ಚಳಿಗಾಲದ ಅಧಿವೇಶನ ವೀಕ್ಷಿಸಿದ ವಿದ್ಯಾರ್ಥಿಗಳು

| Published : Dec 19 2024, 12:30 AM IST

ಸಾರಾಂಶ

ಸೊರಬ ತಾಲೂಕಿನ ಸುಮಾರು 250 ಕ್ಕೂ ಹೆಚ್ಚು ಪಿಯುಸಿ ವಿದ್ಯಾರ್ಥಿಗಳು ಮಂಗಳವಾರ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ವೀಕ್ಷಿಸುವ ಮೂಲಕ ಕಲಾಪದ ಬಗ್ಗೆ ವಿಶೇಷ ಜ್ಞಾನ ಪಡೆದರು. ಹಾಗೆಯೇ ಈ ವಿದ್ಯಾರ್ಥಿಗಳು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸೊರಬ ತಾಲೂಕಿನ ಸುಮಾರು 250 ಕ್ಕೂ ಹೆಚ್ಚು ಪಿಯುಸಿ ವಿದ್ಯಾರ್ಥಿಗಳು ಮಂಗಳವಾರ ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ವೀಕ್ಷಿಸುವ ಮೂಲಕ ಕಲಾಪದ ಬಗ್ಗೆ ವಿಶೇಷ ಜ್ಞಾನ ಪಡೆದರು. ಹಾಗೆಯೇ ಈ ವಿದ್ಯಾರ್ಥಿಗಳು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡರು.

ಸೊರಬ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿಶೇಷ ಆಹ್ವಾನದ ಮೇರೆಗೆ ಸೊರಬ ತಾಲೂಕಿನ ಜೂನಿಯರ್ ಕಾಲೇಜು ಮತ್ತು ಆನವಟ್ಟಿ ಜೂನಿಯರ್ ಕಾಲೇಜಿನ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪನ್ಯಾಸಕರೊಂದಿಗೆ ವಿಶೇಷ ಬಸ್ಸಿನಲ್ಲಿ ಬೆಳಗಾವಿಗೆ ತೆರೆಳಿದ್ದರು.ಅಧಿವೇಶನದ ಕಲಾಪ ವೀಕ್ಷಣೆಯ ಜತೆಗೆ ಶಿಕ್ಷಣ ಸಚಿವರೊಂದಿಗಿನ ವಿಶೇಷ ಸಂವಾದ ಕಾರ್ಯಕ್ರಮಕ್ಕಾಗಿಯೇ ವಿದ್ಯಾರ್ಥಿಗಳನ್ನು ಅಲ್ಲಿಗೆ ಆಹ್ವಾನಿಸಲಾಗಿತ್ತು. ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ಮೊದಲ ವಿಧಾನ ಮಂಡಲದ ವಿಧಾನ ಸಭೆಯ ಕಲಾಪವನ್ನು ವೀಕ್ಷಿಸಿದರು.

ಬಳಿಕ ವಿಧಾನ ಪರಿಷತ್ ಕಲಾಪವನ್ನು ವೀಕ್ಷಿಸಿದರು. ಎರಡು ಸದನಗಳಲ್ಲಿ ವಿದ್ಯಾರ್ಥಿಗಳು ಕಲಾಪ ವೀಕ್ಷಿಸುವುದಕ್ಕೆ ವಿಧಾನ ಸಭೆಯ ಸಭಾಧ್ಯಕ್ಷರು ಮತ್ತು ಪರಿಷತ್ತಿನ ಸಭಾಪತಿಗಳಿಂದ ಸಚಿವರಾದ ಮಧು ಬಂಗಾರಪ್ಪ ಅವರು ಅನುಮತಿ ಪಡೆದಿದ್ದರು. ಅಂತೆಯೇ ಎರಡು ಸದನಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಕಲಾಪ ವೀಕ್ಷಿಸಿ, ಪುಳಕಿತರಾದರು.ಆ ಬಳಿಕ ಸುವರ್ಣ ಸೌಧದ ವಿಶೇಷ ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ, ಶರಣ ಬಸಪ್ಪ ದರ್ಶನಾಪುರ, ಶಿವಾನಂದ ಪಾಟೀಲ್ ವಿಧಾನ ಪರಿಷತ್ ಸದಸ್ಯ ಸೇರಿದಂತೆ ಹಲವರು ಪಾಲ್ಗೊಂಡರು.ಸಚಿವರು ಹಾಗೂ ಶಾಸಕರೊಂದಿಗಿನ ಸಂವಾದದಲ್ಲಿ ಆನವಟ್ಟಿ ಜೂನಿಯರ್ ಕಾಲೇಜು ವಿದ್ಯಾರ್ಥಿ ನಾಗಯ್ಯ ಸ್ವಾಮಿ ಮಾತನಾಡಿ, ಸಿಇಟಿ ಗೆ ಸೂಕ್ತ ಪಠ್ಯ ಪರಿಕರಗಳು ಸೇರಿ ಕೆಲವು ಮೂಲಭೂತ ಸೌಕರ್ಯಗಳ ಕೊರತೆಯಿದೆ. ಇದನ್ನು ಬಗೆಹರಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ಸೊರಬ ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿ ನಾಗವೇಣಿ ಮಾತನಾಡಿ, ಸೈನ್ಸ್ ಮತ್ತು ಕಾಮರ್ಸ್ ಪ್ರವೇಶಕ್ಕೆ ಈಗ ಸಿಇಟಿ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲಿ ಕಲಾ ವಿಭಾಗಕ್ಕೂ ಸಿಇಟಿ ಇದ್ದರೆ ಇನ್ನಷ್ಟು ಗುಣಮಟ್ಟ ಹೆಚ್ಚಾಗಲಿದೆ. ಆ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕಿದೆ ಎಂದು ಮನವಿ ಮಾಡಿದರು.ವಿದ್ಯಾರ್ಥಿಗಳಿಗೂ ಲೋಕ ಜ್ಞಾನಬೇಕೆಂಬ ಕಾರಣಕ್ಕೆ ಕ್ಷೇತ್ರದ ವಿದ್ಯಾರ್ಥಿಗಳಿಗೆ ಅಲ್ಲಿನ ಉಪನ್ಯಾಸಕ ಸಿಬ್ಬಂದಿ, ಆಡಳಿ ಮಂಡಳಿ ಒತ್ತಾಸೆಯ ಮೇರೆಗೆ ಈ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಅತೀವ ಉತ್ಸಾಹದಿಂದಲೇ ಕಲಾಪವನ್ನು ವೀಕ್ಷಿಸಿ, ಅನೇಕ ಪ್ರಶ್ನೆಗಳನ್ನು ನಮ್ಮ ಬಳಿ ಕೇಳಿ ಉತ್ತರ ಪಡೆದಿದ್ದು ನಿಜಕ್ಕೂ ವಿಶೇಷ ಎನಿಸಿತು. ಈ ರೀತಿಯ ಪ್ರಕ್ರಿಯೆ ಯುವಜನರಿಗೆ ಆಗಬೇಕಿದೆ. ಅವರಿಗೂ ರಾಜಕೀಯ ಜ್ಞಾನ ಬೇಕಿದೆ. ಪ್ರಜಾ ಪ್ರಭುತ್ವ ವ್ಯವಸ್ಥೆಯ ಮಹತ್ವ ಗೊತ್ತಾಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.