ಕೆಎಂಸಿ ಆಸ್ಪತ್ರೆಯ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ವಿಭಾಗದ ಕನ್ಸಲ್ಟಂಟೆಂಟ್ ಡಾ. ಅಭಯ್ ತಾರನಾಥ್ ಕಾಮತ್ ಮತ್ತವರ ತಂಡ ಬಾಯಿ ತೆರೆಯಲಾಗದೆ ಬಳಲುತ್ತಿದ್ದ ಬಾಲಕನ ಜೀವನ ಸುಧಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು: ಜನನದ ಸಮಯದಿಂದಲೇ ಅಪರೂಪದ ದವಡೆ ಸಮಸ್ಯೆಯಿಂದ ಬಳಲುತ್ತಿದ್ದ ಐದು ವರ್ಷದ ಬಾಲಕನಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಬಾಲಕನಿಗೆ ಹೊಸ ಜೀವನ ನೀಡಿದ್ದಾರೆ. ಟಿಎಂಜೆ (ಟೆಂಪೊರೊಮೆಂಡಿಬ್ಯುಲರ್) ಆನ್ ಕಿಲೊಸಿಸ್ ಸಮಸ್ಯೆಯಿಂದ ಬಾಲಕ ಆರವ್ (ಹೆಸರು ಬದಲಾಯಿಸಲಾಗಿದೆ) ಬಳಲುತ್ತಿದ್ದು ಸರಿಯಾಗಿ ಬಾಯಿ ತೆರೆಯಲು ಸಾಧ್ಯವಾಗದೇ ಸಂಕಷ್ಟ ಅನುಭವಿಸುತ್ತಿದ್ದ. ಆಸ್ಪತ್ರೆಯ ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ವಿಭಾಗದ ಕನ್ಸಲ್ಟಂಟೆಂಟ್ ಡಾ. ಅಭಯ್ ತಾರನಾಥ್ ಕಾಮತ್ ಮತ್ತವರ ತಂಡ ಬಾಲಕನ ಜೀವನ ಸುಧಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.ಏನಿದು ಅಪರೂಪದ ದವಡೆ ಸಮಸ್ಯೆ?: ಟಿಎಮ್ಜಿ ಆಂಕಿಲೊಸಿಸ್ ಎಂಬ ಸಮಸ್ಯೆಯಿಂದ ನಾಲ್ಕು ವರ್ಷಗಳಿಂದ ಬಾಲಕನಿಗೆ ಬಾಯಿ ತೆರೆಯಲೂ ಸಾಧ್ಯವಾಗದೇ ಸಮಸ್ಯೆ ಉಂಟಾಗಿತ್ತು. ಇದರಿಂದ ಯಾವುದೇ ಗಟ್ಟಿ ಆಹಾರ ಸೇವನೆ ಸಾಧ್ಯವಾಗುತ್ತಿರಲಿಲ್ಲ. ಮಾತನಾಡುವುದು, ತನಗೆ ಅನ್ನಿಸಿದನ್ನು ವ್ಯಕ್ತಪಡಿಸುವುದು ಬಾಲಕನಿಗೆ ಕಷ್ಟವಾಗಿತ್ತು. ಜೊತೆಗೆ ಈ ಸಮಸ್ಯೆಯಿಂದ ಬಾಲಕನ ಕೆಳ ದವಡೆಯ ಬೆಳವಣಿಗೆ ಕುಂಠಿತಗೊಂಡಿದ್ದು ತೀವ್ರ ಮಟ್ಟದಲ್ಲಿ ಮುಖ ವಿರೂಪಗೊಂಡಿತ್ತು. ನಿದ್ದೆ ಸಮಸ್ಯೆ ಗೊರಕೆಯಂತಹ ಸಮಸ್ಯೆ ಕೂಡ ಎದುರಾಗಿದ್ದು ಸಾಕಷ್ಟು ಸಾಮಾಜಿಕ ಕಳಂಕ, ಭಾವನಾತ್ಮಕ ಹೊರೆಯನ್ನೂ ಅನುಭವಿಸುವಂತಾಗಿತ್ತು.ಬಾಲಕನ ಸಮಸ್ಯೆಯ ಸಂಕೀರ್ಣತೆಯನ್ನು ಅರಿತ ಆಸ್ಪತ್ರೆಯ ಬಹುವಿಭಾಗೀಯ ತಜ್ಞರ ತಂಡ ವಿವಿಧ ಹಂತದಲ್ಲಿ ಚಿಕಿತ್ಸೆಯನ್ನು ಆರಂಭಿಸಿತ್ತು. ಓರಲ್ ಮತ್ತು ಮ್ಯಾಕ್ಸಿಲ್ಲೋಫೇಶಿಯಲ್ ಸರ್ಜರಿ ವಿಭಾಗದ ಡಾ ಅಭಯ್ ಟಿ. ಕಾಮತ್ ಮತ್ತು ಡಾ.ವಾಸುದೇವ್ ದಾಸ್, ಮಕ್ಕಳ ತಜ್ಞರಾದ ಡಾ ಸೌಂದರ್ಯ, ಕಾರ್ಡಿಯೊ ಥೆರೈಕಿಕ್ ಮತ್ತು ವ್ಯಾಸೂಲರ್ ಸರ್ಜನ್ ಡಾ. ಮಾಧವ್ ಕಾಮತ್, ಅರವಳಿಕೆ ತಜ್ಞರಾದ ಡಾ. ಫ್ರಿಡಾ ಮತ್ತು ಮಣಿಪಾಲ್ ದಂತ ವೈದ್ಯಕೀಯ ವಿಭಾ ಪ್ರೊಫೆಸರ್ ಮತ್ತು ಮುಖ್ಯಸ್ಥರಾದ ಡಾ. ಆದರ್ಶ ಕೆ. ಕೂಡ ತಂಡದಲ್ಲಿ ಇದ್ದರು.ಮೊದಲ ಹಂತದ ಚಿಕಿತ್ಸೆಯಲ್ಲಿ ಮಾನ್ಡಿಬಲ್ (ದವಡೆಯನ್ನು ರಚಿಸುವ ಯು ಆಕಾರದ ಮೂಳೆ)ಬೆಳವಣಿಗೆಗೆ ಶಸ್ತ್ರಚಿಕಿತ್ಸೆ ಮೂಲಕ ಎಕ್ಸಟರ್ನಲ್ ಡಿಸ್ಟ್ರಾಕ್ಟರ್ ಡಿವೈಸ್ (ಸಾಧನ) ಅಳವಡಿಸಿ ಆಸ್ಪತ್ರೆಯ ತೀವು ನಿಗಾದಲ್ಲಿ ದಿನಕ್ಕೆ ಎರಡು ಬಾರಿ ಈ ಸಾಧನವನ್ನು ಸಕ್ರಿಯಗೊಳಿಸಿ ಕ್ರಮೇಣ ಕೆಳ ದವಡೆಯ ಭಾಗ ಮುಂದೆ ಬರುವಂತೆ ಮಾಡಲಾಯಿತು. 10 ತಿಂಗಳ ಬಳಿಕ ಎರಡನೇ ಹಂತದಲ್ಲಿ ಹೊಸ ಮೂಳೆಯ ಬೆಳವಣಿಗೆಯನ್ನು ರಕ್ಷಿಸಲು ಅಂಕಿಲೋಸ್ಟ್ ಮಾಸ್ನ್ನು ಹೊರತೆಗೆಯಲಾಯಿತು, ಜೊತೆಗೆ ಮೂಳೆ ಕಸಿಯನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು. ಈ ಮೂಲಕ ಬಾಲಕನಿಗೆ ಬಾಯಿ ತೆರೆಯಲು ಸಾಧ್ಯವಾಗುವಂತೆ ಮಾಡಲಾಯಿತು. ಚಿಕಿತ್ಸೆಯಲ್ಲಿ ಇದೊಂದು ಮಹತ್ವದ ಘಟ್ಟವಾಗಿ ಪರಿಣಮಿಸಿದೆ. ಸದ್ಯ ಬಾಲಕ ಸುಲಭವಾಗಿ ಆಹಾರವನ್ನು ಅಗೆಯಬಹುದು. ಹಾಗೇ ಸಮಾಜವನ್ನು ನಗುಮುಖದಲ್ಲಿ ಎದುರಿಸಲು ಸಾಧ್ಯವಾಗಿದೆ.ಡಾ. ಅಭಯ್ ತಾರಾನಾಥ್ ಕಾಮತ್, ಮಕ್ಕಳ ತಜ್ಞೆ ಡಾ. ಸೌಂದರ್ಯ ಶಸ್ತ್ರಚಿಕಿತ್ಸೆ ನೆರವೇರಿಸಿದರು.