ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನಿಗದಿಗೆ ಆಗ್ರಹಿಸಿ ಮನವಿ ಸಲ್ಲಿಕೆ

| Published : Jun 12 2024, 12:33 AM IST

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನಿಗದಿಗೆ ಆಗ್ರಹಿಸಿ ಮನವಿ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸಕ್ತ ಸಾಲಿನಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಕಬ್ಬು ಬೆಳೆ ಕಡಿಮೆ ಇದ್ದು ಕಬ್ಬು ಉತ್ಪಾದನೆ ವೆಚ್ಚ ಅಧಿಕವಾಗಿರುವ ಕಾರಣ ಟನ್‌ಕಬ್ಬಿಗೆ 4 ಸಾವಿರ ರೂ. ನಿಗದಿ ಪಡಿಸಬೇಕು. ಎಲ್ಲಾ ಬ್ಯಾಂಕ್‌ ಗಳಲ್ಲಿ ಸಹಕಾರ ಸಂಘಗಳ ಬ್ಯಾಂಕ್‌ ನಂತೆ ಬಡ್ಡಿ ರಹಿತ ಸಾಲ ನೀಡಲು ಕ್ರಮ ಕೈಗೊಳ್ಳಬೇಕು. ತೂಕದಲ್ಲಿ ಮೋಸ ಮಾಡುವ ಬಣ್ಣಾರಿ ಸಕ್ಕರೆ ಕಾರ್ಖಾನೆ ಈ ವ್ಯಾಪ್ತಿಯ ಕಬ್ಬನ್ನು ಬೇರೆ ಜಿಲ್ಲೆಗಳ ಕಾರ್ಖಾನೆಗಳಿಗೆ ಸಾಗಾಣಿಕೆ ಮಾಡಲು ನಿರ್ಬಂಧ ಹೇರಬಾರದು.

ಕನ್ನಡಪ್ರಭ ವಾರ್ತೆ ಮೈಸೂರು

ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರು ಸಂಘದ ಜಿಲ್ಲಾ ಘಟಕದವರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಪ್ರಸಕ್ತ ಸಾಲಿನಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಕಬ್ಬು ಬೆಳೆ ಕಡಿಮೆ ಇದ್ದು ಕಬ್ಬು ಉತ್ಪಾದನೆ ವೆಚ್ಚ ಅಧಿಕವಾಗಿರುವ ಕಾರಣ ಟನ್‌ಕಬ್ಬಿಗೆ 4 ಸಾವಿರ ರೂ. ನಿಗದಿ ಪಡಿಸಬೇಕು. ಎಲ್ಲಾ ಬ್ಯಾಂಕ್‌ ಗಳಲ್ಲಿ ಸಹಕಾರ ಸಂಘಗಳ ಬ್ಯಾಂಕ್‌ ನಂತೆ ಬಡ್ಡಿ ರಹಿತ ಸಾಲ ನೀಡಲು ಕ್ರಮ ಕೈಗೊಳ್ಳಬೇಕು. ತೂಕದಲ್ಲಿ ಮೋಸ ಮಾಡುವ ಬಣ್ಣಾರಿ ಸಕ್ಕರೆ ಕಾರ್ಖಾನೆ ಈ ವ್ಯಾಪ್ತಿಯ ಕಬ್ಬನ್ನು ಬೇರೆ ಜಿಲ್ಲೆಗಳ ಕಾರ್ಖಾನೆಗಳಿಗೆ ಸಾಗಾಣಿಕೆ ಮಾಡಲು ನಿರ್ಬಂಧ ಹೇರಬಾರದು ಎಂದು ಅವರು ಒತ್ತಾಯಿಸಿದರು.

ರೈತರು ಬರಗಾಲ ಸಂಕಷ್ಟದಲಿದ್ದು ಕೃಷಿ ಚಟುವಟಿಕೆ ನಡೆಸಲು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು ಎಲ್ಲಾ ರೈತರಿಗೂ ಬರ ಪರಿಹಾರ ದೊರಕಿದರೆ ಕೃಷಿ ಚಟುವಟಿಕೆ ನಡೆಸಲು ಹೆಚ್ಚಿನ ಅನುಕೂಲವಾಗುತ್ತದೆ. ಈ ಬಗ್ಗೆ ತುರ್ತು ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಹಿಂದಿನ ವರ್ಷ ಘೋಷಣೆ ಮಾಡಿದ ಕಬ್ಬಿನ ಹೆಚ್ಚುವರಿ ದರ ಟನ್‌ಕಬ್ಬಿಗೆ 150 ರು. ನಿಗದಿ ಮಾಡಿರುವುದನ್ನು ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರಿಗೆ ಪಾವತಿ ಮಾಡಿಲ್ಲ. ಕಾರ್ಖಾನೆ ಆರಂಭಕ್ಕೆ ಮೊದಲು ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಮಳೆಗಾಲ ಆರಂಭವಾಗಿರುವ ಕಾರಣ ಕೃಷಿ ಚಟುವಟಿಕೆ ಮಾಡಲು ಹಾಗೂ ಬಾವಿಗಳ ಅಂತರ್ಜಲ ವೃದ್ಧಿಗೆ ಜಿಲ್ಲೆಯ ಎಲ್ಲಾ ಕೆರೆ, ಕಟ್ಟೆಗಳ ಹಾಗೂ ಕಾಲುವೆಗಳ ಹೂಳೆತ್ತಬೇಕು. ಬ್ಯಾಂಕುಗಳ ಮುಂದೆ ರೈತರಿಗೆ ದೊರಕುವ ಸಾಲ ಮತ್ತು ಸೌಲಭ್ಯಗಳ ನಾಮಫಲಕ ಹಾಕಲು ಕ್ರಮ ವಹಿಸಬೇಕು. ಮಳೆ ಗಾಳಿಗೆ ಮೈಸೂರು ಜಿಲ್ಲೆಯಾದ್ಯಂತ ಸಾವಿರಾರು ಎಕರೆ ಬಾಳೆ ನಷ್ಟವಾಗಿದ್ದು ಇದಕ್ಕೆ ಪರಿಹಾರ ತಕ್ಷಣವೇ ನೀಡಬೇಕು. ನರೇಗಾದಲ್ಲಿ ಕೆಲಸ ಮಾಡಿರುವ ಹಣವನ್ನು ನೀಡದೆ ಬಾಕಿ ಉಳಿಸಿಕೊಂಡಿದ್ದು ಮತ್ತು ಕಳೆದ ವರ್ಷದ ಸಾಮಗ್ರಿ ಮೊತ್ತವನ್ನು ನೀಡಿರುವುದಿಲ್ಲ ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಖಾಸಗಿ ಶಾಲಾ ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ರೈತರ ಮಕ್ಕಳು, ಕೂಲಿ ಕಾರ್ಮಿಕರ ಮಕ್ಕಳ, ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪಡೆದುಕೊಳ್ಳಲು ದೇಣಿಗೆ ಮತ್ತು ಶುಲ್ಕ ಸುಲಿಗೆ ಮಾಡುತ್ತಿದ್ದು, ಪಾವತಿಸಲು ಕಷ್ಟಕರವಾದ ಕಾರಣ ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೀಗಾಗಿ, ಇದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್‌, ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ಟಿ. ನರಸೀಪುರ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್‌‍, ನಂಜನಗೂಡು ಅಧ್ಯಕ್ಷ ದೇವನೂರು ವಿಜೇಂದ್ರ, ಮುಖಂಡರಾದ ಪ್ರದೀಪ್‌ಕುರುಬೂರು, ಅಂಬಳೆ ಮಂಜುನಾಥ್‌‍, ಸಾತಗಳ್ಳಿ ಬಸವರಾಜು, ವರಕೊಡು ನಾಗೇಶ್‌‍, ರಾಜೇಶ್‌‍, ಕೂಡನಹಳ್ಳಿ ಸೋಮಣ್ಣ, ವಿಜಯೇಂದ್ರ, ಷಡಕ್ಷರಿಸ್ವಾಮಿ, ಕಿರಣ್‌ನಂಜುಂಡಸ್ವಾಮಿ, ನಾಗೇಶ್‌ದೊಡ್ಡಕಾಟೂರು, ಮಲ್ಲಶೆಟ್ಟಿ, ಪ್ರಕಾಶ್‌, ವಾಜಮಂಗಲ ಮಹದೇವು, ಮಾಲಿಂಗನಾಯಕ, ಸಿದ್ದರಾಮ, ಗಿರೀಶ್‌‍, ಚಂದ್ರು, ಪ್ರಕಾಶ್‌‍, ಸೋಮಶೇಖರ್‌, ಷಡಕ್ಷರಿ ಮೊದಲಾದವರು ಇದ್ದರು.