ಸಾರಾಂಶ
ಕನ್ನಡಪ್ರಭ ವಾರ್ತೆ ಗುರುಮಠಕಲ್
ಗೆಲುವು ಯಶಸ್ಸಿನ ಕೆಲವು ನಿಯಮಗಳನ್ನು ಹೊಂದಿವೆ. ಅವುಗಳನ್ನು ಅನುಸರಿಸಿದಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ನಮ್ಮದಾಗುತ್ತದೆ ಎಂದು ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಸೈದಾಪುರ ಪಟ್ಟಣದ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಅಲ್ಪದರಲ್ಲಿ ಸುಖವಿಲ್ಲ, ಗುರಿ ಸಾಧ್ಯವಾದಷ್ಟು ದೊಡ್ಡದಿರಬೇಕು. ಅವುಗಳನ್ನು ಹಂತಗಳನ್ನಾಗಿ ನಿರ್ಮಾಣ ಮಾಡಿಕೊಂಡು ಪರಿಶ್ರಮ, ಕಟ್ಟುನಿಟ್ಟಿನ ಬ್ರಹ್ಮಚಾರ್ಯ, ಗುರುಭಕ್ತಿ, ಕಲಿಯುವ ವಿಷಯ ಪ್ರೀತಿಸಿ ವೇಳಾಪಟ್ಟಿ ನಿರ್ಮಾಣ ಮಾಡಿಕೊಂಡು ಶಿಸ್ತಿನಿಂದ ಪ್ರಯತ್ನ ಮಾಡಿದಾಗ ಮಾತ್ರ ಪ್ರತಿಯೊಬ್ಬರು ಉನ್ನತ ಸಾಧನೆ ಮಾಡಬಹುದು ಎಂದರು.
ಸಂಸ್ಥೆ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ ಮಾತನಾಡಿ, ಉತ್ತಮ ಸಾಧಕರನ್ನು ನಾವು ನೋಡಿದಾಗ ಅವರಲ್ಲಿ ಅವರದೆಯಾದ ವ್ಯಕ್ತಿತ್ವದ ಗುಣಗಳಿವೆ. ಏಕಾಗ್ರತೆ, ಸತತ ಪರಿಶ್ರಮದಿಂದ ಮಾತ್ರ ಉತ್ತಮ ನಾಗರಿಕರಾಗುತ್ತೇವೆ ಎಂದು ಹೇಳಿದರು.
ಸಂಸ್ಥೆಯ ಮಾಜಿ ಕಾರ್ಯದರ್ಶಿ ಹಾಗೂ ವಿಕಾಸ ಅಕಾಡೆಮಿ ಸಂಚಾಲಕರಾದ ಭೀಮಣ್ಣಗೌಡ ಪಾಟೀಲ್ ಕ್ಯಾತನಾಳ ಮಾತನಾಡಿ, ನಮ್ಮ ಮನವಿಗೆ ಸ್ಪಂದಿಸಿ ಸಮಯದ ಅಭಾವದ ಮಧ್ಯದಲ್ಲಿ ಶ್ರೀಗಳು ಬಂದು ಮಕ್ಕಳಿಗೆ ಉತ್ತಮ ಉಪದೇಶ ನೀಡಿದ್ದಾರೆ. ಇವರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ. ಈ ಕಾರ್ಯಕ್ರಮದ ಮಹತ್ವ ಹೆಚ್ಚಾಗುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ವಿವೇಕಾನಂದ ಆಶ್ರಮದ ವೇಣುಗೋಪಾಲ, ಕೋಶಾಧ್ಯಕ್ಷ ಮುಕುಂದಕುಮಾರ ಅಲಿಝಾರ, ಶಿಕ್ಷಣ ಪ್ರೇಮಿ ವೆಂಕಟೇಶ ಪೂರಿ, ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಹಂಪಣ್ಣ ಸಜ್ಜನಶೆಟ್ಟಿ, ಭೀಮಣ್ಣ ವಡವಟ್ ಸೇರಿ ಇತರರಿದ್ದರು. ಕರಬಸಯ್ಯ ದಂಡಿಗಿಮಠ ಸ್ವಾಗತಿಸಿದರು. ಚಂದ್ರಶೇಖರ ಡೊಣ್ಣೆಗೌಡ ನಿರೂಪಿಸಿದರು.