ಕನ್ನಡಪ್ರಭ ವಾರ್ತೆ ಮಧುಗಿರಿ
ವಿದ್ಯಾರ್ಥಿಗಳ ತಮ್ಮ ಅಭ್ಯುದಯ ಮತ್ತು ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ವ್ಯಾಸಂಗ ಮಾಡುವುದು ಅತ್ಯವಶ್ಯ ಎಂದು ಶಾಸಕ ಕೆ.ಎನ್. ರಾಜಣ್ಣನವರು ಕರೆ ನೀಡಿದರು.ದೊಡ್ಡೇರಿ ಹೋಬಳಿ- ಬಡವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆದ ಎನ್ಎಸ್ಎಸ್ , ಸಾಂಸ್ಕೃತಿಕ, ಕ್ರೀಡೆ, ರೆಡ್ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ 3ನೇ ವರ್ಷದ ಬಿಎ,ಬಿಕಾಂ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಎರಡು ದಶಕಗಳ ಹಿಂದೆ ನಾನು ಬೆಳ್ಳಾವಿ ಶಾಸಕನಾಗಿದ್ದಾಗ ಇಲ್ಲಿನ ಶಾಲೆಯೊಂದರ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಕೆಲವು ಹಣ್ಣುಮಕ್ಕಳು ಬಂದು ನಮ್ಮ ಬಡವನಹಳ್ಳಿಗೆ ಪ್ರಥಮ ದರ್ಜೆ ಕಾಲೇಜನ್ನು ಮಂಜೂರು ಮಾಡಿ ನಮ್ಮ ಶೈಣಿಕ ಪ್ರಗತಿಗೆ ನೆರವಾಗಬೇಕು ಎಂದು ಕೋರಿದ್ದರು. ಅದರಂತೆ ನಾನು 2007ರಲ್ಲಿ ಈ ಕಾಲೇಜನ್ನು ಮಂಜೂರು ಮಾಡಿಸಿದೆ. ಇಂದು ಈ ಕಾಲೇಜು ಪ್ರಗತಿ ಹೊಂದುತ್ತಾ ಪದವಿ ಪಡೆಯಲು ಎಲ್ಲರಿಗೂ ಅನುಕೂಲವಾಗಿದೆ ಎಂದು ರಾಜಣ್ಣ ಮೆಚ್ಚುಗೆ ವ್ಯಕ್ತಪಡಸಿದರು.ಈ ಕಾಲೇಜಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ವಿದ್ಯಾರ್ಥಿಗಳಿಗೆ ಬಿಡುವಿನ ವೇಳೆಯಲ್ಲಿ ಓದಲು ರೀಡಿಂಗ್ ರೂಮ್ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿ, ಮುಂದಿನ ಶೈಕ್ಷಣಿಕ ವರ್ಷದಿಂದ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಮಾಡಿಸಿಕೊಡುವುದಾಗಿ ಘೋಷಿಸಿದರು.
ನಿವೃತ್ತ ಪ್ರಾಂಶುಪಾಲ ಕೆ.ಎಸ್. ಜಗದೀಶ್ ಮಾತನಾಡಿ, ವಿದ್ಯೆಯು ನಾಗರಿಕರ ಲಕ್ಷಣ, ಪರಿವರ್ತನೆಗೆ ಶಿಕ್ಷಣವೇ ಅಮೂಲ್ಯ. ಹಣವಂತರಿಗೆ ಊರಿನಲ್ಲಿ ಮಾತ್ರ ಗೌರವ, ವಿದ್ಯಾವಂತರಿಗೆ ವಿಶ್ವದ ಯಾವುದೇ ಮೂಲೆಯಲ್ಲೂ ಗೌರವ ಸಿಗುತ್ತದೆ ಎಂದು ಪ್ರೇರೇಪಿಸಿದರು.
ಕಾಲೇಜು ಪ್ರಾಂಶುಪಾಲ ಪ್ರೊ.ಎಂ.ರಾಮಚಂದ್ರಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಧುಗಿರಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎನ್. ನಂಜುಂಡರಾಜು, ಬಿ. ನಾಗೇಶ್ ಬಾಬು, ಸದಸ್ಯರಾದ ನಜೀರ್ ಸಾಬ್, ಶ್ರೀರಂಗಪ್ಪ, ಸಿದ್ದಗಂಗಪ್ಪ, ಜೈರಾಮಯ್ಯ, ಡಿವೈಎಸ್ಪಿ ಮಂಜುನಾಥ್, ಭಾನುಪ್ರಿಯ, ಮುದ್ದರಾಜು ಎನ್ಎಸ್ಎಸ್ ಸಂಚಾಲಕ ಪ್ರಸನ್ನ ಕುಮಾರ್ ಕೆ.ಎನ್, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಶ ರೇಖಾ ಬಿ.ಎಂ, ಉಪನ್ಯಾಸಕ ವರ್ಗ, ಕಾಲೇಜು ಅಬಿವೃದ್ಧಿ ಸಮಿತಿ ಸದಸ್ಯರು, ಗ್ರಾಮಸ್ಥರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.