ಸಕ್ಕರೆ ಕಾರ್ಖಾನೆಗಳು ರೈತರ ಹಿತಾಸಕ್ತಿ ಕಾಪಾಡಬೇಕು

| Published : Dec 23 2023, 01:45 AM IST

ಸಕ್ಕರೆ ಕಾರ್ಖಾನೆಗಳು ರೈತರ ಹಿತಾಸಕ್ತಿ ಕಾಪಾಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಕಬ್ಬು ಬೆಳೆ ಬೆಳೆಯುವುದರಲ್ಲಿ ರಾಜ್ಯ ಈಗ 2ನೇ ಸ್ಥಾನದಲ್ಲಿದೆ. ಮುಂದಿನ ದಿನದಲ್ಲಿ ಮೊದಲ ಸ್ಥಾನ ಅಲಂಕರಿಸಲಿದ್ದೇವೆ. ಅಲ್ಲದೇ ರಾಜ್ಯದ ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸಬೇಕು ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶದಲ್ಲಿ ಕಬ್ಬು ಬೆಳೆ ಬೆಳೆಯುವುದರಲ್ಲಿ ರಾಜ್ಯ ಈಗ 2ನೇ ಸ್ಥಾನದಲ್ಲಿದೆ. ಮುಂದಿನ ದಿನದಲ್ಲಿ ಮೊದಲ ಸ್ಥಾನ ಅಲಂಕರಿಸಲಿದ್ದೇವೆ. ಅಲ್ಲದೇ ರಾಜ್ಯದ ರೈತರ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಸಕ್ಕರೆ ಕಾರ್ಖಾನೆಗಳು ಕಾರ್ಯನಿರ್ವಹಿಸಬೇಕು ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಗಣೇಶಪುರದಲ್ಲಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ 2022-23 ನೇ ಸಾಲಿನ ಹಂಗಾಮು ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಕಾಲದಲ್ಲಿ ದೇಶದಲ್ಲಿ ಸಕ್ಕರೆಯನ್ನು ಆಮದು ಮಾಡಿಕೊಳ್ಳುವ ಸಂದರ್ಭವಿತ್ತು. ಆದರೆ, ಈಗ ಕಬ್ಬು ಬೆಳೆ ದೇಶದ ಆರ್ಥಿಕತೆಗೆ ನೆರವಾಗುವ ಪ್ರಮುಖ ಬೆಳೆಯಾಗಿದೆ. ಜಗತ್ತಿನ ವೈಜ್ಞಾನಿಕ ಕ್ರಾಂತಿಯಲ್ಲಿ ಕಬ್ಬು ಬೆಳೆಯ ಪಾತ್ರ ಸಾಕಷ್ಟಿದೆ. ಇನ್ನು ಸುಮಾರು 100 ವರ್ಷಗಳ ಕಾಲ ಸಕ್ಕರೆ ಕಾರ್ಖಾನೆಗಳಿಗೆ ಉತ್ತಮ ಭವಿಷ್ಯವಿದೆ. ಕಾರ್ಖಾನೆಗಳಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ಸಿಕ್ಕಿವೆ. ಈ ಉದ್ದಿಮೆಯಿಂದ ರಾಜ್ಯ ಸರ್ಕಾರಕ್ಕೆ ಸುಮಾರು ₹25 ಸಾವಿರ ಕೋಟಿಯಿಂದ ₹35 ಸಾವಿರ ಕೋಟಿಯವರೆಗೆ ಆದಾಯವಾಗುತ್ತಿದೆ ಎಂದು ತಿಳಿಸಿದರು.

ರೈತನಿಗೆ ಹೆಚ್ಚಿನ ಆದಾಯ ನೀಡುವುದು ಕಬ್ಬು ಬೆಳೆ ಮಾತ್ರ. ರೈತರು ಪಾರಂಪರಿಕ ಕೃಷಿ ಹೊರತುಪಡಿಸಿ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳಬೇಕು. ಒಂದು ಎಕರೆಗೆ 5 ಟನ್ ಕಬ್ಬು ಬೆಳೆ ಬೆಳೆದ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಇಂತಹ ಪ್ರಯತ್ನಕ್ಕೆ ರೈತರು ಮುಂದಾಗುವಂತೆ ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಸಕ್ಕರೆ ಕಾರ್ಖಾನೆಗಳು ಹಾಗೂ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯು ಸಮನ್ವಯ, ಸಾಮರಸ್ಯದಿಂದ ರೈತರಿಗೆ ಕಬ್ಬಿನ ಬೆಳೆಗೆ ರೈತರಿಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ಮೊದಲಿನಿಂದಲೂ ದೇಶಕ್ಕೆ ರೈತನ ಕೊಡುಗೆ ಅಪಾರವಾಗಿದೆ. ಅದೇ ರೀತಿಯಲ್ಲಿ ಔದ್ಯೋಗಿಕವಾಗಿ ಮತ್ತು ವೈಜ್ಞಾನಿಕವಾಗಿ ದೇಶಕ್ಕೆ ಕೊಡುಗೆ ನೀಡುವ ಕಾರ್ಯಕ್ಕೆ ಕಾರ್ಖಾನೆಗಳು ಮುಂದಾಗಬೇಕು. ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೇವಲ ಪಠ್ಯ ಕ್ರಮ ಅನುಸರಿಸದೆ ರೈತರ ಬೆಳೆದ ವಿವಿಧ ಕಬ್ಬು ಬೆಳೆಗಳ ಕುರಿತು ಪ್ರಾಯೋಗಿಕವಾಗಿ ಅಭ್ಯಾಸಿಸಬೇಕು ಎಂದು ತಿಳಿಸಿದರು.

ಇದಕ್ಕೂ ಮುಂಚೆ ಬಾಗಲಕೋಟೆಯ ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆ, ನಿಪ್ಪಾಣಿಯ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆಗಳಿಗೆ ಅತ್ಯುತ್ತಮ ತಾಂತ್ರಿಕ ದಕ್ಷತೆ ಪ್ರಶಸ್ತಿ ಪ್ರದಾನ ಮಾಡಿದರು. ವಾಯುವ್ಯ ವಲಯದಲ್ಲಿ ರಾಯಬಾಗ ತಾಲೂಕಿನ ಸೌವದತ್ತಿಯ ಶಿವಶಕ್ತಿ ಶುಗರ್ಸ್ (ಪ್ರಥಮ), ಸಂಕನಟ್ಟಿಯ ಕೃಷ್ಣ (ದ್ವಿತಿಯ) ಹಾಗೂ ಮುನವಳ್ಳಿ ರೇಣುಕಾ ಶುಗರ್ಸ್ ಕಾರ್ಖಾನೆಗೆ (ತೃತೀಯ) ಬಹುಮಾನ, ಪ್ರಶಸ್ತಿ ನೀಡಲಾಯಿತು. ಈಶಾನ್ಯ ವಲಯದಲ್ಲಿ ಕಲಬುರ್ಗಿ ಜಿಲ್ಲೆಯ ಕೆ.ಪಿ.ಆರ್ ಶುಗರ್ಸ್ (ಪ್ರಥಮ) ಮತ್ತು ದಿ.ಮಹಾತ್ಮ ಗಾಂಧಿ ಎಸ್.ಎಸ್.ಕೆ.ಎನ್ ಶುಗರ್ಸ್ ಸಕ್ಕರೆ ಕಾರ್ಖಾನೆಗೆ (ದ್ವಿತೀಯ) ಬಹುಮಾನ ಹಾಗೂ ಪ್ರಶಸ್ತಿ ವಿತರಿಸಲಾಯಿತು.

ದಕ್ಷಿಣ ಮತ್ತು ಮಧ್ಯ ವಲಯದಲ್ಲಿ ಗದಗ ಜಿಲ್ಲೆಯ ವಿಜಯನಗರ ಶುಗರ್ಸ್ (ಪ್ರಥಮ), ಮಂಡ್ಯ ಜಿಲ್ಲೆಯ ಕೊರಮಂಡಲ ಶುಗರ್ಸ್ ಸಕ್ಕರೆ ಕಾರ್ಖಾನೆಗೆ (ದ್ವಿತೀಯ) ಪ್ರಶಸ್ತಿ ನೀಡಲಾಯಿತು.

ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದು ರ್‍ಯಾಂಕ್ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಂಸ್ಥೆಯ ಬಿಎಸ್ಸಿ ತೃತೀಯ ವರ್ಷದ ವಿದ್ಯಾರ್ಥಿಗಳಾದ ಸುಪ್ರೀತ್ ಪಿರಗನ್ನವರ , ಸುರಜಸಿಂಗ್ ಚೊಪದಾರ ಹಾಗೂ ಅಭಿನಂದನ್ ಪಾಟೀಲ, ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಾದ ಶಿವಲಿಂಗ ಮೇತ್ರಿ, ಮಂಜುನಾಥ ಬುದ್ನಿ, ಸೌರಭ ಶೆಟ್ಟಿಗೆ ಹಾಗೂ ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಗುರುನಾಥ ಕುಂಡೇಕರ, ರಾಹುಲ್ ಸೊರಗಾವಿ, ಸೌರಭ ಪಾಟೀಲ, ಎಂಎಸ್ಸಿ ವಿದ್ಯಾರ್ಥಿಗಳಾದ ಬಾಳಯ್ಯ ಪೂಜಾರ, ಹರೀಶ ಕಣಕರೆಡ್ಡಿ ಹಾಗೂ ಕೃಷ್ಣಾ ರಾಠೋಡ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಈ ಸಮಾರಂಭದಲ್ಲಿ ಬೆಳಗಾವಿ ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರ್ದೇಶಕ ಡಾ. ಆರ್. ಬಿ ಖಾಂಡಗಾವೆ, ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಉಪಾಧ್ಯಕ್ಷ ರಮೇಶ ಪಟ್ಟಣ, ಕಬ್ಬು ಅಭಿವೃದ್ಧಿ ಆಯುಕ್ತ ಹಾಗೂ ಸಕ್ಕರೆ ನಿರ್ದೇಶಕ ಎಂ.ಆರ್‌. ರವಿಕುಮಾರ, ಆಡಳಿತ ಮಂಡಳಿಯ ಸದಸ್ಯ ಅಜೀತ ದೇಸಾಯಿ, ಅಶೋಕ ಪಾಟೀಲ, ಮಲ್ಲಿಕಾರ್ಜುನ ಹೆಗ್ಗಳಗಿ ಹಾಗೂ ವ್ಯವಸ್ಥಾಪಕರು ಸಿಬ್ಬಂದಿ ಉಪಸ್ಥಿತರಿದ್ದರು.

----

22ಬಿಇಎಲ್‌34