ಸಾರಾಂಶ
ರಾಮನಗರ: ಕಿರಿಯರಲ್ಲಿರುವ ಕೀಳರಿಮೆಯನ್ನು ಹೋಗಿಸಿ ಆತ್ಮ ವಿಶ್ವಾಸ ತುಂಬಿಸುವ ನಿಟ್ಟಿನಲ್ಲಿ ಹಿರಿಯ ವಿದ್ಯಾರ್ಥಿಗಳು ಉಡುಗೊರೆ ನೀಡುವ ಮೂಲಕ ಸ್ನೇಹಹಸ್ತ ಚಾಚುವ ಎಕ್ಸ್ಪರ್ಟ್ ಪರ್ವ ಕಾರ್ಯಕ್ರಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಬೆಳವಣಿಗೆ ಎಂದು ಹಿರಿಯ ವಿದ್ಯಾರ್ಥಿಗಳಿಗೆ ಎಕ್ಸ್ಪರ್ಟ್ ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಡಾ.ರವಿಕುಮಾರ್ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ನ್ಯೂ ಎಕ್ಸ್ಪ್ರರ್ಟ್ ಕಾಲೇಜಿನ ಎಕ್ಸ್ಪರ್ಟ್ ಪರ್ವ 2025ರ ಶೈಕ್ಷಣಿಕ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡಬಾರದು. ಉತ್ತಮ ಫಲಿತಾಂಶ ಬರಲು ನಿತ್ಯ ಅಭ್ಯಾಸ ಮಾಡಿ ಕಲಿಯುವುದು ಸಾಕಷ್ಟಿದೆ. ಉಪನ್ಯಾಸಕರಿಗೆ ಮತ್ತು ಪೋಷಕರಿಗೆ ಗೌರವ ನೀಡಿದಾಗ ಮಾತ್ರ ವಿದ್ಯೆ ಒಲಿಯಲು ಸಾಧ್ಯ. ಹಿರಿಯ ವಿದ್ಯಾರ್ಥಿಗಳಿಂದ ಕಿರಿಯರಿಗೆ ನೆನಪಿನ ಬಳುವಳಿ ಉತ್ತಮ ಬೆಳವಣಿಗೆ ಎಂದರು.ಉದ್ಘಾಟನಾ ಭಾಷಣ ಮಾಡಿದ ಬೆಂಗಳೂರು ಉತ್ತರ ಜಿಲ್ಲೆಯ ರಸಾಯನ ಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಈರೇಗೌಡ, ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಅಗತ್ಯವಾಗಿವೆ. ಶೈಕ್ಷಣಿಕ ಕಾರ್ಯಕ್ರಮಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ಕಾಲೇಜು ಕಟ್ಟಿ ಬೆಳೆಸುವುದು ಅತ್ಯಂತ ಕಷ್ಟದ ಕೆಲಸ. ಹಲವು ಪ್ರಯತ್ನಗಳು, ಕಷ್ಟಗಳನ್ನು ದಾಟಿ ವಿದ್ಯಾಸಂಸ್ಥೆ ಕಟ್ಟಬೇಕಾಗುತ್ತದೆ. ಇಲ್ಲಿನ ಶಿಸ್ತುಬದ್ಧ ವಿದ್ಯಾರ್ಥಿಗಳನ್ನು ಗಮನಿಸಿದರೆ ನ್ಯೂ ಎಕ್ಸ್ಪ್ರರ್ಟ್ ಕಾಲೇಜು ಅತ್ಯುತ್ತಮ ವಿದ್ಯಾಸಂಸ್ಥೆ ಎಂದು ತಿಳಿಯುತ್ತದೆ ಎಂದು ಕಾಲೇಜಿನ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅತಿಥಿಯಾಗಿದ್ದ ಬೆಂಗಳೂರು ದಕ್ಷಿಣ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ಸಂಘದ ಅಧ್ಯಕ್ಷ ಕೊತ್ತೀಪುರ ಜಿ.ಶಿವಣ್ಣ ಮಾತನಾಡಿ, 2017ರಲ್ಲಿ ಸ್ಥಾಪನೆಯಾದ ನ್ಯೂ ಎಕ್ಸ್ಪರ್ಟ್ ಕಾಲೇಜು ಕಳೆದ 8 ವರ್ಷಗಳಿಂದ ಒಂದೊಂದೇ ವಿಶಿಷ್ಟ ಸಾಧನೆಯ ಮೆಟ್ಟಿಲು ಏರುತ್ತಿದೆ. ರಾಮನಗರದಲ್ಲಿ ಉತ್ತಮ ವಿದ್ಯಾಸಂಸ್ಥೆ ಎಂದು ಹೆಸರು ಮಾಡಿದೆ. ಅಲ್ಲದೇ ಮಕ್ಕಳಿಗೆ ನಮ್ಮ ಸಂಸ್ಕೃತಿಗಳ ಬಗ್ಗೆ ಪರಿಚಯ ಮಾಡಿಕೊಡುವ ಎಕ್ಸ್ಪರ್ಟ್ ಪರ್ವ ಕಾರ್ಯಕ್ರಮ ವೈಶಿಷ್ಟ್ಯಪೂರ್ಣವಾಗಿದೆ. ಶಾಲಾ-ಕಾಲೇಜು ಹಂತಗಳಲ್ಲಿನ ಸಾಂಸ್ಕೃತಿಕ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸುತ್ತವೆ ಎಂದು ಹೇಳಿದರು.ಎಕ್ಸ್ಪರ್ಟ್ ಪರ್ವ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ಎಸ್.ಟಿ.ಎನ್ ಆರ್ಕೇಡ್ ಮಾಲೀಕ, ಸಮಾಜ ಸೇವಕ ಎಸ್.ಟಿ.ನಂದೀಶ್ ಅವರು ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ತಲಾ ಐವರು ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಶಸ್ತಿ ಫಲಕ ನೀಡಿದರು. ಈ ವೇಳೆ ತಮ್ಮ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಧ್ಯಾಪಕರು ವೈಯಕ್ತಿಕವಾಗಿ ಪುಸ್ತಕ ಹಾಗೂ ನಗದು ಬಹುಮಾನ ನೀಡಿದ್ದು ವಿಶೇಷವಾಗಿತ್ತು.
ನ್ಯೂ ಎಕ್ಸ್ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯ ಶೈಕ್ಷಣಿಕ ಸಲಹೆಗಾರ ಕಿರಣ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲೆ ಡಾ.ಶಿಲ್ಪಾ, ಉಪ ಪ್ರಾಂಶುಪಾಲರಾದ, ಕೆ.ಎಸ್.ಭುವನಶ್ರೀ, ಆರ್.ಚಂದ್ರಶೇಖರ್ ಶೈಕ್ಷಣಿಕ ಸಲಹೆಗಾರರಾದ ವಿನೋದ್ ಕುಮಾರ್, ನಾಗರಾಜು, ಉಪನ್ಯಾಸಕರಾದ ಕವನಾ, ಎಂ.ಜಯಣ್ಣ, ಶಾಂತಪ್ಪ, ಸಿ.ವೆಂಕಟೇಶ್, ಹರೀಶ್, ಜ್ಞಾನೇಂದ್ರ ಕುಮಾರ್, ಹನುಮಂತಕುಮಾರ್ ಉಪಸ್ಥಿತರಿದ್ದರು.27ಕೆಆರ್ ಎಂಎನ್ 4.ಜೆಪಿಜಿರಾಮನಗರದ ಅಂಬೇಡ್ಕರ್ ಭವನದಲ್ಲಿ ಜರುಗಿದ ನ್ಯೂ ಎಕ್ಸ್ಪ್ರರ್ಟ್ ಕಾಲೇಜಿನ ಎಕ್ಸ್ಪರ್ಟ್ ಪರ್ವ 2025ರ ಶೈಕ್ಷಣಿಕ ಚಟುವಟಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಸ್ಥಾಪಕ ಕಾರ್ಯದರ್ಶಿ ಡಾ.ರವಿಕುಮಾರ್ ಉದ್ಘಾಟಿಸಿದರು.