ಕುಷ್ಟಗಿ: ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಶಿಸ್ತು, ಪರಿಶ್ರಮ ಮತ್ತು ಗುರಿಯೊಂದಿಗೆ ವಿದ್ಯಾಭ್ಯಾಸ ಮಾಡಬೇಕು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ತಾಲೂಕಿನ ಟೆಂಗುಂಟಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣವು ಮಕ್ಕಳ ಜೀವನದ ಯಶಸ್ಸಿನ ಮೆಟ್ಟಿಲಾಗಿದ್ದು, ಶ್ರದ್ದೆಯಿಂದ ಕಲಿಯಬೇಕು ಎಂದರು.

ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿ ಶಾಲೆಗೆ ಬೇಕಾಗಿರುವ ಕೊಠಡಿ, ಪೀಠೋಪಕರ ಕೊಡುತ್ತಿದ್ದು, ಶಿಕ್ಷಕರ ನೇಮಕಾತಿ ಮಾತ್ರ ಮಾಡುತ್ತಿಲ್ಲ ಈ ನೇಮಕಾತಿ ವಿಳಂಬದ ಸಲುವಾಗಿ ಕಲ್ಯಾಣ ಕರ್ನಾಟಕ ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿಯಲು ಕಾರಣವಾಗಿದ್ದು ನಾವು ಸಹಿತ ಶಿಕ್ಷಕರ ನೇಮಕಾತಿಗಾಗಿ ಬಹಳಷ್ಟು ಒತ್ತಾಯ ಮಾಡಿದ್ದೇವೆ ಎಂದರು.

ಬಿಇಓ ಉಮಾದೇವಿ ಬಸಾಪೂರು ಮಾತನಾಡಿ, ಶಾಲಾ ಆರಂಭೋತ್ಸವವು ಮಕ್ಕಳಲ್ಲಿ ಹೊಸ ಉತ್ಸಾಹ ಮೂಡಿಸುವ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿಗಳು ನಿಯಮಿತವಾಗಿ ಶಾಲೆಗೆ ಹಾಜರಾಗುವ ಮೂಲಕ ಉತ್ತಮ ಶಿಕ್ಷಣ ಪಡೆಯಬೇಕು. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕ್ರಮ್ಮ ಭಾಗಪ್ಪ ತಳವಾರ ದೈಹಿಕ ಪರಿವೀಕ್ಷಕ ನಾಗಪ್ಪ ಬಿಳಿಯಪ್ಪನವರು, ಸಂಪನ್ಮೂಲ ಶಿಕ್ಷಕ ಸೋಮಲಿಂಗಪ್ಪ ಗುರಿಕಾರ, ಸಂಗನಗೌಡ ಜೈನರ ಹಾಗೂ ಭೀಮಪ್ಪಯ್ಯ ತಾತನವರು, ಗ್ಯಾನಪ್ಪಯ್ಯ ತಾತನವರು, ಶರಣಗೌಡ ಪಾಟೀಲ, ಹೊಳೆಯಪ್ಪ ಆಡೀನ, ಬಸವರಾಜ ಕೌದಿ, ಶರಣಪ್ಪ ಕೌದಿ, ಹನಮಂತಪ್ಪ ಮಾದರ ಸೇರಿದಂತೆ ಶಾಲಾ ಸುಧಾರಣ ಸಮಿತಿಯ ಸದಸ್ಯರು, ಗ್ರಾಮಸ್ಥರು ಶಾಲಾ ಶಿಕ್ಷಕ ಶಿಕ್ಷಕಿಯರು, ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತಿ ಶಿಕ್ಷಕ ಮಹಾಲಿಂಗಯ್ಯ ಹಿರೇಮಠ ಬಿಳ್ಕೊಡುಗೆ ಸಮಾರಂಭ ನಡೆಸಲಾಯಿತು.