ಸಾರಾಂಶ
ತಾಲೂಕಿನ ನೆರಿಯ ಪ್ರದೇಶದಲ್ಲಿ ಬುಧವಾರ ಅಪರಾಹ್ನ ಭಾರೀ ಮಳೆ ಸುರಿದಿದ್ದು ನೆರಿಯ ಸೇತುವೆ ಮತ್ತೆ ಮುಳುಗಡೆಯಾಗಿದ್ದು ಜನರು ಆತಂಕದಲ್ಲಿದ್ದಾರೆ. ನೆರಿಯ ಗ್ರಾಮದ ಕಾಟಾಜೆ, ಪುಲ್ಲಾಜೆ ಪರಿಸರದಲ್ಲಿ ಭಾರೀ ನೀರು ಹರಿದು ಬಂದಿದ್ದು ತೋಟಗಳು ಗದ್ದೆಗಳು ಜಲಾವೃತಗೊಂಡಿವೆ.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ತಾಲೂಕಿನ ನೆರಿಯ ಪ್ರದೇಶದಲ್ಲಿ ಬುಧವಾರ ಅಪರಾಹ್ನ ಭಾರೀ ಮಳೆ ಸುರಿದಿದ್ದು ನೆರಿಯ ಸೇತುವೆ ಮತ್ತೆ ಮುಳುಗಡೆಯಾಗಿದ್ದು ಜನರು ಆತಂಕದಲ್ಲಿದ್ದಾರೆ. ನೆರಿಯ ಗ್ರಾಮದ ಕಾಟಾಜೆ, ಪುಲ್ಲಾಜೆ ಪರಿಸರದಲ್ಲಿ ಭಾರೀ ನೀರು ಹರಿದು ಬಂದಿದ್ದು ತೋಟಗಳು ಗದ್ದೆಗಳು ಜಲಾವೃತಗೊಂಡಿವೆ.ಭಾರೀ ಪ್ರಮಾಣದಲ್ಲಿ ಕೆಸರು ಮಿಶ್ರಿತ ನೀರು ನದಿಯಲ್ಲಿ ಹರಿದು ಬಂದಿದೆ. ಮಂಗಳವಾರ ರಾತ್ರಿಯ ವೇಳೆ ಇದೇ ರೀತಿಯಲ್ಲಿ ನೆರಿಯ ಹೊಳೆಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು . ಇದೀಗ ಬುಧವಾರ ಮತ್ತೆ ಪ್ರವಾಹದಂತೆ ನದಿಯಲ್ಲಿ ನೀರು ಬಂದಿರುವುದು ಜನರಲ್ಲಿ ಭಯ ಮೂಡಿಸಿದೆ.ಅಪರಾಹ್ನ ನೆರಿಯ ಪ್ರದೇಶದಲ್ಲಿ ಸಾಮಾನ್ಯ ಮಳೆ ಮಾತ್ರ ಸುರಿದಿದೆ. ಆದರೂ ನದಿಯಲ್ಲಿ ಹಾಗೂ ತೊರೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಏರಿಕೆಯಾಗಿದೆ.ಘಾಟಿಯಲ್ಲಿಯೂ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು ರಸ್ತೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದಿದೆ.ಚಾರ್ಮಾಡಿ ಘಾಟಿಯ ಮೇಲ್ಭಾಗದಿಂದ ಹರಿದು ಬಂದ ನೀರು ನೇರವಾಗಿ ನೆರಿಯ ಹಳ್ಳವನ್ನು ಸೇರುತ್ತಿದ್ದು ಘಾಟಿಯ ಮೇಲ್ಬಾಗದಲ್ಲಿ ಸುರಿದ ಮಳೆಯಿಂದಾಗಿ ನೆರಿಯದಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ.ನೆರಿಯ ಗ್ರಾಮದ ಹಲವೆಡೆ ತೋಟಗಳಿಗೆ ಗದ್ದೆಗಳಿಗೆ ನೀರು ನುಗ್ಗಿದ್ದು ಭಾರಿ ನಷ್ಟ ಸಂಭವಿಸಿದ ಶಂಕೆಯಿದೆ.