ಹಗರಿಬೊಮ್ಮನಹಳ್ಳಿ: ಶಿಸ್ತು, ಜವಾಬ್ದಾರಿ, ಸೇವಾ ಮನೋಭಾವಂತಹ ಮೌಲ್ಯಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಬೆಳೆಸಲು ಪೂರಕವಾಗುತ್ತವೆ. ಶಾಲಾ ಹಂತಗಳಲ್ಲಿ ಅವಶ್ಯಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾಯಕತ್ವ ಮನೋಭಾವ ರೂಢಿಸಿಕೊಳ್ಳಬೇಕು ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ಎಸ್.ಕೊಟ್ರೇಶ್ ಸಲಹೆ ನೀಡಿದರು.ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಿಬಿಎಸ್ಇ ಶಾಲೆಯಲ್ಲಿ ಹಿಂದೂ ಸಾಮ್ರಾಜ್ಯ ದಿನದ ಅಂಗವಾಗಿ ಆಯೋಜಿಸಲಾಗಿದ್ದ ನಾಯಕತ್ವ ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ವಿದ್ಯಾರ್ಥಿಗಳು ಅಧ್ಯಯನಶೀಲರಾಗುವ ಜೊತೆಗೆ ಪಠ್ಯೇತರ ಚಟುವಟಿಕೆಗಳತ್ತ ಅರಿವನ್ನು ವಿಸ್ತರಿಸಬೇಕು. ತಮ್ಮ ಜ್ಞಾನವನ್ನು ಹಂಚುವ ಮನೋಭಾವದ ಮೂಲಕ ಆದರ್ಶ ವ್ಯಕ್ತಿತ್ವ ಹೊಂದಬೇಕು ಎಂದು ಅಭಿಪ್ರಾಯಪಟ್ಟರು.ಕೇಂದ್ರದ ಕಾರ್ಯದರ್ಶಿ ಬಸವನಗೌಡ ಮಾತನಾಡಿ, ಹಿಂದೂ ಸಾಮ್ರಾಜ್ಯ ದಿನದ ಪವಿತ್ರ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಾಯಕತ್ವ ಜವಾಬ್ದಾರಿ ಸ್ವೀಕರಿಸುತ್ತಿರುವುದು ಔಚಿತ್ಯಪೂರ್ಣವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಪಾಲಿಸುತ್ತಾ ಧೈರ್ಯ, ದೇಶಭಕ್ತಿ, ಸೇವಾ ಮನೋಭಾವ ಮತ್ತು ರಾಷ್ಟ್ರ ನಿಷ್ಠೆಯೊಂದಿಗೆ ಸಮಾಜಮುಖಿ ನಾಯಕತ್ವ ಬೆಳೆಸಿಕೊಳ್ಳಿ ಎಂದರು.
ಶಾಲೆಯ ಪ್ರಾಂಶುಪಾಲ ರಂಗನಾಥ್ ನೂತನ ಶಾಲಾ ನಾಯಕರು, ಉಪ ನಾಯಕರು ಹಾಗೂ ನಾನಾ ವಿಭಾಗಗಳ ನಾಯಕರಿಗೆ ಸಮಯಪಾಲನೆ, ಪರಿಸರ ಸಂರಕ್ಷಣೆ, ಮೌಲ್ಯಾಧರಿತ ಶಿಕ್ಷಣದ ಬೆಳವಣಿಗೆಗೆ ಪ್ರಾಮಾಣಿಕರಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಂತೆ ಪ್ರತಿಜ್ಞಾ ವಿಧಿ ಬೋಧಿಸಿ ಬ್ಯಾಡ್ಜ ಹಾಗೂ ಅಧಿಕಾರದ ಚಿಹ್ನೆಗಳನ್ನು ಪ್ರದಾನ ಮಾಡಿದರು.ದೈಹಿಕ ಶಿಕ್ಷಕರಾದ ಮಧುಕರ್, ಪ್ರವೀಣ್, ಶಿಕ್ಷಕರಾದ ಕೆ.ನಾಗರಾಜ್, ಫಕೀರಜ್ಜ, ರೇಣುಕಾ, ಜ್ಯೋತಿ ಹಾಗೂ ವಂದನಾ ಉಪಸ್ಥಿತರಿದ್ದರು. ಚೈತ್ರಾ, ಮಹೇಶ್ ಮತ್ತು ಬಿ.ಟಿ.ನಾಗರಾಜ್ ನಿರ್ವಹಿಸಿದರು.