ವಿದ್ಯಾರ್ಥಿಗಳು ಅಂಕ ಗಳಿಕೆ ಜತೆಗೆ ಸಂಸ್ಕಾರ ಕಲಿಯಲಿ

| Published : Jun 07 2025, 02:24 AM IST / Updated: Jun 07 2025, 02:25 AM IST

ಸಾರಾಂಶ

ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಂಕಗಳು ಅತಿ ಅಗತ್ಯ.

ಹೊನ್ನಾವರ: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಂಕಗಳು ಅತಿ ಅಗತ್ಯ. ಆದರೆ ಅಂಕ ಗಳಿಸುವುದರ ಜೊತೆಗೆ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ ಶಾಖಾ ಮಠದ ಬ್ರಹ್ಮಚರ್ಯ ನಿಶ್ಚಲಾನಂದನಾಥ ಶ್ರೀ ನುಡಿದರು.

ಪಟ್ಟಣದ ನ್ಯೂ ಇಂಗ್ಲೀಷ್ ಪ್ರೌಢಶಾಲೆಯಲ್ಲಿ ನಡೆದ ೨೦೨೪-೨೫ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಜೀವನ ಸುಸೂತ್ರವಾಗಿ ನಡೆಯಲು ಶಿಸ್ತು ಅಳವಡಿಸಿಕೊಳ್ಳಬೇಕು. ಗುರಿ ಇಟ್ಟುಕೊಂಡು ರೂಪುರೇಷೆ ಇದ್ದರೆ ಜೀವನದಲ್ಲಿ ಯಶಸ್ಸು ಸಾಧ್ಯ. ನಾವು ಪರರಿಗೆ ಸ್ಪರ್ಧಿಗಳಾಗುವ ಬದಲು ನಮಗೆ ನಾವೇ ಸ್ಪರ್ಧಿಯಾದರೆ ಪ್ರಗತಿ ಸಾಧಿಸಬಹುದು ಎಂದು ನುಡಿದರು.

ನ್ಯೂ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ರಘುನಾಥ ಪೈ ಅಧ್ಯಕ್ಷತೆ ವಹಿಸಿ ಮಾತನಾಡಿ ಎಸ್.ಎಸ್.ಎಲ್.ಸಿ. ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕೆ ಈ ಶಾಲೆಯಿಂದ ತೆರಳುತ್ತಿರುವ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿ ಸಮಾಜದಲ್ಲಿ ಗೌರವ ಸ್ಥಾನ ಗಳಿಸಿ. ಶಿಕ್ಷಕರ ಮತ್ತು ಸಿಬ್ಬಂದಿ ಶ್ರಮದಿಂದ ಶಾಲೆ ಉತ್ತಮ ಫಲಿತಾಂಶ ಗಳಿಸಿ ಸಾಧನೆ ಮಾಡುತ್ತಿದೆ ಎಂದರು.

ಶಿಕ್ಷಣ ಇಲಾಖೆಯ ಅರುಣಕುಮಾರ, ನಿವೃತ್ತ ಮುಖ್ಯಾಧ್ಯಾಪಕ ಎಂ.ಟಿ.ಗೌಡ ಮಾತನಾಡಿದರು.

ಪೂರ್ವ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಮಕೃಷ್ಣ ಶ್ಯಾನಭಾಗ ಶ್ರಾಫ್ ದಂಪತಿ ಆದಿಚುಂಚನಗಿರಿ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಪಾದುಕಾ ಪೂಜೆ ನೆರವೇರಿಸಿದರು.

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.೯೦ಕ್ಕಿಂತ ಹೆಚ್ಚು ಅಂಕ ಗಳಿಸಿದ ೪೫ ವಿದ್ಯಾರ್ಥಿಗಳನ್ನು, ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ತಾಲೂಕು ಮಟ್ಟದಲ್ಲಿ ಸ್ಥಾನಗಳಿಸಿದ ಈ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ವಿದ್ಯಾರ್ಥಿಗಳಾದ ರಾಧಾ ಪೈ, ರೋಶನ್ ಹೆಗಡೆ, ಸಿಂಚನಾ ಜಿ., ಸಮೃದ್ದಿ ನಾಯ್ಕ ಅನಿಸಿಕೆ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ನ್ಯೂ ಇಂಗ್ಲೀಷ್ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಾಧ್ಯಾಪಕಿ ಕಮಲಾ ನಾಯ್ಕ ಉಪಸ್ಥಿತರಿದ್ದರು.

ರಾಮಕೃಷ್ಣ ನಾಯಕ ಸ್ವಾಗತಿಸಿದರು. ಅಶೋಕ ನಾಯ್ಕ, ರಾಘವೇಂದ್ರ ಹೆಗಡೆ, ಪವಿತ್ರಾ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಎಲ್.ಜಿ. ಭಟ್, ಪದ್ಮಿನಿ ಪೈ ಪ್ರತಿಭಾ ಪುರಸ್ಕಾರ ನಿರ್ವಹಿಸಿದರು. ಕನ್ನಡ ವಿಭಾಗದ ಮುಖ್ಯಾಧ್ಯಾಪಕ ಜಯಂತ ನಾಯಕ ವಂದಿಸಿದರು.