ಮಂಗಳೂರು: ಪರ್ಯಾಯ ವ್ಯವಸ್ಥೆ ಮಾಡದೆ ಸಂಡೆ ಬಜಾರ್ ವ್ಯಾಪಾರಿಗಳ ತೆರವುಗೊಳಿಸಲು ಮುಂದಾದ ನಗರ ಪಾಲಿಕೆ ಅಧಿಕಾರಿಗಳು ಬೀದಿಬದಿ ವ್ಯಾಪಾರಿಗಳ ಸರಕುಗಳನ್ನು ವಶಪಡಿಸಲು ಲಾರಿಗಳನ್ನು ತಂದು ಕಾರ್ಯಾಚರಣೆ ನಡೆಸಲು ಮುಂದಾದ ವೇಳೆ ಬೀದಿಬದಿ ವ್ಯಾಪಾರಿಗಳು ಪಾಲಿಕೆಯ ಲಾರಿಯ ಎದುರು ಕೂತು ಪ್ರತಿಭಟನೆ ನಡೆಸಿದ ಘಟನೆ ಮಂಗಳೂರಿನಲ್ಲಿ ಭಾನುವಾರ ನಡೆದಿದೆ.

ಪಾಲಿಕೆ ಬೀದಿಬದಿ ವ್ಯಾಪಾರಕ್ಕೆ ನಿಯಮಾನುಸಾರ ಅವಕಾಶ ನೀಡಬೇಕು ಎಂದು ವ್ಯಾಪಾರಿಗಳು ಪಟ್ಟು ಹಿಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೀದಿಬದಿ ವ್ಯಾಪಾರಿಗಳ ಧಿಡೀರ್ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು.ಬೀದಿಬದಿ ವ್ಯಾಪಾರಸ್ಥರ ಸಂಘಟನೆಗಳ ಪ್ರಮುಖರಾದ ಅಬ್ದುಲ್ ರಹಿಮಾನ್, ಸಂತೋಷ್ ಆರ್.ಎಸ್., ಮುಜಾಫರ್ ಅಹ್ಮದ್, ಮೊಹಮ್ಮದ್ ಮುಸ್ತಫಾ, ವಿಜಯ್ ಜೈನ್, ಎಂ.ಎನ್.ಶಿವಪ್ಪ, ನೌಶಾದ್ ಉಳ್ಳಾಲ, ಹಂಝ ಮೊಹಮ್ಮದ್ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.*ನಗರದಲ್ಲಿ ಸಂಡೆ ಬಜಾರ್ 50 ವರ್ಷಗಳ ಹಿಂದಿನಿಂದಲೂ ನಡೆಯುತ್ತಾ ಬರುತ್ತಿದೆ. ಬೀದಿಬದಿ ವ್ಯಾಪಾರಿಗಳು ಒಗ್ಗಟ್ಟಿನಿಂದ ಕಾರ್ಯಚರಣೆಯನ್ನು ವಿಫಲಗೊಳಿಸಿದ್ದಾರೆ. ನಗರ ಪಾಲಿಕೆ ಕಾರ್ಯಾಚರಣೆ ಮಾಡದೆ ಪರ್ಯಾಯ ವ್ಯವಸ್ಥೆ ಬಗ್ಗೆ ತೀರ್ಮಾನ ಕೈಗೊಳ್ಳಲಿ. ಏಕಪಕ್ಷೀಯ ಮತ್ತು ನಿಯಮಬಾಹಿರ ಕಾರ್ಯಾಚರಣೆ ಪರಿಹಾರ ಕ್ರಮವಲ್ಲ. -ಬಿ.ಕೆ ಇಮ್ತಿಯಾಜ್, ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು) ಮಂಗಳೂರು