ಸಾರಾಂಶ
ಹೊಸಕೋಟೆ: ಬೇರೆ ಬೇರೆ ಮತ, ಪಂಥಗಳ ವಿಚಾರಗಳಿಂದ ಕುಬ್ಜರಾಗಿರುವ ನಾವು ವಿಶ್ವ ಮಾನವರಾಗಲು ಕುವೆಂಪು ಪುಸ್ತಕಗಳನ್ನು ಓದಬೇಕು ಎಂದು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಚೆನ್ನಪ್ಪ ಕಟ್ಟಿ ಹೇಳಿದರು.
ಹೊಸಕೋಟೆ: ಬೇರೆ ಬೇರೆ ಮತ, ಪಂಥಗಳ ವಿಚಾರಗಳಿಂದ ಕುಬ್ಜರಾಗಿರುವ ನಾವು ವಿಶ್ವ ಮಾನವರಾಗಲು ಕುವೆಂಪು ಪುಸ್ತಕಗಳನ್ನು ಓದಬೇಕು ಎಂದು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷ ಡಾ.ಚೆನ್ನಪ್ಪ ಕಟ್ಟಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎರಡು ದಿನಗಳ ಕಾಲ ನಡೆದ "ಕುವೆಂಪು ಓದು ಕಮ್ಮಟ " ಉದ್ಘಾಟಿಸಿ ಮಾತನಾಡಿ, ಇದು ಶಿಕ್ಷಕ ಕೇಂದ್ರಿತ ಅಲ್ಲ, ನನ್ನ ಕೇಂದ್ರಿತವೂ ಅಲ್ಲ. ಇದೊಂದು ವಿದ್ಯಾರ್ಥಿ ಕೇಂದ್ರಿತವಾದ ಕಾರ್ಯಕ್ರಮ. ಇಲ್ಲಿ ಓದುವವರು, ಬರೆಯುವವರು, ಮಾತಾಡುವವರು ಎಲ್ಲರೂ ನೀವೆ. ಸತ್ವಯುತವಾದ ಸಾಹಿತ್ಯಕ್ಕೆ ಕಾಲದ ಹಂಗಿಲ್ಲ. ಅದು ಸದಾ ಜೀವಂತ ಇರುತ್ತದೆ. ಕುವೆಂಪು ಬರೆದಿರುವ ಸಾಹಿತ್ಯ, ಅದರಲ್ಲಿರುವ ವಿಚಾರಕ್ಕಾಗಿ ಅದನ್ನು ಓದಬೇಕು. ಓದಿ ಚರ್ಚಿಸಬೇಕು. ನಮ್ಮ ಮನಸ್ಸುಗಳು ಕಲುಷಿತ ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಹಾಗೂ ನಮ್ಮ ನಾಲಿಗೆ ತೊಡರುಗಳನ್ನು ಬಿಡಿಸಿಕೊಳ್ಳುವುದಕ್ಕೆ ಕುವೆಂಪು ಸಾಹಿತ್ಯವನ್ನು ಓದಬೇಕು ಎಂದು ಹೇಳಿದರು.ಪ್ರಾಂಶುಪಾಲ ಡಾ.ರಾಮಲಿಂಗಪ್ಪ ಟಿ.ಬೇಗೂರು ಮಾತನಾಡಿ, ಮಕ್ಕಳ ವಿಚಾರಪ್ರಜ್ಞೆಯನ್ನು ಅವರವರೇ ಪರಸ್ಪರ ರೂಪಿಸಿಕೊಳ್ಳಲು ನೆರವು ನೀಡುವುದು, ಓದುವ ಅಭಿರುಚಿ ಬೆಳೆಸುವುದು, ಓದಿದ ಪಠ್ಯವನ್ನು ಗ್ರಹಿಸುವ ನೆಲೆಯನ್ನು ವಿಸ್ತರಿಸುವುದು, ಓದಿದ ಓದಿನಿಂದ ಸ್ವಂತ ನಿಲುವುಗಳನ್ನು ತಳೆಯುವಂತೆ ಪ್ರೇರೇಪಿಸುವುದು, ನಮ್ಮ ಲೋಕವನ್ನು ಗ್ರಹಿಸುವ ಬಗೆಗಳನ್ನು ತಿಳಿಯಲು ಪ್ರೇರೇಪಿಸುವುದು ನಮ್ಮ ಕಮ್ಮಟದ ಉದ್ದೇಶವಾಗಿದೆ ಎಂದರು.
ವಿದ್ಯಾರ್ಥಿಗಳಿಂದ ಚರ್ಚೆ ಮತ್ತು ಸಾಹಿತ್ಯದ ಕುರಿತು ಅಭಿಪ್ರಾಯ ವ್ಯಕ್ತವಾಯಿತು. ಕಾರ್ಯಕ್ರಮದಲ್ಲಿ ಪ್ರೊ. ನಾರಾಯಣಘಟ್ಟ, ಡಾ. ಸಂಗೀತ.ಪಿ ಸೂಲಿಬೆಲೆ, ಉಪನ್ಯಾಸಕರಾದ ರವಿಚಂದ್ರ, ಕೆ. ರವಿಕುಮಾರ್, ಈರಣ್ಯ, ಅಶ್ವತ್ಥ್ ನಾರಾಯಣ್, ಶ್ರೀನಿವಾಸ ಆಚಾರ್, ಬೊಮ್ಮೆಕಲ್ ವೆಂಕಟೇಶ್, ಸಾಧಿಕ್ ಪಾಷ, ಮಾಲಿನಿ ಹಾಜರಿದ್ದರು.