ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನೇಕು ಯೋಜನೆ ಜಾರಿಗೊಳಿಸಿದ್ದು ಜನರ ಆರ್ಥಿಕ ಪ್ರಗತಿ ಮತ್ತು ಸ್ವಾವಲಂಬಿ ಬದುಕಿಗೆ ಸಾಧ್ಯವಾಗಲಿದೆ. ಈ ಕುರಿತು ಫಲಾನುಭವಿಗಳ ಅಭಿಪ್ರಾಯ ಮತ್ತು ಯೋಜನೆಗಳ ಅನುಷ್ಠಾನದ ಕುರಿತು ವಿಸೃತ ಅಧ್ಯಯನದ ಅಗತ್ಯವಿದ್ದು ಶೈಕ್ಷಣಿಕ ಪರಿಣಿತರ, ಸಂಶೋಧಕರಿಂದ ಅಧ್ಯಯನ ನಡೆಸಿ ವರದಿ ಸಲ್ಲಿಸಬೇಕು.

ಧಾರವಾಡ:

ಪ್ರಸಕ್ತ ಸಾಲಿನ ಆರ್ಥಿಕ ವರ್ಷ ಮುಗಿಯುತ್ತಿದ್ದು, ಸರ್ಕಾರದಿಂದ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನ ಉಳಿಕೆ ಆಗದಂತೆ ಬಳಸಬೇಕು. ಮುಖ್ಯವಾಗಿ ಫಲಾನುಭವಿಗಳ ಆಧಾರಿತ ಯೋಜನೆಗಳ ಕುರಿತು ಪರಿಣಿತ ತಂಡಗಳಿಂದ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ ಕೈಗೊಂಡು ಯೋಜನೆಗಳ ಸುಧಾರಣೆ ಮತ್ತು ಬೇಡಿಕೆಗಳ ಕುರಿತು ವರದಿ ಸಲ್ಲಿಸಲು ಜಿಪಂ ಆಡಳಿತಾಧಿಕಾರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ವಿ. ರಾಮ್ ಪ್ರಸಾತ್‌ ಮನೋಹರ್ ಹೇಳಿದರು. ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಜರುಗಿಸಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನೇಕು ಯೋಜನೆ ಜಾರಿಗೊಳಿಸಿದ್ದು ಜನರ ಆರ್ಥಿಕ ಪ್ರಗತಿ ಮತ್ತು ಸ್ವಾವಲಂಬಿ ಬದುಕಿಗೆ ಸಾಧ್ಯವಾಗಲಿದೆ. ಈ ಕುರಿತು ಫಲಾನುಭವಿಗಳ ಅಭಿಪ್ರಾಯ ಮತ್ತು ಯೋಜನೆಗಳ ಅನುಷ್ಠಾನದ ಕುರಿತು ವಿಸೃತ ಅಧ್ಯಯನದ ಅಗತ್ಯವಿದ್ದು ಶೈಕ್ಷಣಿಕ ಪರಿಣಿತರ, ಸಂಶೋಧಕರಿಂದ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಕೃಷಿ ಮತ್ತು ಕೃಷಿಗೆ ಪೂರಕವಾದ ಪಶುಸಂಗೋಪನೆ, ತೋಟಗಾರಿಕೆ, ಮೀನುಗಾರಿಕೆ, ರೇಷ್ಮೆ, ಎಪಿಎಂಸಿ ಇಲಾಖೆಗಳು ರೈತ ಸ್ನೇಹಿಯಾಗಿ ಕೆಲಸ ನಿರ್ವಹಿಸಬೇಕು. ಇಲಾಖೆಗಳ ಅಧಿಕಾರಿಗಳು ಇನ್ನೂ ಹೆಚ್ಚು ಕ್ರಿಯಾಶೀಲವಾಗಬೇಕು. ರೇಷ್ಮೆ, ತೋಟಗಾರಿಕೆ, ಮೀನುಗಾರಿಕೆ ಕ್ಷೇತ್ರದ ವಿಸ್ತೀರ್ಣವಾಗಬೇಕು ಎಂದ ಅವರು, ರೈತರು ಕೆಲವು ಬೆಳೆಗಳನ್ನು ಏಕಸ್ವಾಮ್ಯವಾಗಿ ಬೆಳೆಯುತ್ತಿದ್ದು, ಇದರಿಂದ ಉತ್ತಮ ಬೆಲೆ ಹಾಗೂ ಸಕಾಲಕ್ಕೆ ಬೆಳೆ ಮಾರಾಟವಾಗುತ್ತಿಲ್ಲ. ಪ್ರತಿ ವರ್ಷ ಬೆಳೆ ಬದಲಾವಣೆ ಮಾಡಲು ಈ ಮೂಲಕ ಭೂಮಿಯ ಫಲಿತಾಂಶ ಹೆಚ್ಚಳವಾಗಲಿದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕು ಎಂಬ ಸಲಹೆ ನೀಡಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ:

ಎಸ್ಸೆಸ್ಸೆಲ್ಸಿ ಫಲಿತಾಂಶ ಕಳೆದ ವರ್ಷಕ್ಕಿಂತ ಈ ವರ್ಷ ಇನ್ನೂ ಸುಧಾರಣೆ ಆಗಬೇಕು. ಈ ವರ್ಷವೂ ಈಗಿನಿಂದಲೇ ನಿಯಮಿತ ಪಾಠ, ಅಭ್ಯಾಸ ಆಗಬೇಕು. ವಿವಿಧ ವಿದ್ಯಾರ್ಥಿನಿಲಯ ಹಾಗೂ ವಸತಿ ಶಾಲೆಗಳಲ್ಲಿ ನೂರರಷ್ಟು ಫಲಿತಾಂಶ ಆಗಬೇಕು. ಫಲಿತಾಂಶ ಸುಧಾರಣೆ ಆಗದಿದ್ದರೆ, ನಿಲಯಪಾಲಕರ ಮೇಲೆ ಹಾಗೂ ತಾಲೂಕುಮಟ್ಟದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಈಗಿನಿಂದಲೇ ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಎಚ್ಚರಿಸಿದರು.

ಕ್ರಿಯಾಯೋಜನೆ ಅನುಸಾರ ನಿಗದಿಪಡಿಸಿದ ಕಾಮಗಾರಿಗಳು ನರೇಗಾದಲ್ಲಿ ಪೂರ್ಣಗೊಂಡಿಲ್ಲ. ಹೆಚ್ಚಿನ ಉದ್ಯೋಗ ಹಾಗೂ ಜೀವನೋಪಾಯ ಹೆಚ್ಚಿಸಲು ಮೀನುಗಾರಿಕೆ, ಅರಣ್ಯ, ತೋಗಾರಿಕೆ, ರೇಷ್ಮೆ ಮತ್ತು ಪಂಚಾಯತ ರಾಜ್ ಎಂಜಿನಿಯರಿಂಗ್‌ ಇಲಾಖೆಗಳ ಕಾರ್ಯಕ್ರಮ ಮತ್ತು ಕಾಮಗಾರಿಗಳನ್ನು ಶೀಘ್ರವಾಗಿ ಹಮ್ಮಿಕೊಳ್ಳಲು ಸೂಚಿಸಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿದರು. ದೀಪಕ ಮಡಿವಾಳರ ಸ್ವಾಗತಿಸಿದರು. ಮಾರುತಿ ತಳವಾರ ವಂದಿಸಿದರು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು. ಸರ್ಕಾರ ಇಲಾಖೆ ಹಾಗೂ ಅಧಿಕಾರಿಗಳನ್ನು ಕೇವಲ ಅನುದಾನ ಬಳಸಿ ಗುರಿ ಸಾಧಿಸಲು ನೇಮಿಸಿಲ್ಲ. ಕೃಷಿ ಮತ್ತು ಉತ್ಪನ್ನಗಳ ಮೌಲ್ಯವರ್ಧನೆಗೆ ಆದ್ಯತೆ ನೀಡಬೇಕು. ಅಧಿಕಾರಿಗಳು ತಮ್ಮ ಇಲಾಖೆಯ ಯೋಜನೆಗಳನ್ನು ಯಾಂತ್ರಿಕವಾಗಿ ಅನುಷ್ಠಾನಗೊಳಿಸದೆ ಅದರ ಉಪಯುಕ್ತತೆ ಮತ್ತು ಲಾಭವನ್ನು ಜನರಿಗೆ ತಲುಪುವಂತೆ ಮಾಡುವಲ್ಲಿ ಹೆಚ್ಚು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು.

ಡಾ. ವಿ. ರಾಮ್ ಪ್ರಸಾತ್ ಮನೋಹರ್, ಉಸ್ತುವಾರಿ ಕಾರ್ಯದರ್ಶಿ