ಸಾರಾಂಶ
ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿ ಮಾದಕ ವಸ್ತುಗಳ ವ್ಯಸನಗಳಿಗೆ ಬಲಿಯಾಗದೆ ಉತ್ತಮ ಶಿಕ್ಷಣದೊಂದಿಗೆ ವೈಜ್ಞನಿಕ ಅರಿವು, ಸಂಸ್ಕಾರವನ್ನು ಬೆಳೆಸಿಕೊಂಡು ದೇಶದ ಸಂಪತ್ತಾಗಿ ಬೆಳೆಯಬೇಕೆಂದು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ತಿಳಿಸಿದರು.
ಕನ್ನಡಪ್ರಭವಾರ್ತೆ ತಿಪಟೂರು
ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿ ಮಾದಕ ವಸ್ತುಗಳ ವ್ಯಸನಗಳಿಗೆ ಬಲಿಯಾಗದೆ ಉತ್ತಮ ಶಿಕ್ಷಣದೊಂದಿಗೆ ವೈಜ್ಞನಿಕ ಅರಿವು, ಸಂಸ್ಕಾರವನ್ನು ಬೆಳೆಸಿಕೊಂಡು ದೇಶದ ಸಂಪತ್ತಾಗಿ ಬೆಳೆಯಬೇಕೆಂದು ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ತಿಳಿಸಿದರು. ನಗರದ ಎಸ್.ವಿ.ಪಿ. ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಎನ್.ಎಸ್.ಎಂ. ಬಾಲಿಕಾ ಪ್ರೌಢಶಾಲೆಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾಗಾಲೋಟದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಜಗತ್ತಿನಲ್ಲಿ ವಿದ್ಯಾರ್ಥಿಗಳ ಮಾನಸಿಕ ಬೆಳವಣೆಗೆಯೂ ಕೂಡ ಅಷ್ಟೇ ವೇಗವಾಗಿ ಸಾಗುತ್ತಿದೆ. ನಶೆಯೇರಿಸುವ ವಸ್ತುಗಳ ಪ್ರಭಾವಗಳಿಗೆ ಒಳಗಾಗಿ ಅತಿಯಾಗಿ ಬಳಸುತ್ತ ಚಟಗಳ ದಾಸರಾಗುತ್ತಿದ್ದಾರೆ. ಇದನ್ನು ಬಿಟ್ಟು ಉತ್ತಮ ಆರೋಗ್ಯ ಕಾಪಾಡಿಕೊಂಡು ದೇಶಕ್ಕೆ ಸೇವೆ ಸಲ್ಲಿಸಬೇಕು ಎಂದು ಹೇಳಿದರು. ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ಮಾತನಾಡಿ, ಯುವಸಮೂಹ ಕ್ಷಣಿಕ ಸುಖಕ್ಕೆ ಆಕರ್ಷಿತರಾಗಿ ಡ್ರಗ್ಸ್ನಂತಹ ಅಪಾಯಕಾರಿ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಮೋಜುಮಸ್ತಿಗಾಗಿ ದುರ್ವ್ಯಸನಗಳಿಗೆ ದಾಸರಾಗಿ ಅಮೂಲ್ಯವಾದ ವಿದ್ಯಾರ್ಥಿ ಜೀವನಕ್ಕೆ ಕಳಂಕ ತರುತ್ತಿದ್ದಾರೆ. ವಿದ್ಯಾಸಂಸ್ಥೆಗಳ ಸುತ್ತಮುತ್ತಲ ವಾತಾವರಣದಲ್ಲಿ ಮಾದಕ ವಸ್ತುಗಳ ನಿಷೇಧವಿದ್ದರೂ ಕಾನೂನು ಬಾಹಿರವಾಗಿ ಮಾರಾಟಮಾಡುವ ಜಾಲಗಳಿಗೆ ಕಡಿವಾಣ ಹಾಕಿ ಸೂಕ್ತ ಕಾನೂನಿನ ಕ್ರಮವನ್ನು ಜರುಗಿಸಬೇಕಿದೆ. ಬುದ್ದಿವಂತರಾಗಿದ್ದರೂ ದುಶ್ಚಟಗಳು ಯುವಜನತೆಯನ್ನು ಅವನತಿಯ ಹಂತಕ್ಕೆ ತಲುಪಿಸುತ್ತಿದೆ. ದೇಶಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾದ ಯುವಕರು ವ್ಯಸನಗಳಲ್ಲಿ ಮುಳುಗಿ ತಂದೆ ತಾಯಿಯರ ಕನಸುಗಳನ್ನು ನುಚ್ಚುನೂರು ಮಾಡುವುದಲ್ಲದೆ, ದೇಶಕ್ಕೆ ಅಪಾಯಕಾರಿಯಾದ ಶಕ್ತಿಗಳಾಗಿ ಮಾರ್ಪಾಡಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಉತ್ತಮ ಚಿಂತನೆಗಳನ್ನು ಬೆಳೆಸಿಕೊಂಡು ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಯತೀಶ್, ಮುಖ್ಯಶಿಕ್ಷಕರುಗಳಾದ ವಿ.ಎಂ. ಅರ್ಕಚಾರಿ, ವಿಜಯಕುಮಾರಿ, ಶಿಕ್ಷಕರುಗಳಾದ ವೀರೇಶ್, ಜುಂಜಪ್ಪ, ಬಸವರಾಜು, ಉದಯ್ಶಂಕರ್, ದೇವರಾಜು, ಸಂತೋಷ್, ಸಿದ್ದೇಶ್ ಮತ್ತಿತರಿದ್ದರು. ನಂತರ ವಿದ್ಯಾರ್ಥಿಗಳಿಗೆ ನಶೆ ಮುಕ್ತ ಭಾರತ ನಿರ್ಮಾಣದ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.