ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಎಜೆ ಆಸತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ಎಂಡೋವಾಸ್ಕುಲರ್ ಅನ್ನೂರಿಸಮ್ ರಿಪೇರಿ (ಇವಿಎಆರ್) ಎಂಬ ಹಿಂದಿನ ಸ್ಟೆಂಟ್ಸ್ ವಿಧಾನದಿಂದ ಉಂಟಾದ ತೊಡಕುಗಳ ನಂತರ ಬಿದಿದ್ದ ಅತ್ಯಂತ ಅಪಾಯಕಾರಿ ಕಿಬ್ಬೊಟ್ಟೆಯ ಮಹಾಪಧಮನಿಯ ಅನ್ನೂರಿಸಮ್ನ್ನು ಸರಿಪಡಿಸಲು ಕರಾವಳಿ ಕರ್ನಾಟಕದಲ್ಲಿ ಮೊದಲ ತೆರೆದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಮತ್ತು ಅಧಿಕ ರಕ್ತದೊತ್ತಡದಿಂದ ಪೀಡಿತ 57 ವರ್ಷದ ಪುರುಷ ರೋಗಿಗೆ ನಿಯಮಿತವಾಗಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಮೂತ್ರಪಿಂಡ ಕಸಿಗೆ ತಯಾರಿ ನಡೆಯುತಿತ್ತು. ಪೂರ್ವ ತಪಾಸಣೆಯ ಸಂದರ್ಭದಲ್ಲಿ ಸಿಟಿ ಅಂಜಿಯೋಗ್ರಾಫಿಯ ಮೂಲಕ ಹೃದಯದಿಂದ ಕೆಳಭಾಗಕ್ಕೆ ರಕ್ತ ಸಾಗಿಸುವ ಪ್ರಮುಖ ಶಿರೆಯಾದ ಕಿಬ್ಬೊಟ್ಟೆಯ ಮಹಾಪಧಮನಿಯಲ್ಲಿ ದೊಡ್ಡ ಉಬ್ಬು (ಅನ್ಯೂರಿಸಮ್) ಪತ್ತೆಯಾಯಿತು. ತಕ್ಷಣದ ಅಗತ್ಯತೆ ಇರುವುದರಿಂದ ಕನಿಷ್ಠ ಆಕ್ರಮಣಕಾರಿ ವಿಧಾನವಾದ ಎಂಡೋವಾಸ್ಕುಲರ್ ಅನ್ನೂರಿಸಮ್ ರಿಪೇರಿ (ಇವಿಎಆರ್) ಪ್ರಕ್ರಿಯೆಯ ಮೂಲಕ ರೋಗಿಗೆ ಸೆಂಟ್ ಅಳವಡಿಸಲಾಯಿತು.
ಆದರೆ ಎರಡು ತಿಂಗಳ ಬಳಿಕ ಆ ರಕ್ತನಾಳದಲ್ಲಿ ಸೋರಿಕೆ ಆರಂಭವಾಗಿ ಕೊನೆಗೆ ಛಿದ್ರವಾಯಿತು. ತಕ್ಷಣವೇ ಎ.ಜೆ. ಆಸ್ಪತ್ರೆಯ ತಜ್ಞ ವೈದ್ಯರ ತಂಡ ಈ ಗಂಭೀರ ಪರಿಸ್ಥಿತಿಗೆ ಪ್ರತಿಕ್ರಿಯಿಸಿ, ಸೋರಿಕೆಯಾಗುತ್ತಿದ್ದ ಸ್ಟೆಂಟ್ ಅನ್ನು ತೆಗೆದುಹಾಕಿ ಹಾನಿಗೊಂಡ ಧಮನಿಯನ್ನು ಸರಿಪಡಿಸಲು ಜಟಿಲವಾದ ತೆರೆದ ಶಸ್ತ್ರಚಿಕಿತ್ಸೆ ನಡೆಸಿತು.ಈ ಗಂಭೀರ ಜೀವರಕ್ಷಣಾತ್ಮಕ ಶಸ್ತ್ರಚಿಕಿತ್ಸೆಗೆ ಕಾರ್ಡಿಯೋಫೊರಾಸಿಕ್, ನಾಳೀಯ ಮತ್ತು ಎಂಡೋವಾಸ್ಕುಲರ್ ಸರ್ಜನ್ ಡಾ. ಸಂಭ್ರಮ್ ಶೆಟ್ಟಿ ನೇತೃತ್ವ ವಹಿಸಿದ್ದರು. ಡಾ. ಜಯಶಂಕರ್ ಮಾರ್ಲಾ (ಕಾರ್ಡಿಯೋಫೊರಾಸಿಕ್ ಸರ್ಜನ್), ಡಾ. ಶಿವಶಂಕರ್ ಭಟ್ (ಸಾಮಾನ್ಯ ಹಾಗೂ ಲ್ಯಾಪರೊಸ್ಕೋಪಿಕ್ ಸರ್ಜನ್), ಡಾ. ಗುರುರಾಜ್ ತಂತ್ರಿ ಮತ್ತು ಡಾ. ರಾಕೇಶ್ (ಹೃದಯ ಅರಿವಳಿಕೆ ತಜ್ಞರು) ಮತ್ತು ಡಾ. ಸುದೇಶ್ ರಾವ್ (ಎಂಐಸಿಯು ಇಂಟೆನ್ಸಿವಿಸ್ಟ್) ಮತ್ತಿತರ ತಂಡದೊಂದಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ನಿಖರವಾದ ಆರೈಕೆಯಿಂದ ರೋಗಿ ಚೇತರಿಸಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.ಈ ಸಾಧನೆ ಕುರಿತು ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.