ಕಾರ್ಕಳ: ಕಾರ್ಕಳದ ಪ್ರತಿಷ್ಠಿತ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಹೊಸ ಮೈಲುಗಲ್ಲಾಗಿ, ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಆಶ್ರಯದಲ್ಲಿ ಎಳೆಯ ಮನಸ್ಸುಗಳನ್ನು ಒಗ್ಗೂಡಿಸುವ ಮೂರು ದಿನಗಳ ‘ಕ್ರಿಯೇಟಿವ್ ಚಿಲಿಪಿಲಿ–2026’ ಬೇಸಿಗೆ ಶಿಬಿರ ಭಾನುವಾರ ಉದ್ಘಾಟನೆಯಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್. ಅವರು, “ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಪಾಠ ಪ್ರವಚನಗಳ ಜೊತೆಗೆ ಬದುಕಿನ ಮೌಲ್ಯಗಳನ್ನು ಮಕ್ಕಳು ಕಲಿಯಬೇಕು. ಮೊಬೈಲ್ನಿಂದ ದೂರವಿದ್ದು ತಮ್ಮ ಬಾಲ್ಯವನ್ನು ಆನಂದಿಸಬೇಕು ಎಂಬ ಉದ್ದೇಶದಿಂದ ಈ ಚಿಲಿಪಿಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು. ಜೊತೆಗೆ, ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸಲು ಹಾಗೂ ಸಂಸ್ಕೃತಿ, ದೇಶಾಭಿಮಾನ ಬೆಳೆಸುವ ನಿಟ್ಟಿನಲ್ಲಿ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ಆರಂಭಿಸಲಾಗಿದೆ ಎಂದು ತಿಳಿಸಿದರು.
ಸಹ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಮಾತನಾಡಿ, “ಇಂದಿನ ದಿನಗಳಲ್ಲಿ ಒತ್ತಡವು ಕೇವಲ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಬಾಲ್ಯದಲ್ಲಿಯೇ ಆರಂಭವಾಗುತ್ತದೆ. ಇಂತಹ ಒತ್ತಡಗಳಿಂದ ಹೊರಬಂದು ಮಕ್ಕಳ ಅಮೂಲ್ಯ ಸಮಯವನ್ನು ಸಕಾರಾತ್ಮಕವಾಗಿ ಕಳೆಯಲು ಈ ಶಿಬಿರ ಮಹತ್ವದ್ದಾಗಿದೆ ಎಂದು ಹೇಳಿದರು.ಇನ್ನೋರ್ವ ಸಹ ಸಂಸ್ಥಾಪಕರಾದ ಅಮೃತ್ ರೈ ಯು. ಅವರು, “ಮಕ್ಕಳ ಬಾಲ್ಯದಲ್ಲಿ ಅಗತ್ಯ ಅನುಭವಗಳನ್ನು ನೀಡಿದರೆ ಭವಿಷ್ಯದಲ್ಲಿ ಪಶ್ಚಾತ್ತಾಪ ಬೇಡ. ಸರ್ವತೋಮುಖ ಬೆಳವಣಿಗೆಗೆ ಇಂತಹ ಶಿಬಿರಗಳು ಅಗತ್ಯ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭ ಸಹ ಸಂಸ್ಥಾಪಕರಾದ ಆದರ್ಶ ಎಂ.ಕೆ., ಸಂಸ್ಥೆಯ ಮುಖ್ಯಸ್ಥರಾದ ಸುಜೇಂದ್ರ ಕಾರ್ಕಳ ಹಾಗೂ ಕ್ರಿಯೇಟಿವ್ ಗ್ಲೋಬಲ್ ಸ್ಕೂಲಿನ ಪಿಆರ್ಒ ಪ್ರಜ್ಞಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಾಲೆಯ ಪ್ರಾಂಶುಪಾಲರಾದ ಅಕ್ಷತಾ ಶೆಣೈ ನಿರೂಪಿಸಿದರು.ಶಿಬಿರದಲ್ಲಿ ಸುಮಾರು 85ಕ್ಕೂ ಅಧಿಕ ಮಕ್ಕಳು ಹಾಗೂ ಪೋಷಕರು ಭಾಗವಹಿಸಿದ್ದು, ವಿವಿಧ ಮನೋರಂಜನಾ ಚಟುವಟಿಕೆಗಳು ಹಾಗೂ ಜಾದೂ ಪ್ರದರ್ಶನಗಳು ಗಮನ ಸೆಳೆದವು.