ, ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಜೀವನದಲ್ಲಿ ಏನು ಬೇಕಾದರು ಸಾಧನೆ ಮಾಡಬಹುದು. ಇದಕ್ಕಾಗಿ ಶಿಸ್ತು ಸಂಯಮ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು. ಸ್ವಂತ ಉದ್ಯಮ ಸ್ಥಾಪಿಸಿ ಉದ್ಯೋಗದಾತರಾಗಬೇಕು ಎಂದು ಕಿವಿಮಾತು ಹೇಳಿದ ಅವರು, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮುತ್ಸದ್ಧಿ ರಾಜಕಾರಣಿ. ರಾಮನಗರ ಕ್ಷೇತ್ರದಲ್ಲಿ ಬಡವರಿಗೆ ನಿವೇಶನ, ಸೂರು, ರೈತರಿಗೆ ಭೂಮಿ, ಶಿಕ್ಷಣ, ಆರೋಗ್ಯ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಸಾಕಷ್ಟು ಕೊಡುಗೆ ನೀಡಿದವರು. ರಾಜಕಾರಣಿಗಳಿಗೆ ಸಿ.ಎಂ.ಲಿಂಗಪ್ಪ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ಶಿಬಿರಾರ್ಥಿಗಳಾದ ರೇಣುಕಾ ಮತ್ತು ಮಹಾಲಕ್ಷ್ಮಿ ಶಿಬಿರದ ಅನುಭವ ಹಂಚಿಕೊಂಡರು. ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜೆವಿಐಟಿ ಕಾರ್ಯದರ್ಶಿ ಗಂಗಾಧರ್, ಪ್ರಾಂಶುಪಾಲರಾದ ರೂಪಾ, ಗ್ರಾಪಂ ಸದಸ್ಯ ನಂದೀಶ್, ಮುಖಂಡರಾದ ಸಂಜೀವಯ್ಯ, ಹಾಪ್ ಕಾಮ್ಸ್ ಪುಟ್ಟಸ್ವಾಮಿ, ಧನಂಜಯ್ಯ, ದೊಡ್ಡಿ ಶಿವರಾಜು, ಜೋಗಿದೊಡ್ಡಿ ನಾಗಣ್ಣ, ಮಹದೇವಯ್ಯ ಇತರರು ಉಪಸ್ಥಿತರಿದ್ದರು.

ಕೋಟ್‌.............

ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಅನುಭವಿ ರಾಜಕಾರಣಿ. 5 ಬಾರಿ ವಿಧಾನಸೌಧ ಪ್ರವೇಶಿಸಿದವರು. ಹಲವಾರು ಪಕ್ಷಗಳಿಂದ ಕ್ಷೇತ್ರವನ್ನು ಪ್ರತಿನಿಧಿಸಿದರೂ ಸಚಿವರಾಗುವ ಯೋಗ ಬಂದಿಲ್ಲ. ಹಿರಿಯ ರಾಜಕಾರಣಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪನವರ ಬೆಂಬಲದಿಂದ ಬಾಲಕೃಷ್ಣ ಅವರಿಗೆ ಸಚಿವ ಸ್ಥಾನ ಸಿಗಲಿ. ಇದರಿಂದ ನೀರಾವರಿ ಸೇರಿದಂತೆ ಅನೇಕ ಯೋಜನೆಗಳು ತ್ವರಿಗತಿಯಲ್ಲಿ ಪೂರ್ಣಗೊಳ್ಳಲು ಸಹಕಾರಿಯಾಗಲಿದೆ.

-ಯರೇಹಳ್ಳಿ ಮಂಜು, ನಿರ್ದೇಶಕರು, ಬಿಡಿಸಿಸಿ ಬ್ಯಾಂಕ್

1ಕೆಆರ್ ಎಂಎನ್ 4.ಜೆಪಿಜಿ

ರಾಮನಗರ ತಾಲೂಕಿನ ಯರೇಹಳ್ಳಿ ಮಾರಮ್ಮದೇವಿ ದೇವಾಲಯದ ಆವರಣದಲ್ಲಿ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣರ 61ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ವಾರ್ಷಿಕ ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿಬಿರಾರ್ಥಿಗಳು ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಡುಗೊರೆ ವಿತರಿಸಿದರು.