ಸಾರಾಂಶ
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿ ಭೂಮಿಪೂಜೆ ನೆರವೇರಿಸಲಾಗಿದೆ. ಭೂಮಿಪೂಜೆ ನಡೆದು ಅನೇಕ ತಿಂಗಳುಗಳೇ ಕಳೆದರೂ ಇನ್ನೂ ಪ್ರಾಥಮಿಕ ಹಂತದ ಕಾಮಗಾರಿಯೇ ಆರಂಭವಾಗದೆ ಜನರು ಹದಗಟ್ಟೆ ರಸ್ತೆಯಲ್ಲೇ ಸಂಚರಿಸುವಂತಾಗಿದೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಬಹುತೇಕ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರಾಗಿ ಭೂಮಿಪೂಜೆ ನೆರವೇರಿಸಲಾಗಿದೆ. ಭೂಮಿಪೂಜೆ ನಡೆದು ಅನೇಕ ತಿಂಗಳುಗಳೇ ಕಳೆದರೂ ಇನ್ನೂ ಪ್ರಾಥಮಿಕ ಹಂತದ ಕಾಮಗಾರಿಯೇ ಆರಂಭವಾಗದೆ ಜನರು ಹದಗಟ್ಟೆ ರಸ್ತೆಯಲ್ಲೇ ಸಂಚರಿಸುವಂತಾಗಿದೆ.ಸೋಮವಾರಪೇಟೆಯಿಂದ ಮಡಿಕೇರಿ ಸಂಪರ್ಕದ ರಾಜ್ಯ ಹೆದ್ದಾರಿಯ ಐಗೂರು ಗ್ರಾಮದ ಕಬ್ಬಿಣ ಸೇತುವೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ್ದು, ತೀರಾ ಶಿಥಿಲಾವಸ್ಥೆಯಲ್ಲಿದೆ. ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಈ ಕಬ್ಬಿಣದ ಸೇತುವೆಯನ್ನು ನೂತನವಾಗಿ ನಿರ್ಮಿಸಲು 10 ಕೋಟಿ ರು. ಅನುದಾನ ಮಂಜೂರು ಮಾಡಿಸಿದ್ದು, ಭೂಮಿಪೂಜೆ ನೆರವೇರಿಸಿ ಡಿಸೆಂಬರ್ಗೆ ವರ್ಷವಾಗುತ್ತಾ ಬಂದರೂ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ.
ಐಗೂರು- ಕಾಜೂರು- ಯಡವಾರೆ- ಯಡವನಾಡಿ ಸಂಪರ್ಕಿಸುವ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 10 ವರ್ಷದ ಹಿಂದೆ ನಿರ್ಮಿಸಿದ್ದು, ಪ್ರಸ್ತುತ ಗುಂಡಿ ಬಿದ್ದು ಹಾಳಾಗಿದೆ. ಶಾಸಕರು ಈ ರಸ್ತೆಯ ಗುಂಡಿ ಮುಚ್ಚುವ ಕಾಮಗಾರಿಗೆ 10 ಲಕ್ಷ ರು. ಬಿಡುಗಡೆಗೊಳಿಸಿದ್ದು ಭೂಮಿಪೂಜೆ ನೇರವೇರಿಸಿ 8 ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭವಾಗಿಲ್ಲ.ಮಾದಾಪುರ ಗ್ರಾಮ ಪಂಚಾಯಿತಿಯ ಕುಂಬೂರು ರಾಜ್ಯ ಹೆದ್ದಾರಿ ಬಳಿ ಹಾಗೂ ಮಾದಾಪುರ ಪಟ್ಟಣದ ಬಾಡಿಗೆ ವಾಹನ ನಿಲುಗಡೆ ಬಳಿ ರಸ್ತೆ ಕುಸಿದು ಬಿದ್ದಿದ್ದು ಅದರ ತಡೆಗೋಡೆಗೆ ಶಾಸಕರು 50 ಲಕ್ಷ ರು. ಬಿಡುಗಡೆಗೊಳಿಸಿ ಕಾರ್ಯಪಾಲಕ ಅಭಿಯಂತರರೊಂದಿಗೆ ಭೂಮಿಪೂಜೆ ನೆರವೇರಿಸಿದ್ದಾರೆ. 8 ತಿಂಗಳು ಕಳೆದರೂ ತಡೆಗೋಡೆ ನಿರ್ಮಾಣಕ್ಕೆ ಇನ್ನೂ ಮುಹೂರ್ತ ಕೂಡಿಬಂದಿಲ್ಲ.