ಮಹಿಳೆಯಲ್ಲಿದ್ದ ಭ್ರೂಣದೊಳಗೆ ಬೆಳೆಯುತ್ತಿದ್ದ ಭ್ರೂಣ ತೆಗೆಯುವಲ್ಲಿ ವೈದ್ಯರು ಯಶಸ್ವಿ

| N/A | Published : Feb 17 2025, 01:31 AM IST / Updated: Feb 17 2025, 01:01 PM IST

ಮಹಿಳೆಯಲ್ಲಿದ್ದ ಭ್ರೂಣದೊಳಗೆ ಬೆಳೆಯುತ್ತಿದ್ದ ಭ್ರೂಣ ತೆಗೆಯುವಲ್ಲಿ ವೈದ್ಯರು ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

 ಮಹಿಳೆಯಲ್ಲಿದ್ದ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುತ್ತಿರುವುದನ್ನು ಗಮನಿಸಿದ ವೈದ್ಯರು ಹೆರಿಗೆ ನಂತರ ನವಜಾತ ಶಿಶುವಿನ ಹೊಟ್ಟೆಯೊಳಗೆ ಬೆಳೆಯುತ್ತಿದ್ದ ಭ್ರೂಣವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ  ಶಸ್ತ್ರಚಿಕಿತ್ಸಕರು ಯಶಸ್ವಿಯಾಗಿದ್ದಾರೆ.

 ಬೆಳಗಾವಿ : ಗರ್ಭಿಣಿ ಮಹಿಳೆಯಲ್ಲಿದ್ದ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುತ್ತಿರುವುದನ್ನು ಗಮನಿಸಿದ ವೈದ್ಯರು ಹೆರಿಗೆ ನಂತರ ನವಜಾತ ಶಿಶುವಿನ ಹೊಟ್ಟೆಯೊಳಗೆ ಬೆಳೆಯುತ್ತಿದ್ದ ಭ್ರೂಣವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯುವಲ್ಲಿ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕರು ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರದ ಚಂದಗಡದ 7 ತಿಂಗಳ ಗರ್ಭಿಣಿ ಮಹಿಳೆಯೋರ್ವಳನ್ನು ಗಡಹಿಂಗ್ಲಜನ ಡಾ.ಸಂಜಯ ಶಾನಬಾಗ ಅವರು ತಪಾಸಣೆಗೊಳಪಡಿಸಿದಾಗ ಮೊದಲು ಚೀಲದಂತೆ ಕಂಡಿತು. ನಂತರ ಸಮಗ್ರವಾಗಿ ತಪಾಸಿಸಿದಾಗ ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುತ್ತಿರುವುದು ಕಂಡು ಬಂದಿತು. ವೈದ್ಯರು ನಿರಂತರವಾಗಿ ನಿಗಾದಲ್ಲಿಟ್ಟು 37 ವಾರಗಳ ನಂತರ ಮಹಿಳೆಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. 

ನಂತರ ಮಗುವಿನ ಜೀವಕ್ಕೆ ತೊಂದರೆಯಾಗಬರದೆಂದು ಸ್ಥಳೀಯ ವೈದ್ಯರು ಬೆಳಗಾವಿಯ ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಕಳಹಿಸಿಕೊಟ್ಟರು. 

ತಡಮಾಡದ ವೈದ್ಯರು 2 ದಿನದ ನವಜಾತ ಶಿಶುವನ್ನು ತಪಾಸಣೆಗೊಳಪಡಿಸಿ ಶಸ್ತ್ರಚಿಕಿತ್ಸೆಯ ಮೂಲಕ ಹೊಟ್ಟೆಯೊಳಗಿರುವ ಭ್ರೂಣವನ್ನು ಹೊರತೆಗೆದಿದ್ದಾರೆ. ಅವಳಿ ಆಮ್ನಿಯೋಟಿಕ್ ಚೀಲವು ಪ್ರಮುಖ ನಾಳಗಳಾದ ಐವಿಸಿ, ಬಲಬದಿಯ ಮೂತ್ರಪಿಂಡ ನಾಳ ಹಾಗೂ ಮಹಾಪಧಮನಿಯ ಮಧ್ಯದಲ್ಲಿ ಬೆಳೆಯುತ್ತಿತ್ತು. ಅತ್ಯಂತ ಕ್ಲಿಷ್ಟಕರವಾದ ಈ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ಶಸ್ತ್ರಚಿಕಿತ್ಸಕ ಡಾ.ಸ್ವಪ್ನಿಲ್ ಪಟ್ಟಣಶೆಟ್ಟಿ ಅವರಿಗೆ ಡಾ.ಸಕ್ಷಮ, ಅರಿವಳಿಕೆ ತಜ್ಞವೈದ್ಯ ಡಾ.ರಾಜೇಶ್ ಮಾನೆ ಮತ್ತು ಡಾ.ಪ್ರಿಯಾಂಕಾ ಗಾಡ್ವಿ ಶಸ್ತ್ರಚಿಕಿತ್ಸೆಗೆ ಸಹಕರಿಸಿದರು. ನಂತರ ತೀವ್ರ ನಿಗಾ ಘಟಕದಲ್ಲಿ ಡಾ.ಮನೀಷಾ ಭಂಡನಕರ ಹಾಗೂ ಡಾ.ರಾಮ್ ಭಟ್ ಆರೈಕೆ ಮಾಡಿದರು.

ಗರ್ಭಧಾರಣೆಯ ಪ್ರಥಮದಲ್ಲಿ ಕೆಲವು ವಾರ ಇನ್ನೊಂದು ಭ್ರೂಣವು ಸುತ್ತುವರೆದು ಅದು ಮರೆಯಾಗುತ್ತದೆ. ನಂತರ ಈ ರೀತಿಯಾಗಬಹುದು. ಆದರೆ, ಅವಳಿಯ ರಕ್ತ ಪೂರೈಕೆಯನ್ನು ಅವಲಂಬಿಸಿ ಭ್ರೂಣದ ಗಾತ್ರ ಹೆಚ್ಚುತ್ತಲಿರುತ್ತದೆ. ಸುಮಾರು 6 ಲಕ್ಷ ಗರ್ಭಿಣಿ ಮಹಿಳೆಯರ ಪೈಕಿ ಒಬ್ಬರಲ್ಲಿ

ಭ್ರೂಣದೊಳಗೆ ಮತ್ತೊಂದು ಭ್ರೂಣವು ಬೆಳೆಯುವದು ಕಂಡು ಬರುತ್ತದೆ. ಆದರೆ ಇದಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.

-ಡಾ.ಸ್ವಪ್ನಿಲ ಪಟ್ಟಣಶೆಟ್ಟಿ, ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕರು.

ಮಗು ಈಗ ಚೇತರಿಸಿಕೊಂಡಿದೆ. ಮಹಾರಾಷ್ಟ್ರದ ಮಹಾತ್ಮಾ ಜ್ಯೋತಿರಾವ್ ಫುಲೆ ಜನ ಆರೋಗ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಲಾಗಿದೆ. ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ತಂಡಕ್ಕೆ ಅಭಿನಂದನೆಗಳು.

-ಡಾ.ಕರ್ನಲ್ ಎಂ.ದಯಾನಂದ, ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು.