ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರತಾಲೂಕಿನ ಸೋಸಲೆ ಗ್ರಾಮದ ಸುಕ್ಷೇತ್ರ ತೋಪಿನಮಠದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಶ್ರೀ ಷಡಕ್ಷರ ಮಹಾಶಿವಯೋಗಿಗಳವರ 72ನೇ ವರ್ಷದ ಆರಾಧನಾ ಮಹೋತ್ಸವ ಹಾಗೂ ಲಿಂಗೈಕ್ಯ ಶ್ರೀ ವಿರೂಪಾಕ್ಷ ಸ್ವಾಮೀಜಿಗಳ 12ನೇ ವರ್ಷದ ಸಂಸ್ಮರಣೋತ್ಸವ ನೆರವೇರಿತು.ಕನಕಪುರ ಮರಳೇಗವಿ ಮಠದ ಪೀಠಾಧಿಪತಿ ಶ್ರೀ ಮುಮ್ಮುಡಿ ಶಿವರುದ್ರಸ್ವಾಮಿ ಭಾಗವಹಿಸಿ, ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿ,ವೀರಶೈವ ಲಿಂಗಾಯತ ಸಮಾಜವು ಇಂದು ಸಮಾಜದಲ್ಲಿ ಒಳ್ಳೆಯ ಹೆಸರುಗಳಿಸಿ ಮುನ್ನಡೆಯುತ್ತಿದೆ ಎಂದರೆ ಅದು ಸ್ವಾಮೀಜಿಗಳಿಂದ, ಧರ್ಮದ ರಕ್ಷಣೆ ಮಾಡುವುದು ಹಾಗೂ ಧರ್ಮದ ಮಾರ್ಗದರ್ಶನ ನೀಡುತ್ತಿರುವುದು ಮಠಾಧೀಶರು. ಹಾಗಾಗಿ ವೀರಶೈವ ಸಮಾಜದವರು ಮಠಗಳು ಮತ್ತು ಮಠಾಧೀಶರನ್ನು ಜೋಪಾನ ಮಾಡುವುದು ತಮ್ಮ ಕರ್ತವ್ಯ ಎಂದು ಭಾವಿಸಬೇಕು ಎಂದರು.ಧರ್ಮವನ್ನು ನಾವು ರಕ್ಷಣೆ ಮಾಡದ ಹೊರತು ಧರ್ಮ ನಮ್ಮನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ, ಸಮಾಜಕ್ಕೆ ಮಠಾಧೀಶರು ಸಮಾಜದ ಮುಕುಟಮಣಿಗಳಿದ್ದಂತೆ ಎಂಬುದನ್ನು ಅರಿಯಬೇಕು.ಇಂದು ವೀರಶೈವ ಸಮಾಜಕ್ಕೆ ಕಿಮ್ಮತ್ತು, ಗೌರವ, ಬೆಲೆ ಬಂದಿದೆ ಎಂದರೆ ಅದು ಮಠ ಮಾನ್ಯಗಳು ಹಾಗು ಸ್ವಾಮೀಜಿಗಳ ಸೇವೆಯಿಂದ ಮಾತ್ರವೇ ಎಂಬುದನ್ನು ತಿಳಿಯಬೇಕು, ನೀವು ಮನೆಯನ್ನು ಎಷ್ಟು ಜೋಪಾನ ಮಾಡುತ್ತೀರೋ ಮಠಗಳು ಹಾಗೂ ಮಠಾಧಿಪತಿಗಳನ್ನು ಅಷ್ಟೇ ಜೋಪಾನ ಮಾಡಬೇಕು ಎಂದರು.ಮೈಮೂಲ್ ಮಾಜಿ ನಿರ್ದೇಶಕ ಅಶೋಕ್ ಮಾತನಾಡಿ, ಆಧುನಿಕ ಯುಗದಲ್ಲಿ ಸ್ವಾಮೀಜಿಗಳು ಎಷ್ಟೇ ಕಟ್ಟು ನಿಟ್ಟಾಗಿ ಮಠ ಮಾನ್ಯಗಳನ್ನು ನಡೆಸಿಕೊಂಡು ಹೋಗುತ್ತಿದ್ದರೂ ಅನೇಕ ತೊಂದರೆಗಳು ಎದುರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಕ್ತ ದಿನ ಮಾನಗಳಲ್ಲಿ ಹಿಂದೂ ಧರ್ಮದ ಮಠಗಳು, ದೇವಸ್ಥಾನಗಳು, ಒಂದಲ್ಲ ಒಂದು ಸಮಸ್ಯೆಗಳ ಸುಳಿಗೆ ಸಿಲುಕುತ್ತಿವೆ, ಈ ವ್ಯವಸ್ಥೆಗೆ ಕಾರಣ ಯಾರು ಎಂಬುದು ಪ್ರಶ್ನೆಯಾಗಿದೆ ಎಂದರು.ತೋಪಿನಮಠದ ಸುಕ್ಷೇತ್ರದಲ್ಲಿ ಬೆಳಗಿನ ಜಾವ ಪೂಜ್ಯರ ಗದ್ದುಗೆಗಳಿಗೆ ರುದ್ರಾಭಿಷೇಕ ಮತ್ತು ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಿತು.ಶ್ರೀ ಕ್ಷೇತ್ರ ಮರಳೆಗವಿ ಮಠದ ಮಠಾಧ್ಯಕ್ಷರಾದ ಮುಮ್ಮಡಿ ಶಿವರುದ್ರ ಸ್ವಾಮೀಜಿ, ಶಿವಪೂಜೆ ಹಾಗೂ ಪಾದಪೂಜೆ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತಾದಿಗಳಲ್ಲಿ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಷಡಕ್ಷರ ಮಹಾಯೋಗಿಗಳ ಉತ್ಸವ ಮೂರ್ತಿ ಮೆರವಣಿಗೆ ಮಾಡಲಾಯಿತು,ಸೋಸಲೆ ತೋಪಿನ ಮಠದ ಇಮ್ಮಡಿ ಷಡಕ್ಷರ ಸ್ವಾಮೀಜಿ, ಚಿದರವಳ್ಳಿ ಗವಿಮಠ, ಮೈಸೂರು ಚಾಮರಾಜನಗರ ಮಂಡ್ಯ ಮತ್ತು ರಾಮನಗರ ಜಿಲ್ಲೆ ಹರಗುರು ಚರಮೂರ್ತಿಗಳು, ಮೈಸೂರು ವಕೀಲರಾದ ಸಿ.ಎಂ. ಜಗದೀಶ್, ಜೀರ್ಣೋದ್ಧಾರ ಸಮಿತಿಯ ನಟರಾಜು ಇದ್ದರು.