ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ವಿದ್ಯಾರ್ಥಿಗಳು ಮನೆಯಲ್ಲಿ ಪಾಲಕರ ಮತ್ತು ಶಾಲೆಯಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದು ಅಥಣಿ ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.ತಾಲೂಕಿನ ಘಟನಟ್ಟಿ ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಅಥಣಿ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆಯು ಅಥಣಿಯಲ್ಲಿ ಕಳೆದ 27 ವರ್ಷಗಳಿಂದ ಅನೇಕ ಸಾಮಾಜಿಕ ಸೇವೆಗಳನ್ನು ಸಲ್ಲಿಸುತ್ತ ಬಂದಿದೆ. ಈ ಸೇವೆಗಳು ನಿಮ್ಮೆಲ್ಲರಿಗೂ ಪ್ರೇರಣೆಯಾಗಿದ್ದು, ವಿದ್ಯಾರ್ಥಿಗಳಿಗೂ ಕೂಡ ಸಾಮಾಜಿಕ ಸೇವೆ ಮತ್ತು ನಾಯಕತ್ವದ ಗುಣಗಳನ್ನು ರೂಢಿಸಿಕೊಳ್ಳಲು ಇಂಟ್ರಾಕ್ಟ್ ಕ್ಲಬ್ ಬಹಳಷ್ಟು ಸಹಕಾರಿಯಾಗಿದೆ. ಈ ಕ್ಲಬ್ ನಲ್ಲಿ ಸದಸ್ಯತ್ವ ಹೊಂದುವ ಮೂಲಕ ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿ ಪರಿಸರ ಸಂರಕ್ಷಣೆಯ ಜೊತೆಗೆ ಅನೇಕ ಸಾಮಾಜಿಕ ಸೇವೆಗಳನ್ನು ಬೆಳೆಸಿಕೊಂಡು ದೇಶದ ಸತ್ಪ್ರಜೆಗಳಾಗಬೇಕು ಎಂದರು.ರೋಟರಿ ಸಂಸ್ಥೆಯ ಅಧ್ಯಕ್ಷ ಸಚಿನ್ ದೇಸಾಯಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿ ಸಂಸ್ಥೆಯ ಪ್ರಾಯೋಜಕತ್ವ ಸಹಕಾರ ಪಡೆಯುವ ಮೂಲಕ ವಿದ್ಯಾರ್ಥಿಗಳು ಶಾಲೆಯ ಪರಿಸರ ಸಂರಕ್ಷಣೆ, ಕ್ರೀಡಾಕೂಟ, ಇನ್ನಿತರ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಇಂಟ್ರಾಕ್ಟ್ ಕ್ಲಬ್ನ ಕೆಲವು ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.ಇಂಟರಾಕ್ಟ್ ಕ್ಲಬ್ನ 2025-26ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಕು.ಸ್ವಾತಿ ಉಮೇಶ ಅವಟಿ (ಅಧ್ಯಕ್ಷ ), ಕು.ಸರ್ವೇಶ ಬಸಪ್ಪ ಉಳ್ಳಾಗಡ್ಡಿ (ಕಾರ್ಯದರ್ಶಿ), ಕು.ಲಕ್ಷ್ಮಿ ಶಿವಾನಂದ ತೇಲಿ (ಖಜಾಂಚಿ), ಶಿಕ್ಷಕ ಸಂಜುಕುಮಾರ ಭಜಂತ್ರಿ (ಸಂಯೋಜಕ) ಪದಗ್ರಹಣ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಸಹಾಯಕ ಪ್ರಾಂತಪಾಲ ಮೇಘರಾಜ ಪರಮಾರ, ಕಾರ್ಯದರ್ಶಿ ಶೇಖರ ಕೋಲಾರ, ಖಜಾಂಚಿ ಸಂತೋಷ ಬೊಮ್ಮಣ್ಣವರ, ಶ್ರೀಕಾಂತ್ ಅಥಣಿ, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ಗಲಗಲಿ, ಉಮೇಶ ಅವಟಿ, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.