ವಿ.ಸೋಮಣ್ಣನವರು ತುಮಕೂರು ಜಿಲ್ಲೆಯ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಭಾರತವನ್ನು ಭವಿಷ್ಯದಲ್ಲಿ ಬಲಿಷ್ಠ ರಾಷ್ಟ್ರ, ಪ್ರಗತಿ ಪರ ರಾಷ್ಟ್ರವನ್ನಾಗಿ ಮಾಡಲು ಕನಸು ಹೊತ್ತಿರುವ ಪ್ರಧಾನಮಂತ್ರಿಗಳ ಸಂಕಲ್ಪವನ್ನು ವಿದ್ಯಾರ್ಥಿಗಳು ನನಸು ಮಾಡಬೇಕು, ಎನ್‌ಡಿಎ ಮೈತ್ರಿಕೂಟದಿಂದ ವಿತರಿಸುತ್ತಿರುವ ನೋಟ್‌ಬುಕ್‌ಗಳನ್ನು ಸದ್ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಶಿಕ್ಷಣದಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದು ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್ ತಿಳಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ವರ್ಷದ ಜನ್ಮದಿನದ ಪ್ರಯುಕ್ತ ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣನವರ ಸಹಕಾರದಿಂದ ಎನ್‌ಡಿಎ ಪಕ್ಷವು ಸರ್ಕಾರಿ ಮಾಧ್ಯಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ ಮಾಡಿ ಮಾತನಾಡಿದರು.

ವಿ.ಸೋಮಣ್ಣನವರು ತುಮಕೂರು ಜಿಲ್ಲೆಯ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಕೇಂದ್ರ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬವನ್ನು ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್ ವಿತರಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

ನಿವೃತ್ತ ಐಎಎಸ್ ಅಧಿಕಾರಿ ಮತ್ತು ಬಿಜೆಪಿ ಮುಖಂಡ ಬಿ.ಎಚ್ ಅನಿಲ್‌ಕುಮಾರ್ ಮಾತನಾಡಿ, ಉದ್ಯೋಗ ಅರಸಿ ಹೊರ ದೇಶಗಳಿಗೆ ಹೋಗುವ ಬದಲು ನಮ್ಮ ದೇಶದಲ್ಲಿನ ಸಾಕಷ್ಟು ಅವಕಾಶಗಳನ್ನು ಬಳಕೆ ಮಾಡಿಕೊಂಡು ದೇಶದ ಅಭಿವೃದ್ಧಿಗೆ ಇವತ್ತಿನ ಪೀಳಿಗೆ ಮುಂದಾಗಬೇಕು. ಇದರ ಜೊತೆ ವಿದ್ಯಾರ್ಥಿಗಳು ಉತ್ತಮ ವ್ಯಾಸಂಗ ಮಾಡಿ ಈ ದೇಶದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕಿದೆ. ಪ್ರಧಾನ ಮಂತ್ರಿಗಳ ವಿಕಸಿತ ಭಾರತ ಕನಸನ್ನು ಯುವಕ ಯುವತಿಯರು ನನಸು ಮಾಡಬೇಕು ಎಂದು ಹೇಳಿದರು.

ಜೆಡಿಎಸ್ ನ ತಾಲೂಕು ಅಧ್ಯಕ್ಷ ಕಾಮರಾಜು ಮಾತನಾಡಿ, ಅತ್ಯಂತ ಉನ್ನತ ಆಲೋಚನೆಗಳಿಂದ ಸುಭದ್ರ ಭಾರತವನ್ನು ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿಯವರು ಪಣ ತೊಟ್ಟಿದ್ದಾರೆ. ಮೋದಿಯವರ ಸಂಪುಟದಲ್ಲಿ ನಮ್ಮ ಹೆಮ್ಮೆಯ ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣನವರು ಜಿಲ್ಲೆ ಸಾಕಷ್ಟು ಕೊಡುಗೆ ನೀಡಿ ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಕಾಮಗಾರಿಗಳಿಗೆ ವೇಗ ನೀಡಿದ್ದಾರೆ ಎಂದು ತಿಳಿಸಿದರು.

ಸಾವಿರಾರು ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ :

ವಿಶ್ವನಾಯಕ ಪ್ರಧಾನಿ ನರೇಂದ್ರ ಮೋದಿಯವರ ೭೫ನೇ ಜನ್ಮದಿನದ ಪ್ರಯುಕ್ತ ಕೇಂದ್ರ ಸಚಿವ ವಿ.ಸೋಮಣ್ಣನವರ ಸಹಕಾರದಿಂದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೊರಟಗೆರೆ ಪಟ್ಟಣ, ಅಕ್ಕಿರಾಂಪುರ, ಗೌರಗಾಗನಹಳ್ಳಿ, ಸೋಂಪುರ, ಹೊಳವನಹಳ್ಳಿ, ವಡ್ಡಗೆರೆ, ದಾಸರಹಳ್ಳಿ ಸರ್ಕಾರಿ ಮಾಧ್ಯಮಿಕ ಮತ್ತು ಪ್ರೌಢಶಾಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿದ್ದು, ವಿದ್ಯಾರ್ಥಿಗಳು ಪ್ರಧಾನಿ ಮೋದಿಯವರ ಹುಟ್ಟುಹಬ್ಬಕ್ಕೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ರುದ್ರೇಶ್, ಪ್ರಧಾನ ಕಾರ್ಯದರ್ಶಿ ದಾಸಲುಕುಂಟೆ ರಘು, ಮಹೇಂದ್ರ, ಜೆಡಿಎಸ್ ಕಾರ್ಯಾಧ್ಯಕ್ಷ ತುಂಬಾಡಿ ಲಕ್ಷ್ಮೀಶ್, ಜೆಡಿಎಸ್ ಉಪಾಧ್ಯಕ್ಷ ಕೋಡ್ಲಹಳ್ಳಿ ವೆಂಕಟೇಶ್, ಲಕ್ಷ್ಮಣ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪವನ್‌ಕುಮಾರ್, ಪ.ಪಂ ಸದಸ್ಯ ಪ್ರದೀಪ್‌ಕುಮಾರ್, ಲಕ್ಷ್ಮೀನಾರಾಯಣ್, ಮುಖಂಡರಾದ ರಮೇಶ್, ದಾಡಿವೆಂಕಟೇಶ್, ನರೇಂದ್ರಬಾಬು, ರಂಗನಾಥ್, ಕುರುಡುಗಾನಹಳ್ಳಿ ರಂಜಿತ್ ಸಿದ್ದರಾಜು (ಪೈಲ್ವಾನ್), ಚೇತನ್, ದಯಾನಂದ್, ಗುರುದತ್ತ, ಸೇರಿದಂತೆ ಇತರರು ಇದ್ದರು.