ಸಾರಾಂಶ
ಶಿವಮೊಗ್ಗ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಗುಣಮಟ್ಟದ ಎಂಜಿನಿಯರ್ಗಳು, ನಿರ್ವಾಹಕರು ಅಪರೂಪವಾಗುತ್ತಿದ್ದು, ತಾಂತ್ರಿಕ ಜ್ಞಾನದ ಜೊತೆಗೆ ಸಾಮಾಜಿಕ ಜಾಗೃತಿಯುಳ್ಳ ವೃತ್ತಿಪರತೆ ಅತ್ಯವಶ್ಯಕ ಎಂದು ಪ್ರಾರ್ಥನಾ ಎಂಜಿನಿಯರಿಂಗ್ ಕಂಪನಿ ನಿರ್ದೇಶಕ ಕೆ.ವಿ.ನಾರಾಯಣ್ ಅಭಿಪ್ರಾಯಪಟ್ಟರು.
ನಗರದ ಜೆಎನ್ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಥಮ ವರ್ಷದ ಎಂಬಿಎ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮ (ಓರಿಯಂಟೇಷನ್) ಉದ್ಘಾಟಿಸಿ ಅವರು ಮಾತನಾಡಿದರು.ಪ್ರತಿಯೊಂದು ಯಶಸ್ಸು ಕನಸಿನಿಂದಲೇ ಆರಂಭವಾಗುತ್ತದೆ. ವೈಫಲ್ಯವು ಹಿಂಜರಿಕೆ ಅಲ್ಲ, ಅದು ಯಶಸ್ಸಿನ ಮೆಟ್ಟಿಲು. ಜೀವನದಲ್ಲಿ ದೃಢ ನಿಶ್ಚಯ, ನಿಷ್ಠೆ, ಶಿಸ್ತು, ಭಕ್ತಿಯ ಜೊತೆಗೆ ಪರಿಶ್ರಮ ಮತ್ತು ದೃಢ ಮನೋಬಲದಿಂದ ಮಾತ್ರ ಯಶಸ್ಸು ಸಾಧ್ಯ. ಎಂಬಿಎ ವಿದ್ಯಾರ್ಥಿಗಳಾಗಿ ಒಂದು ವಿಶಾಲ ಕ್ಷೇತ್ರದ ಪ್ರವೇಶ ಹಂತದಲ್ಲಿದ್ದಿರಿ. ಇಲ್ಲಿ ನಿರಂತರವಾಗಿ ಕಲಿಯುತ್ತ ಅವಕಾಶಗಳನ್ನು ಅನ್ವೇಷಿಸಿರಿ ಎಂದರು. ಉತ್ಪನ್ನಗಳ ಬಗ್ಗೆ ಜ್ಞಾನ ಹಾಗೂ ಸಂಪನ್ಮೂಲಗಳ ನಿರ್ವಹಣೆಯು ಉದ್ಯಮಶೀಲತೆ ಮತ್ತು ಕೈಗಾರಿಕಾ ಅರಿವು ವಿಸ್ತರಿಸಿಕೊಳ್ಳುವಂತೆ ಮಾಡುತ್ತದೆ. ತ್ಯಾಜ್ಯ ನಿರ್ವಹಣೆ ಎಂಬುದು ಸಮಾಜ ಎದುರಿಸುತ್ತಿರುವ ಬಹು ದೊಡ್ಡ ಸವಾಲು. ಪರಿಸರ ಸಂರಕ್ಷಣೆಯನ್ನು ಕೇಂದ್ರೀಕರಿಸಿ ಉದ್ಯಮಶೀಲ ಅವಕಾಶಗಳನ್ನು ರೂಪಿಸಿಕೊಳ್ಳಿ. ಯಶಸ್ವಿ ಉದ್ಯಮಿಗಳ ಬದುಕಿನ ಹಾದಿಯಿಂದ ಪ್ರೇರಣೆ ಪಡೆಯಿರಿ. ವೈಫಲ್ಯಗಳಿಗೆ ಹೆದರದೆ, ಪ್ರಯೋಗಶೀಲ ಮನಸ್ಥಿತಿಯೊಂದಿಗೆ ಸಂವೇದನಶೀಲ ವ್ಯಕ್ತಿತ್ವವಾಗಿ ಬಾಳಿ ಎಂದು ಹಾರೈಸಿದರು.ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಸಮಯ ಬದುಕಿನ ಅತಿ ದೊಡ್ಡ ಗುರು. ಬದುಕು ಕಲಿಸುವ ಅನುಭವಕ್ಕೆ ಸಮಯ ಸಾಕ್ಷಿಯಾಗಿರುತ್ತದೆ. ಅಂತಹ ಬದುಕಿನಲ್ಲಿ ಸಿಗುವ ಸ್ನೇಹಿತ ದಿವ್ಯ ಔಷಧವಿರುವ ದೇವರ ಕೊಡುಗೆ ಎಂದು ಹೇಳಿದರು. ಆಧುನಿಕ ಜೀವನ ಪದ್ದತಿಯಲ್ಲಿ, ಸಂಸ್ಕೃತಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವ ಯಾವ ಆಶಯಗಳನ್ನು, ಇಂದಿನ ಜೀವನ ಪದ್ಧತಿ ಕಲಿಸಿಕೊಡುತ್ತಿಲ್ಲ. ತಂದೆ- ತಾಯಿಯ ಬೆಲೆ ಗೊತ್ತಿಲ್ಲದವರು ನಿಜವಾದ ಅನಾಥರು ಎಂದ ಅವರು, ಪತ್ರಿಕೆ ಮತ್ತು ಪುಸ್ತಕಗಳನ್ನು ಓದುವುದರ ಮೂಲಕ ಯುವಸಮೂಹ ಸಾಂಸ್ಕೃತಿಕ ಶ್ರೀಮಂತರಾಗಲು ಪ್ರಯತ್ನಿಸಬೇಕು ಎಂದರು.ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಹೊಸದನ್ನು ನಿರ್ಮಿಸಲು ಹಳೆಯದನ್ನು ಬದಲಿಸುವ ಧೈರ್ಯವಿರಬೇಕು. ಯಾವುದೇ ಜಾಗತಿಕ ಘಟನೆಗಳು ನೇರವಾಗಿ ವ್ಯಾಪಾರ ಮತ್ತು ಆಡಳಿತ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಸ್ವತಃ ನವೀಕರಿಸಿಕೊಂಡು ಹೋಗುವುದು ಅಗತ್ಯ. ವಿದ್ಯಾರ್ಥಿಗಳು ಸಮಾಜದ ಬಾಧ್ಯತೆಗಳನ್ನು ಅರಿತು, ತಮ್ಮ ವಿದ್ಯೆಯನ್ನು ಮತ್ತು ಪ್ರತಿಭೆಯನ್ನು ಸಮಾಜದ ಅಭಿವೃದ್ಧಿಗೆ ಬಳಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎನ್ಇಎಸ್ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಎಂ.ಆರ್.ಸೀತಾಲಕ್ಷ್ಮೀ, ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.ಡಾ.ಸಂತೋಷ್ ಸ್ವಾಗತಿಸಿದರು. ಡಾ.ಪಿ.ಎಸ್.ಸುಭದ್ರ ಪ್ರಾರ್ಥಿಸಿದರು. ಡಾ.ಬಿ.ವಿ.ಶ್ರೀನಿವಾಸಮೂರ್ತಿ ವಂದಿಸಿದರು. ಡಾ.ವಿಕ್ರಮ್.ವಿ ನಿರೂಪಿಸಿದರು.
;Resize=(128,128))
;Resize=(128,128))