ಕನ್ನಡಪ್ರಭ ವಾರ್ತೆ ಕಾರವಾರ
ಶಿರಸಿ ಮೂಲದ ಸುಮಂತ್ ಮಂಜುನಾಥ ನಾಯ್ಕ (25) ಅತಿ ಕಿರಿಯ ವಯಸ್ಸಿನಲ್ಲಿ ಕರ್ನಾಟಕ ನ್ಯಾಯಾಂಗ ಪರೀಕ್ಷೆ (2025)ಯಲ್ಲಿ ಮೊದಲ ಪ್ರಯತ್ನದಲ್ಲೇ 2ನೇ ರ್ಯಾಂಕ್ ಗಳಿಸಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.ಮೂಲತಃ ಶಿರಸಿ ತಾಲೂಕಿನ ಹೆಗಡೆಕಟ್ಟಾ ನಿವಾಸಿಯಾದ ಪ್ರಸ್ತುತ ಬೆಂಗಳೂರಿನಲ್ಲಿರುವ ಮಂಜುನಾಥ ನಾಯ್ಕ (ಸರ್ಕಾರಿ ಅಭಿಯೋಜಕರು, ಲೋಕಾಯುಕ್ತ) ಹಾಗೂ ಸುಜಾತಾ ನಾಯ್ಕ ದಂಪತಿಯ ಪುತ್ರ ಸುಮಂತ್.
ಶಿರಸಿಯ ಸೇಂಟ್ ಅಂಥೋನಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಸುಮಂತ್, ನಂತರ ಆವೆಮೇರಿಯಾ ಹೈಸ್ಕೂಲ್ ಹಾಗೂ ಎಂಇಎಸ್ ಆರ್ಟ್ಸ್ ಮತ್ತು ಸೈಯಿನ್ಸ್ ಮಹಾವಿದ್ಯಾಲಯದಲ್ಲಿ ಪಿಯುಸಿ ಪೂರೈಸಿ ಹುಬ್ಬಳ್ಳಿಯ ಕರ್ನಾಟಕ ಲಾ ಯುನಿವರ್ಸಿಟಿಯಲ್ಲಿ ಕಾನೂನು ವ್ಯಾಸಂಗ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಹೈಕೋರ್ಟ್ನಲ್ಲಿ ವಕೀಲ ಪಿ.ಎನ್.ಹೆಗಡೆ ಅವರ ಜ್ಯೂನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಕಿರಿಯ ವಯಸ್ಸಿನಲ್ಲೇ ನ್ಯಾಯಾಧೀಶರಾಗುವ ಅವಕಾಶ ದೊರೆತಿರುವುದು ಅತ್ಯಂತ ಖುಷಿ ತಂದಿದೆ ಎಂದು ಸುಮಂತ್ ''''''''ಕನ್ನಡಪ್ರಭ''''''''ಕ್ಕೆ ತಿಳಿಸಿದ್ದಾರೆ. ಕೋಟ್:
ಪುತ್ರ ಸುಮಂತ್ ಎಸ್ಎಸ್ಎಲ್ಸಿಯಲ್ಲೂ ರಾಜ್ಯಕ್ಕೆ 10ನೇ ರ್ಯಾಂಕ್ ಪಡೆದು ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಆತನ ಸಾಧನೆಯಿಂದ ತುಂಬ ಖುಷಿಯಾಗಿದೆ.
- ಸುಜಾತಾ ನಾಯ್ಕ, ಸುಮಂತ್ ತಾಯಿ-ಬಾಕ್ಸ್-
ಯಲ್ಲಾಪುರದ ಶಶಾಂಕ್ 26 ವರ್ಷವಯಸ್ಸಿಗೇ ನ್ಯಾಯಾಧೀಶರಾಗಿ ಆಯ್ಕೆ
ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಮೂಲದ ಶಶಾಂಕ್ ನಾಗೇಂದ್ರ ಭಟ್ ಕೇವಲ 26ರ ಹರೆಯದಲ್ಲಿ ಮೊದಲ ಪ್ರಯತ್ನದಲ್ಲೇ ಕರ್ನಾಟಕ ನ್ಯಾಯಾಂಗ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.ಯಲ್ಲಾಪುರ ತಾಲೂಕಿನ ಶೇಡಿಕೆರೆಯ ನಾಗೇಂದ್ರ ಭಟ್ ಹಾಗೂ ಲಲಿತಾ ಭಟ್ ದಂಪತಿಯ ಪುತ್ರರಾಗಿರುವ ಇವರು, ಯಲ್ಲಾಪುರದ ಇಡಗುಂದಿಯ ವಿಶ್ವದರ್ಶನ ಹೈಸ್ಕೂಲ್ನಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದರು. ನಂತರ ಹುಬ್ಬಳ್ಳಿಯ ಜೆಸಿ ಕಾಲೇಜಿನಲ್ಲಿ ಪಿಯು ಓದಿ, ಹುಬ್ಬಳ್ಳಿಯ ಕೆಎಸ್ಎಲ್ಯು ಲಾ ಸ್ಕೂಲ್ನಲ್ಲಿ ಕಾನೂನು ವ್ಯಾಸಂಗ ಮಾಡಿದರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಕೋಟ್:ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ನನಗೆ ಅತೀವ ಸಂತಸವಾಗಿದೆ. ನನ್ನ ಓದಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞನಾಗಿದ್ದೇನೆ.
- ಶಶಾಂಕ ಭಟ್, ನ್ಯಾಯಾಧೀಶರಾಗಿ ಆಯ್ಕೆಯಾದವರು