ಸುಬ್ರಾಯ ಸಂಪಾಜೆಗೆ ಗಮಕಿ ಪುರಸ್ಕಾರ ಗೌರವ

| Published : Oct 24 2025, 01:00 AM IST

ಸಾರಾಂಶ

ಸುಬ್ರಾಯ ಸಂಪಾಜೆ ಅವರಿಗೆ ಪುತ್ತೂರಿನಲ್ಲಿ ಗಮಕಿ ಪುರಸ್ಕಾರ ಗೌರವ ಸನ್ಮಾನ ನಡೆಯಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಕರ್ನಾಟಕ ಗಮಕ ಕಲಾ ಪರಿಷತ್‌ ಮತ್ತು ಬೆಂಗಳೂರು ಮತ್ತು ದ.ಕ. ಜಿಲ್ಲಾ ಘಟಕದ ವತಿಯಿಂದ ಸುಬ್ರಾಯ ಸಂಪಾಜೆ ಅವರಿಗೆ ಪುತ್ತೂರಿನಲ್ಲಿ ಗಮಕಿ ಪುರಸ್ಕಾರ ಗೌರವ ಸನ್ಮಾನ ನಡೆಯಿತು.

ಪುತ್ತೂರಿನಲ್ಲಿ 17 ಮತ್ತು 18 ರಂದು ನಡೆದ 10 ನೇ ದ.ಕ. ಜಿಲ್ಲಾ ಗಮಕ ಕಲಾ ಸಮ್ಮೇಳನದಲ್ಲಿ ಮಡಿಕೇರಿ ಆಕಾಶವಾಣಿ ಕೇಂದ್ರದ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಅವರನ್ನು ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕನ್ನಡ ಕಾವ್ಯಗಳ ಆಯ್ದ ಭಾಗಗಳನ್ನು ‌ಕೊಡಗಿನ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಭಗವದ್ಗೀತೆಯನ್ನು ಆಕಾಶವಾಣಿಯ ಪ್ರಸಾರದಲ್ಲಿ ಗಮಕ ರೂಪದಲ್ಲಿ ಪ್ರಸ್ತುತ ಪಡಿಸಿದ ವಿಶೇಷ ಸಾಧನೆಗಾಗಿ ಕೊಡಗಿನ ಏಕೈಕ ಗಮಕಿ ಸಂಪಾಜೆ ಅವರಿಗೆ ಈ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಯಿತು. ಖ್ಯಾತ ಗಮಕಿ ಮುಳಿಯ ಶಂಕರ ಭಟ್ಟ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಹಿರಿಯ ವಿದ್ವಾಂಸ ತಾಳ್ತಜೆ ವಸಂತಕುಮಾರ್, ಮಾಜಿ ಶಾಸಕ ಅರುಣ್ ಕುಮಾರ್ ಪುತ್ತಿಲ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಗಮಕ ಕಲಾ ಪರಿಷತ್ತಿನ ಪುತ್ತೂರು ಘಟಕದ ಅಧ್ಯಕ್ಷರಾದ ಪ್ರೊ.ವೇದವ್ಯಾಸ ರಾಮಕುಂಜ, ಪ್ರೊ.ಟಿ.ಎನ್. ಮಹಾಲಿಂಗ ಭಟ್ ಇನ್ನಿತರ ಗಣ್ಯರು ಈ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು*