ಸಾರಾಂಶ
ಗುಂಡಿಗೆ ಬಿದ್ದು ಬಸ್ ಅಪಘಾತವಾದ ಹಿನ್ನೆಲೆ ಸ್ಥಳೀಯರ ಆಕ್ರೋಶ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಸೀಗೋಡು ಮುಖ್ಯರಸ್ತೆಯಲ್ಲಿ ಗುಂಡಿಗೆ ಬಿದ್ದು ಬಸ್ ಅಪಘಾತವಾದ ಹಿನ್ನೆಲೆಯಲ್ಲಿ ಸ್ಥಳೀಯರು ಗುಂಡಿ ಮುಚ್ಚಲು ಒತ್ತಾಯಿಸಿ ರಸ್ತೆಗೆ ಬಾಳೆಗಿಡ ನೆಟ್ಟು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು. ಬಿಜೆಪಿ ಮುಖಂಡ ಎ.ಸಿ.ಸಂತೋಷ್ ಅರನೂರು ಮಾತನಾಡಿ, ಶೃಂಗೇರಿ ಕ್ಷೇತ್ರದಲ್ಲಿ ಎಲ್ಲ ಕಡೆಗಳಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ದಿನನಿತ್ಯ ಅಪಘಾತಗಳು ನಡೆಯುತ್ತಿರುತ್ತವೆ. ಗುಂಡಿಗಳನ್ನು ತಪ್ಪಿಸಲು ಹೋಗುವ ವಾಹನ ಚಾಲಕರು ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೆ ಈಡಾಗುತ್ತಿದ್ದಾರೆ. ಈ ರೀತಿ ಅಪಘಾತ ಸಂಭವಿಸಿದರೆ ಯಾರು ಹೊಣೆ...?
ಸೀಗೋಡಿನಲ್ಲಿ ಪ್ರಸ್ತುತ ಗುಂಡಿ ಇದ್ದ ಜಾಗದಲ್ಲಿಯೇ ಈ ಹಿಂದೆಯೂ ಗುಂಡಿ ಇತ್ತು. ಆ ಸಂದರ್ಭದಲ್ಲಿ ಗುಂಡಿ ಮುಚ್ಚುವಾಗ ಕಳಪೆ ದರ್ಜೆಯಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ. ಈ ಬಗ್ಗೆ ಆಕ್ಷೇಪ ಎತ್ತಿದಾಗ ಕೆಲವೇ ದಿನಗಳಲ್ಲಿ ಮರು ಡಾಂಬರೀಕರಣ ಮಾಡಲಾಗುವುದು ಎಂದು ತಿಳಿಸಿದ್ದರು. ಆದರೆ ಇನ್ನು ಮಾಡಿಲ್ಲ.ಕಳೆದ 3 ತಿಂಗಳ ಹಿಂದೆಯೇ ಕ್ಷೇತ್ರದಲ್ಲಿ ಗುಂಡಿ ಮುಚ್ಚಿ ಎಂದು ಬಿಜೆಪಿಯಿಂದ ಪ್ರತಿಭಟನೆ ನಡೆಸಿದರೆ, ಆಡಳಿತ ಪಕ್ಷದವರು ಬಿಜೆಪಿಯವರು ಬಾಯಿ ಮುಚ್ಚಲು ಹೇಳಿದ್ದರು. ಸೀಗೋಡು ಮುಖ್ಯರಸ್ತೆಯಲ್ಲಿ ಕಳೆದ ಹಲವು ದಿನಗಳ ಹಿಂದೆಯೇ ಗುಂಡಿ ಬಿದ್ದಿದ್ದರು ಗುಂಡಿ ಮುಚ್ಚಲು ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಿರಲಿಲ್ಲ.ಶನಿವಾರ ಅಪಘಾತ ನಡೆದ ಬಳಿಕ ಎಂಜಿನಿಯರ್ಗಳು ಗುಂಡಿ ಮುಚ್ಚಲು ಜಲ್ಲಿ ತಂದಿದ್ದಾರೆ. ಇದು ಸಮಂಜಸವೇ ಎಂದು ಪ್ರಶ್ನಿಸಿದರು. ಶನಿವಾರ ಮುಂಜಾನೆ ಅಪಘಾತ ನಡೆದಾಗ ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲು ಬಾಳೆ ಹೊನ್ನೂರು ಸರ್ಕಾರಿ ಆಸ್ಪತ್ರೆಗೆ ಕರೆ ಮಾಡಿದರೆ ಆ್ಯಂಬುಲೆನ್ಸ್ ಸಹ ಲಭ್ಯವಿರಲಿಲ್ಲ. ಕೊಪ್ಪ, ಶೃಂಗೇರಿಯಿಂದ ಆ್ಯಂಬುಲೆನ್ಸ್ ಬರಬೇಕು ಎಂದು ಹೇಳಿದರು. ಇಂತಹ ಘಟನೆಗಳು ಶೃಂಗೇರಿ ಕ್ಷೇತ್ರಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದು ಹೇಳಿದರು.ಸ್ಥಳೀಯರಾದ ಶ್ರವಣ್, ದೇವೇಂದ್ರ, ಗಣೇಶ್, ಲತೀಫ್, ಸಂಜಯ್, ತೌಸಿಫ್, ಆರಿಫ್, ರಾಮ ಮತ್ತಿತರರು ಹಾಜರಿದ್ದರು.೨೮ಬಿಹೆಚ್ಆರ್ ೨:
ಬಾಳೆಹೊನ್ನೂರು ಸೀಗೋಡು ಮುಖ್ಯರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಸ್ಥಳೀಯರು ಬಾಳೆಗಿಡ ನೆಟ್ಟು ಶನಿವಾರ ಪ್ರತಿಭಟನೆ ನಡೆಸಿದರು.