ಕನ್ನಡಪ್ರಭ ವಾರ್ತೆ ಪಾಂಡವಪುರ
ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ವಿದ್ಯಾಭ್ಯಾಸದೊಂದಿಗೆ ಹೆಚ್ಚು ಅಂಕ ಗಳಿಸಿ ದೊಡ್ಡ ಸಾಧನೆ ಮಾಡಬೇಕು ಎಂದು ಪಿಎಸ್ಎಸ್ಕೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಶೀಲಾ ಹೇಳಿದರು.ಪಿಎಸ್ ಎಸ್ ಕೆ ಪ್ರೌಢಶಾಲೆಯಲ್ಲಿ ನಡೆದ ಉಚಿತ ನೋಟ್ ಪುಸಕ ವಿತರಣೆ ಹಾಗೂ 10ನೇ ತರಗತಿ ಮಕ್ಕಳಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಮಕ್ಕಳು ಹೆಚ್ಚು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇದರಿಂದ ಓದುವ ಕಡೆಗೆ ಗಮನ ಕಡಮೆಯಾಗಲಿದೆ ಎಂದರು.
ಹಿಂದಿನ ದಿನಗಳಲ್ಲಿ ಶೇ.35ರಷ್ಟು ಪಡೆಯುವುದೇ ದೊಡ್ಡ ಸಾಧನೆಯಾಗಿತ್ತು. ಆದರೆ, ಈಗ ಶೇ.90ರಷ್ಟು ಅಂಕ ಗಳಿಸಿದರೂ ಅದು ಸಾಧನೆಯಾಗುವುದಿಲ್ಲ. ಶೇ.100ರಷ್ಟು ಅಂಕ ಗಳಿಸಿದರೆ ಮಾತ್ರ ದೊಡ್ಡ ಸಾಧನೆ ಮಾಡಿದಂತಾಗುತ್ತದೆ. ಹೀಗಾಗಿ ಹೆಚ್ಚು ಅಂಕ ಗಳಿಕೆಗೆ ಮುಂದಾಗಬೇಕಿದೆ ಎಂದರು.ಇದೇ ವೇಳೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ಕೀರ್ತಿ, ನಮ್ರತಾ, ವಿನುತಾ, ಅಮೃತಾ, ರಾಕೇಶ್, ಕಾರ್ತಿಕ್ ಅವರನ್ನು ಅಭಿನಂದಿಸಲಾಯಿತು. ಜೊತೆಗೆ ವಯೋ ನಿವೃತ್ತಿಗೊಂಡ ಮುಖ್ಯ ಶಿಕ್ಷಕ ಆರ್.ಕೃಷ್ಣೇಗೌಡ ಹಾಗೂ ಪಿಎಸ್ಎಸ್ಕೆ ನೌಕರೆ ಸುಮತಿ ಅವರನ್ನು ಅಭಿನಂದಿಸಲಾಯಿತು. ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಲಾಯಿತು.
ಈ ವೇಳೆ ಸಂಸ್ಥೆ ಗೌರವಾ ಕಾರ್ಯದರ್ಶಿ ಕ್ಯಾತನಹಳ್ಳಿ ನಂದೀಶ್, ಪ್ರಭಾರ ಮುಖ್ಯ ಶಿಕ್ಷಕ ಹರಿಪ್ರಸಾದ್, ತೋಟಗಾರಿಕೆ ಶಿಕ್ಷಕ ತಮ್ಮಣ್ಣ, ದಾನಿಗಳಾದ ಕಿರಣ್ ಕುಮಾರ್, ಮೋಹನ್ ಕುಮಾರ್, ಪ್ರೌಢಶಾಲೆಯ ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.
ಜೂ.24ರ ದಲಿತರ ಸ್ಥಾನಮಾನ ವಿಚಾರ ಸಂಕಿರದಲ್ಲಿ ಭಾಗವಹಿಸಿ: ಕೆಂಪಯ್ಯ ಮನವಿ
ಹಲಗೂರು:ಪ್ರಜಾಪ್ರಭುತ್ವದಲ್ಲಿ ದಲಿತರ ಸ್ಥಾನಮಾನ ಕುರಿತು ಜೂ.24ರಂದು ಬೆಂಗಳೂರಿನ ಶಿವಾನಂದ ಸರ್ಕಲ್ ಸಮೀಪದ ಗಾಂಧಿ ಭವನದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟನೆ ರಾಜ್ಯ ಸಂಘಟನಾ ಸಂಚಾಲಕ ಸಾಗ್ಯ ಕೆಂಪಯ್ಯ ಮನವಿ ಮಾಡಿದರು.ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬುದ್ಧ-ಬಸವ- ಅಂಬೇಡ್ಕರ್ ಜಯಂತಿ ಅಂಗವಾಗಿ ಪ್ರಜಾಪ್ರಭುತ್ವದಲ್ಲಿ ದಲಿತರ ಸ್ಥಾನಮಾನ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ. ಕಾರ್ಯಕ್ರಮವನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಉದ್ಘಾಟಿಸಲಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾದಸಂಸ ರಾಜ್ಯ ಸಂಚಾಲಕರಾದ ಶ್ಯಾಮ್ರಾವ್ ಘಾಟ್ಗೆ ವಹಿಸಲಿದ್ದಾರೆ. ಪ್ರಜಾಪ್ರಭುತ್ವದಲ್ಲಿ ದಲಿತರ ಸ್ಥಾನಮಾನ ವಿಷಯದ ಕುರಿತು ಸಾಹಿತಿ ಹಾಗೂ ಲೇಖಕರಾದ ಕೋಟಗಹಳ್ಳಿ ರಾಮಯ್ಯ ವಿಷಯ ಮಂಡನೆ ಮಾಡಲಿದ್ದಾರೆ ಎಂದರು.
ಇದೇ ವೇಳೆ ಹುರುಗಲವಾಡಿ ರಾಮಯ್ಯ ತಂಡ ಹಾಗೂ ಸ್ಟೇಟ್ ರಾಜು ಆನೇಕಲ್ ತಂಡ ಕ್ರಾಂತಿಗೀತೆಗಳನ್ನು ಹಾಡಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಜನಪ್ರಿಯ ಶಾಸಕರು ಮತ್ತು ಪ್ರಗತಿಪರ ಚಿಂತಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಈ ವೇಳೆ ಹುಲ್ಲೇಗಾಲ ಶಿವಕುಮಾರ್, ಡಿ.ಸಿದ್ದಯ್ಯ, ಕಾಳಯ್ಯ, ನಾಗರಾಜು, ಸೋಮಶೇಖರ್, ಕುಮಾರ್ , ಈರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.