ಕನ್ನಡಪ್ರಭ ವಾರ್ತೆ ಸವದತ್ತಿ

ಕ್ರೀಡಾಪಟುವಿಗೆ ದೇಹ ಮತ್ತು ಮನಸ್ಸು ಒಮ್ಮತದಿಂದ ಕೆಲಸ ಮಾಡಿದಾಗ ಮಾತ್ರ ಆತನಿಗೆ ಯಶಸ್ಸು ಸಿಗಲು ಸಾಧ್ಯವಿದೆ. ಕಬಡ್ಡಿ, ಖೋಖೋ, ವಾಲಿಬಾಲ್, ಫುಟ್‌ಬಾಲ್, ಕ್ರಿಕೆಟ್‌ನಂತಹ ಆಟಗಳು ದೈಹಿಕ ಶ್ರಮವನ್ನು ಹೆಚ್ಚಿಸುತ್ತಿರುವದರಿಂದ ಕ್ರೀಡಾಪಟುಗಳು ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಅನಿವಾರ್ಯ ಎಂದು ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಉಮೇಶ ಬಾಳಿ ಹೇಳಿದರು.ಪಟ್ಟಣದ ಕೆಎಲ್ಇ ಸಂಸ್ಥೆಯ ಎಸ್.ವ್ಹಿ.ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಇವುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಏಕ ವಲಯ ಅಂತರ್ ಕಾಲೇಜುಗಳ ಎರಡು ದಿನಗಳ ಮಹಿಳೆಯರ ಖೋಖೋ ಆಯ್ಕೆ ಪ್ರಕ್ರಿಯೆ ಮತ್ತು ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಖೋಖೋ ಆಯ್ಕೆ ಪ್ರಕ್ರಿಯೆಯಲ್ಲಿ ಬೆಳಗಾವಿಯ ಬಿ.ಕೆ.ಕಾಲೇಜು ಪ್ರಥಮ, ಸವದತ್ತಿಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯ ದ್ವಿತೀಯ ಮತ್ತು ರಾಮದುರ್ಗದ ಐ.ಎಸ್.ಯಾದವಾಡ ಸರಕಾರಿ ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನ ಪಡೆದವು. ಪ್ರಾಚಾರ್ಯ ಡಾ.ಎನ್.ಆರ್.ಸವತಿಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ ೨೬ ಕಾಲೇಜಿನಿಂದ ಆಗಮಿಸಿದ ೭೪ ಸ್ಪರ್ಧಿಗಳು ಭಾಗವಹಿಸಿದ್ದರು.ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎ.ಎಫ್.ಬದಾಮಿ, ವಿ.ಎಸ್.ಮೀಶಿ, ಡಾ.ಎನ್.ಎ.ಕೌಜಗೇರಿ, ಎ.ಎ.ಹಳ್ಳೂರ, ಸ್ನೇಹಾ ಗಂಗಲ, ಕಿರಣಕುಮಾರ್ ಲಮಾಣಿ, ಪಿ.ಎಫ್.ಹಾದಿಮನಿ, ಎಂ.ಎನ್.ಸಂಗೊಳ್ಳಿ, ಕೆ.ಬಿ.ನರಗುಂದ, ಎಸ್.ಜೆ.ಮಜ್ಜಗಿ, ಅಶೋಕ ಪಮ್ಮಾರ, ಬಿ.ಬಿ.ಕಬಾಡಗಿ, ಬಸವರಾಜ ಪುಟ್ಟಿ, ಡಾ.ಎಚ್.ಎನ್.ಲೋಕೇಶ್, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪೂರ್ಣಿಮಾ ಹುಡೇದ ಮತ್ತು ಕಾಶವ್ವ ನಾಯ್ಕರ್ ಪ್ರಾರ್ಥಿಸಿದರು, ಪ್ರೊ. ಕೆ.ರಾಮರೆಡ್ಡಿ ಸ್ವಾಗತಿಸಿದರು, ಡಾ.ಗೀತಾ ಮಲ್ಲಾಪುರ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರೊ.ಶಿವಾನಂದ ಹೊಳಿ ವಂದಿಸಿದರು.