ಕಾಪು: ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧದಿಂದಾಗಿ ಅಡುಗೆ ಅನಿಲ ಪೂರೈಕೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ ಪಾಜಕ ಕ್ಷೇತ್ರದಲ್ಲಿರುವ ಪೇಜಾವರ ಮಠದ ಆನಂದ ತೀರ್ಥ ವಿದ್ಯಾಸಂಸ್ಥೆಗಳ‍ಲ್ಲಿ ವಿದ್ಯಾರ್ಥಿಗಳು ಕಟ್ಟಿಗೆಯಲ್ಲಿ ಅಡುಗೆ ತಯಾರಿಸಿ, ಅಡುಗೆ ಅನಿಲ ಕೊರತೆ ಎದುರಿಸಲು ತಾವು ಸಿದ್ಧ ಎಂದು ತೋರಿಸಿಕೊಟ್ಟರು.

ಶಾಲೆಯ 5ರಿಂದ 9ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನದಲ್ಲಿ ತಾವೇ ಮನೆಯಿಂದ ತರಕಾರಿಗಳನ್ನು ತಂದು, ಅವುಗಳನ್ನು ಹೆಚ್ಚಿ, ಒಲೆಗಳ‍ನ್ನು ಹೂಡಿ, ಅವುಗಳಲ್ಲಿ ಸೌದೆ ಬಳಸಿ ಅನ್ನ, ಪಲ್ಯ, ಸಾಂಬಾರುಗಳನ್ನು ತಯಾರಿಸಿದರು.

ಒಂದು ವೇಳೆ ಅಡುಗೆ ಅನಿಲ ಪೂರೈಕೆಯಲ್ಲಿ ಇನ್ನೂ ವಿಳಂಬವಾದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು, ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು, ಹೇಗೆ ಆತ್ಮನಿರ್ಭರವಾಗಬೇಕು ಎಂಬುದನ್ನು ತಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಹೇಳಿಕೊಡುವ ಉದ್ದೇಶದಿಂದ ಶಿಕ್ಷಕರು ಈ ಕಾರ್ಯಕ್ರಮ ಆಯೋಜಿಸಿದ್ದು, ಪೋಷಕರಿಂದಲೂ ಶ್ಲಾಘನೆಗೆ ಪಾತ್ರವಾಯಿತು.