ಸಾರಾಂಶ
ಗದಗ: ವಿದ್ಯಾರ್ಥಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ವಿದ್ಯಾರ್ಥಿ ಮೊದಲು ಈ ಜಗತ್ತಿನಲ್ಲಿ ಕಿವುಡನಾಗಿರಬೇಕು. ಸಾಧಿಸಿದ ನಂತರ ಮೌನಿಯಾಗಿರಬೇಕು. ಅಂದಾಗ ಮಾತ್ರ ತರಗತಿಯಲ್ಲಿ ಪಾಠ ಪ್ರವಚನಗಳು ಸುಗಮವಾಗಿ ನಡೆಯಲು ಸಾಧ್ಯ ಎಂದು ಕೆ.ವಿ.ಎಸ್.ಆರ್. ಪಪೂ ಮಹಾವಿದ್ಯಾಲಯದ ಅರ್ಥಶಾಸ್ತ್ರದ ಹಿರಿಯ ಉಪನ್ಯಾಸಕ ವಿ.ಎಸ್. ದಲಾಲಿ ಹೇಳಿದರು.
ನಗರದ ಸನ್ಮಾರ್ಗ ಪಪೂ ಮಹಾವಿದ್ಯಾಲಯದಲ್ಲಿ ಜರುಗಿದ ಒಂದು ದಿನದ ಅರ್ಥಶಾಸ್ತ್ರ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ತುಂಬಾ ಶಿಸ್ತಿನಿಂದ, ಪ್ರಾಮಾಣಿಕತೆಯಿಂದ ಅಂದಿನ ಕೆಲಸವನ್ನು ಅಂದೇ ಅಚ್ಚುಕಟ್ಟಾಗಿ ನಿರ್ವಹಿಸಿದಾದ್ದರೆ.
ಮುಂದೆ ಜೀವನದಲ್ಲಿ ನೀವು ಖಂಡಿತ ಉತ್ತಮ ನಾಗರಿಕರಾಗುವುದರಲ್ಲಿ ಸಂದೇಹವೇ ಇಲ್ಲ. ಅಂಥಹ ಉದಾತ್ತ ಚಿಂತನೆಯಿಂದೊಡಗೂಡಿದ ಬಾಳು-ಬದುಕು ನಿಮ್ಮದಾಗಲಿ ಎಂದು ಹಾರೈಸಿದರು.
ನಂತರ ಅರ್ಥಶಾಸ್ತ್ರ ವಿಷಯವನ್ನು ಹೇಗೆ ಅರ್ಥೈಯಿಸಿಕೊಳ್ಳಬೇಕು? ಪ್ರಶ್ನೆ ಪತ್ರಿಕೆ ಹೇಗೆ ಬಿಡಿಸಬೇಕು? ಯಾವ ಯಾವ ಪ್ರಶ್ನೆಗೆ ಎಷ್ಟು ವೇಳೆ ವ್ಯಯಿಸಬೇಕು ಎಂಬುದೆಲ್ಲವನ್ನು ಅನೇಕ ಕಥೆ, ದೃಷ್ಠಾಂತಗಳೊಂದಿಗೆ ವಿದ್ಯಾರ್ಥಿಗಳ ಮನ ಮುಟ್ಟುವಂತೆ ನಿರೂಪಿಸಿದರು.
ಸರಳ ಮತ್ತು ಬೇಗನೆ ನೆನಪಿಗೆ ಬರುವ, ಸಂಪೂರ್ಣ ಅಂಕಗಳನ್ನು ಗಳಿಸುವ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕೇ ಹೊರತು ಕ್ಲಿಷ್ಟವಾದವುಗಳನ್ನು, ಅಂಕ ಕಡಿತಗೊಳಿಸುವ ಪ್ರಶ್ನೆಗಳನ್ನು ಆಯ್ಕೆ ಮಾಡಿಕೊಳ್ಳಬಾರದು.
ಪ್ರಶ್ನೆ ಪತ್ರಿಕೆಯಲ್ಲಿರುವ ಪ್ರಶ್ನೆ ನಂಬರಗಳನ್ನು ತಮ್ಮ ಉತ್ತರ ಪತ್ರಿಕೆಯಲ್ಲಿ ತಪ್ಪದೇ ಹಾಕಬೇಕೇ ಹೊರತು ತಮಗೆ ತಿಳಿದ ನಂಬರಗಳಲ್ಲ ಎಂದು ತಿಳಿಸಿದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಹನ ಕಾರ್ಯಕ್ರಮ ಜರುಗಿತು.
ಈ ವೇಳೆ ಪ್ರಾ.ಪ್ರೋ.ಪ್ರೇಮಾನಂದ ರೋಣದ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಎಂ.ಸಿ. ಹಿರೇಮಠ, ಹಿರಿಯ ಆಂಗ್ಲ ಉಪನ್ಯಾಸಕ ಎಂ.ಪಿ.ಸಂಕನೂರ ಸೇರಿ ಉಪನ್ಯಾಸಕರು, ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು.
ಕನ್ನಡ ಉಪನ್ಯಾಸಕ ಹೇಮಂತ ದಳವಾಯಿ ಸ್ವಾಗತಿಸಿದರು. ಉಪನ್ಯಾಸಕ ಡಿ.ಬಿ.ಕುಲಕರ್ಣಿ ವಂದಿಸಿದರು.