ಸಾರಾಂಶ
ಬೆಳೆದು ನಿಂತ ನಾನಾ ಬೆಳೆಗೆ ಯೂರಿಯಾ ರಸಗೊಬ್ಬರದ ಕೊರತೆ ಕಾಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಗೊಬ್ಬರದ ದಾಸ್ತಾನು ಇಲ್ಲವಾಗಿದೆ. ಇದರಿಂದ ರೈತರಿಗೆ ಸಕಾಲಕ್ಕೆ ಗೊಬ್ಬರ ತರಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
ಯಲಬುರ್ಗಾ:
ಯೂರಿಯಾ ರಸಗೊಬ್ಬರ ಕೊರತೆ ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಅಂಗಡಿ ಮಾಲೀಕರ ನಡೆ ಖಂಡಿಸಿ ತಾಲೂಕಿನ ಬೇವೂರು ಗ್ರಾಮದ ವೃತ್ತದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲನಗೌಡ ಕೋನನಗೌಡ್ರ ನೇತೃತ್ವದಲ್ಲಿ ರೈತರು ದಿಢೀರ್ ಪ್ರತಿಭಟನೆ ನಡೆಸಿದರು. ಇದರಿಂದ ಕೆಲ ಕಾಲ ಕುಷ್ಟಗಿ-ಕೊಪ್ಪಳ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲನಗೌಡ ಕೋನನಗೌಡ್ರ ಮಾತನಾಡಿ, ತಾಲೂಕಿನಲ್ಲಿ ವಾರದಿಂದ ಮಳೆಯಾಗುತ್ತಿದೆ. ಬೆಳೆದು ನಿಂತ ನಾನಾ ಬೆಳೆಗೆ ಯೂರಿಯಾ ರಸಗೊಬ್ಬರದ ಕೊರತೆ ಕಾಡುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಗೊಬ್ಬರದ ದಾಸ್ತಾನು ಇಲ್ಲವಾಗಿದೆ. ಇದರಿಂದ ರೈತರಿಗೆ ಸಕಾಲಕ್ಕೆ ಗೊಬ್ಬರ ತರಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಂಗಡಿ ಮಾಲೀಕರು ಯೂರಿಯಾವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ, ರೈತರ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಸ್ಥಳಕ್ಕೆ ತಹಸೀಲ್ದಾರ್ ಬಸವರಾಜ ತೆನ್ನಳ್ಳಿ, ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಭೇಡಿ ನೀಡಿ, ಹೆಚ್ಚಿನ ದರಕ್ಕೆ ಯೂರಿಯಾ ರಸಗೊಬ್ಬರ ಮಾರಾಟ ಮಾಡಿದ ಅಂಗಡಿಯನ್ನು ಸೀಜ್ ಮಾಡಿದರು. ರೈತರನ್ನು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು. ಬಳಿಕ ೨೦ ಟನ್ ಗೊಬ್ಬರ ತರಿಸಲಾಯಿತು.
ಈ ವೇಳೆ ರೈತರಾದ ಯಮನಪ್ಪ ಉಪ್ಪಾರ, ಬಸವರಾಜ ಹಳ್ಳಿ, ಶಾಂತಪ್ಪ ಗೊಂದಿ, ಶರಣಪ್ಪ ಗೊಂದಿ, ಹನುಮಂತ ಮಕ್ಕಳ್ಳಿ, ಈರಣ್ಣ ಚರಾರಿ, ಮಲ್ಲಪ್ಪ ಕರಡಿ, ಮಲ್ಲಪ್ಪ ಭವಿಕಟ್ಟಿ, ಇಮಾಮಸಾಬ್ ಮುಜಾವರ, ಈಶಪ್ಪ ಕರಡಿ ಸೇರಿದಂತೆ ಇತರರು ಇದ್ದರು.