ಇಚ್ಛೆಯಿಂದ ಕೈಗೊಂಡ ಕೆಲಸದಲ್ಲಿ ಗೆಲುವು ಸಾಧ್ಯ: ಭೀಮಣ್ಣ ನಾಯ್ಕ

| Published : Nov 16 2025, 02:45 AM IST

ಇಚ್ಛೆಯಿಂದ ಕೈಗೊಂಡ ಕೆಲಸದಲ್ಲಿ ಗೆಲುವು ಸಾಧ್ಯ: ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಸತತ ಪ್ರಯತ್ನದ ಮೂಲಕ ಯಶಸ್ಸು ಸಾಧಿಸಬಹುದು. ಇಚ್ಛೆಯಿಂದ ಕೈಗೊಂಡ ಕೆಲಸದಿಂದ ಖಂಡಿತ ಗೆಲುವು ನಮ್ಮದಾಗುತ್ತದೆ.

ಚೆಸ್ ಪಾರ್ಕ್ ಉದ್ಘಾಟಿಸಿದ ಶಾಸಕಕನ್ನಡಪ್ರಭ ವಾರ್ತೆ ಶಿರಸಿ

ಸತತ ಪ್ರಯತ್ನದ ಮೂಲಕ ಯಶಸ್ಸು ಸಾಧಿಸಬಹುದು. ಇಚ್ಛೆಯಿಂದ ಕೈಗೊಂಡ ಕೆಲಸದಿಂದ ಖಂಡಿತ ಗೆಲುವು ನಮ್ಮದಾಗುತ್ತದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ರೂಢಿಸಿಕೊಂಡಾಗ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ತಾಲೂಕಿನ ಇಸಳೂರಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ₹8 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ಚೆಸ್ ಪಾರ್ಕ್ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನದಲ್ಲಿ ಶಿಕ್ಷಣ ಇಲ್ಲವಾದರೆ ಬೆಲೆ ಇಲ್ಲ. ಸತತ ಪ್ರಯತ್ನದಲ್ಲಿ ತೊಡಗಿಕೊಂಡಾಗ ಸಾಧಿಸಬಹುದು. ಚದುರಂಗ ಬುದ್ಧಿವಂತರ ಕ್ರೀಡೆಯಾಗಿದ್ದು, ರಾಜ್ಯ ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಹಣ ವ್ಯಯ ಮಾಡುತ್ತಿದೆ.‌ ದಿನದ 24 ಗಂಟೆಯಲ್ಲಿ 18 ತಾಸು ಪರಿಶ್ರಮದಿಂದ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಗೆಲ್ಲಬೇಕು ಎಂಬ ಇಚ್ಛೆ ಬಂದಾಗ ಪ್ರತಿ ಆಟದಲ್ಲಿ ಗೆಲುವು ಸಾಧಿಸಬಹುದು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗಿ ಪ್ರತಿಯೊಬ್ಬರು ಚೆಸ್ ಪಾರ್ಕ್‌ನ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಸಹಾಯಕ ಆಯುಕ್ತೆ ಕೆ.ವಿ. ಕಾವ್ಯಾರಾಣಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಕಲಿಕೆಗೆ ಉತ್ತಮ ವಾತಾವಣವನ್ನು ಸರ್ಕಾರ ಕಲ್ಪಿಸುತ್ತಿದ್ದು, ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದಾಗ ದೇಶ ಅಭಿವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದಿಂದ ತಮ್ಮಲ್ಲಿರುವ ಕೌಶಲ್ಯಾಭಿವೃದ್ಧಿಪಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳಬೇಕು. ಕಲಿತ ಶಾಲೆ, ಕಲಿಸಿದ ಗುರುಗಳು, ಸಮಾಜದಿಂದ ಪಡೆದುಕೊಂಡಿರುವುದನ್ನು ಪುನಃ ಸಮಾಜಕ್ಕೆ ಅರ್ಪಣೆ ಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ಇಸಳೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು.

ಪ್ರೌಢಶಾಲೆ ದೈಹಿಕ ಶಿಕ್ಷಕ, ತಾಲೂಕು ಯುವಜನ ಸೇವೆ ಹಾಗೂ ಕ್ರೀಡಾಧಿಕಾರಿ ಮತ್ತು ಸರ್ಕಾರಿ ನೌಕರರ ಸಂಘದ ಶಿರಸಿ ಶೈಕ್ಷಣಿಕ ಜಿಲ್ಲಾಧ್ಯಕ್ಷ ಕಿರಣಕುಮಾರ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಗ್ರಾಪಂ ಉಪಾಧ್ಯಕ್ಷೆ ಉಷಾ ಶೆಟ್ಟಿ, ಸದಸ್ಯರಾದ ವಿವೇಕ ಪೂಜಾರಿ, ಪ್ರಸನ್ನ ಹೆಗಡೆ ಇಸಳೂರು, ಭೂ ನ್ಯಾಯ ಮಂಡಳಿ ಸದಸ್ಯ ಎಸ್.ಕೆ. ಭಾಗ್ವತ ಶಿರ್ಸಿಮಕ್ಕಿ, ಎಂಜಿನಿಯರ್ ಬಸವರಾಜ ಬಳ್ಳಾರಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಚೆನ್ನಬಸಪ್ಪ ಹಾವಣಗಿ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರಿಕೊಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ವಿ. ಗಣೇಶ, ಮತ್ತಿತರರು ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕಿ ಸುಮಂಗಲಾ ಜೋಶಿ ಸ್ವಾಗತಿಸಿದರು. ಶಿಕ್ಷಕ ದಿವಾಕರ ಮರಾಠಿ ನಿರೂಪಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.ಅರಣ್ಯ ಇಲಾಖೆ ವಿರುದ್ಧ ದೂರು:

ಅರಣ್ಯ ಇಲಾಖೆಯ ಅಧಿಕಾರಿಗಳು ಸುಖಾಸುಮ್ಮನೆ ಸಮಸ್ಯೆ ಮಾಡುತ್ತಿದ್ದಾರೆ ಎಂದು ಸ್ಥಳೀಯರು ಶಾಸಕರ ಬಳಿ ತಮ್ಮ ಅಳಲು ತೋಡಿಕೊಂಡಾಗ, ಪ್ರತಿಕ್ರಿಯಿಸಿದ ಶಾಸಕರು, ಅರಣ್ಯ ಸಂಪತ್ತು ತೆರೆದ ಖಜಾನೆಯಾಗಿದ್ದು, ರೈತರಿಂದ ಅರಣ್ಯ ಉಳಿದುಕೊಂಡಿದೆ ಎಂಬುದನ್ನು ಇಲಾಖೆ ಅರ್ಥ ಮಾಡಿಕೊಳ್ಳಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರಿಗೆ ತೊಂದರೆ ನೀಡುವುದನ್ನು ಸಹಿಸುವುದಿಲ್ಲ. ರೈತರಿಗೆ ಸಮಸ್ಯೆ ನೀಡಿದರೆ ನಾನು ಎದುರು ಬಂದು ನಿಲ್ಲುತ್ತೇನೆ ಎಂದು ಭರವಸೆ ನೀಡಿದರು.