ಇಲ್ಲಿಯ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನ ವಾರ್ಷಿಕೋತ್ಸವವನ್ನು ಕಾರ್ಯಕ್ರಮವನ್ನು ಹೊನ್ನಾವರದ ಸರ್ಕಾರಿ ಮೋಹನ ಕೆ. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರದ ಉಪನ್ಯಾಸಕ ವಿನೋದ ಹೆಗಡೆ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಭಟ್ಕಳ
ಇಲ್ಲಿಯ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನ ವಾರ್ಷಿಕೋತ್ಸವವನ್ನು ಕಾರ್ಯಕ್ರಮವನ್ನು ಹೊನ್ನಾವರದ ಸರ್ಕಾರಿ ಮೋಹನ ಕೆ. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರದ ಉಪನ್ಯಾಸಕ ವಿನೋದ ಹೆಗಡೆ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳು ಋಣಾತ್ಮಕವಾಗಿ ಚಿಂತಿಸಬಾರದು. ಗುಣಾತ್ಮಕ ಚಿಂತನೆಯೊಂದಿಗೆ ಶೃದ್ಧೆಯಿಂದ ಶ್ರಮಿಸಿದರೆ, ಏನನ್ನಾದರೂ ಸಾಧಿಸಬಹುದು ಎಂದರು.
ಶ್ರೀ ಗುರು ಸುಧೀಂದ್ರ ಕಾಲೇಜಿನ ಪೂರ್ವ ವಿದ್ಯಾರ್ಥಿ ಹಾಗೂ ಬ್ಯಾಂಕ್ ಅಫ್ ಬರೋಡಾದ ಶಿರಾಲಿ ಶಾಖೆಯ ಉದ್ಯೋಗಿ ರಜತ ಆಚಾರ್ಯ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯ, ಸಂವಹನ ಸಾಮರ್ಥ್ಯವನ್ನು ವೃದ್ಧಿಸಿಕೊಂಡು, ಸತತ ಪ್ರಯತ್ನದ ಮೂಲಕ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬೇಕು ಎಂದು ಹೇಳಿದರು.ಭಟ್ಕಳ ಎಜುಕೇಶನ್ ಟ್ರಸ್ಟ್ನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಮುಂದಿನ ಶೈಕ್ಷಣಿಕ ವರ್ಷ ಕಾಲೇಜಿನಲ್ಲಿ ಅಕ್ಷ-೨೦೨೬ರ ಅಡಿಯಲ್ಲಿ ಎಐ ಸರ್ಟಿಫಿಕೇಟ್, ಕೌಶಲ್ಯ ತರಬೇತಿ, ಸಾಮಾಜಿಕ ಜಾಗೃತಿಗೆ ವಿಶೇಷ ಪ್ರಾಶಸ್ತ್ಯ ನೀಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುರೇಶ ನಾಯಕ, ನಮ್ಮಲ್ಲಿನ ಕ್ಯಾಂಪಸ್ ನೇಮಕಾತಿ ತರಬೇತಿಯಲ್ಲಿ ಶಿಸ್ತಿನಿಂದ ಪಾಲ್ಗೊಳ್ಳುವುದರೊಂದಿಗೆ, ಎಲ್ಲರೂ ಉದ್ಯೋಗವಂತರಾಗಬೇಕು ಎಂದರು.ಇದೇ ಸಂದರ್ಭ ಕ್ಯಾಂಪಸ್ ನೇಮಕಾತಿಯ ವಿವರವನ್ನೊಳಗೊಂಡ ಪೋಸ್ಟರ್ನ್ನು ಅನಾವರಣಗೊಳಿಸಿದರು. ೨೦೨೫-೨೬ನೇ ಸಾಲಿನ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪಠ್ಯ ಪಠ್ಯೇತರ, ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಟ್ರಸ್ಟಿ ರಮೇಶ ಖಾರ್ವಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಪ್ರಾಂಶುಪಾಲ ಶ್ರೀನಾಥ ಪೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳನ್ನು ಬಿಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್. ಹೆಬ್ಬಾರ್ ಹಾಗೂ ಬಿ.ಬಿ.ಎ-ಬಿ.ಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಪರಿಚಯಿಸಿದರೆ, ಉಪನ್ಯಾಸಕಿ ದೀಪಾ ನಾಯ್ಕ ವಂದಿಸಿದರು. ವಿದ್ಯಾರ್ಥಿನಿಯರಾದ ಸಹನಾ ಹಾಗೂ ವಿಧಾತ್ರಿ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಿದವು.