ನಾಲ್ಕನೇ ದಿನಕ್ಕೆ ಕಾಲಿಟ್ಟ ಕಬ್ಬು ಬೆಳೆಗಾರರ ಮುಷ್ಕರ

| Published : Oct 27 2025, 12:30 AM IST

ಸಾರಾಂಶ

ಕಬ್ಬಿನ ದರ ನಿಗದಿಪಡಿಸಬೇಕು ಹಾಗೂ ಹಿಂದಿನ ಬಾಕಿ ನೀಡಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘವು ತಹಸೀಲ್ದಾರ ಕಚೇರಿ ಆವರಣದಲ್ಲಿ ಆರಂಭಿಸಿದ ಅಹೋರಾತ್ರಿ ಮುಷ್ಕರವು ನಾಲ್ಕನೇ ದಿನಕ್ಕೆ ಕಾಲಿರಿಸಿತು.

ರೈತರ ಪ್ರತಿಭಟನೆಗೆ ಬಿಜೆಪಿ ಸಂಪೂರ್ಣ ಬೆಂಬಲ: ಮಾಜಿ ಶಾಸಕ ಸುನೀಲ ಹೆಗಡೆ

ಕನ್ನಡಪ್ರಭ ವಾರ್ತೆ ಹಳಿಯಾಳ

ಕಬ್ಬಿನ ದರ ನಿಗದಿಪಡಿಸಬೇಕು ಹಾಗೂ ಹಿಂದಿನ ಬಾಕಿ ನೀಡಬೇಕೆಂದು ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘವು ತಹಸೀಲ್ದಾರ ಕಚೇರಿ ಆವರಣದಲ್ಲಿ ಆರಂಭಿಸಿದ ಅಹೋರಾತ್ರಿ ಮುಷ್ಕರವು ನಾಲ್ಕನೇ ದಿನಕ್ಕೆ ಕಾಲಿರಿಸಿತು.

ಭಾನುವಾರ ಮಾಜಿ ಶಾಸಕ ಸುನೀಲ ಹೆಗಡೆ ಮುಂದಾಳತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಿಯೋಗವು ಮುಷ್ಕರ ನಿರತರನ್ನು ಭೇಟಿಯಾಗಿ ಬೆಂಬಲ ಸೂಚಿಸಿತು.

ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ ಕಬ್ಬು ಬೆಳೆಗಾರರು ಆರಂಭಿಸಿದ ಮುಷ್ಕರಕ್ಕೆ ಬಿಜೆಪಿ ಪಕ್ಷವು ಸಂಪೂರ್ಣವಾಗಿ ಬೆಂಬಲಿಸಲಿದ್ದು, ಸೋಮವಾರದಿಂದ ನಡೆಯಲಿರುವ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದೆ ಎಂದರು.ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಸೇರಿದಂತೆ ಪಕ್ಷದ ಪ್ರಮುಖರು ರೈತ ಮೋರ್ಚಾ ಘಟಕವು ಪಾಲ್ಗೊಳ್ಳಲಿದೆ ಎಂದರು. ಇದೇ ಸಂದರ್ಭ ಸಕ್ಕರೆ ಕಾರ್ಖಾನೆಯವರು ಅನುಸರಿಸುತ್ತಿರುವ ರೈತ ವಿರೋಧಿ ಧೋರಣೆಯನ್ನು ಬಲವಾಗಿ ಖಂಡಿಸಿದರು. ಕಬ್ಬು ಬೆಳೆಗಾರರ ಬೇಡಿಕೆಯನ್ನು ಈಡೇರಿಸದೇ ಕಾರ್ಖಾನೆಯು ಕಬ್ಬು ನುರಿಸುವುದನ್ನು ಆರಂಭಿಸಬಾರದು. ಒಂದಾನು ವೇಳೆ ಕಬ್ಬು ಬೆಳೆಗಾರರನ್ನು ಕೆಣಿಕಿಸುವ ಅವರ ತಾಳ್ಮೆಯನ್ನು ಪರೀಕ್ಷಿಸುವ ಪ್ರಯತ್ನ ಮಾಡಿದರೇ ಅದರ ಪರಿಣಾಮ ಕೆಟ್ಟದಾಗಲಿದೆ ಎಂದು ಎಚ್ಚರಿಸಿದರು.

ಬಿಜೆಪಿ ಘಟಕ ಅಧ್ಯಕ್ಷ ವಿಠ್ಠಲ ಸಿದ್ದಣ್ಣನವರ, ಶಿವಾಜಿ ನರಸಾನಿ, ಸೋನಪ್ಪ ಸುಣಕಾರ, ಸಂತೋಷ ಘಟಕಾಂಬ್ಳೆ, ಸಂತಾನ ಸಾವಂತ ಹಾಗೂ ಉದಯ ಜಾಧವ ಹಾಗೂ ಇತರರು ಇದ್ದರು. ಕಬ್ಬು ಬೆಳೆಗಾರರ ಪ್ರಮುಖರಾದ ಕುಮಾರ ಬೊಬಾಟೆ, ನಾಗೇಂದರ ಜೊವೀಜಿ ಹಾಗೂ ಇತರರು ಇದ್ದರು.