ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಶಾಲಾ ಪ್ರಾರಂಭೋತ್ಸವ ಅಂಗವಾಗಿ ಸುಂಟಿಕೊಪ್ಪ ವ್ಯಾಪ್ತಿಯ ಶಾಲೆಗಳಲ್ಲಿ ಬಾಳೆಗಿಡ ತಳಿರುತೋರಣ ಮಕ್ಕಳಿಗೆ ಹೂ, ಸಿಹಿ ಹಂಚುವ ಮೂಲಕ ಶಿಕ್ಷಕರು ಅದ್ಧೂರಿ ಸ್ವಾಗತ ಕೋರಿದರು.

ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಹಾಗೂ ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸೋಮವಾರ ಹಬ್ಬದ ವಾತವರಣ ಕಂಡುಬಂತು. ೨ ತಿಂಗಳ ಬರೋಬರಿ ರಜೆಯನ್ನು ಮುಗಿಸಿ ಮರಳಿ ಶಾಲೆಗೆ ಹೋಗುವ ದಿನ ಸಮೀಪಿಸಿ ಇಂದಿನಿಂದ ಸರಕಾರದ ಘೋಷ ವಾಕ್ಯವಾದ ‘ಮರಳಿ ಶಾಲೆಗೆ ಬಾ’ ಎಂಬಂತೆ ಪೋಷಕರು ಮಕ್ಕಳನ್ನು ಶಾಲೆಗೆ ತಂದು ಬಿಡುತ್ತಿದ್ದುದು ಕಂಡುಬಂತು. ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಜೂ.೧ರಂದು ಶಾಲೆಗಳನ್ನು ತೆರೆಯುವ ಆದೇಶದ ಮೇರೆ ಮಕ್ಕಳಿಗೆ ಅಧಿಕೃತವಾಗಿ ಶಾಲಾ ಪ್ರಾರಂಭೋತ್ಸವವನ್ನು ಮಾಡಿದ ಹಿನ್ನೆಲೆಯಲ್ಲಿ ಇದೀಗ ಪ್ರಾಥಮಿಕ ಪ್ರೌಢಶಾಲೆ ಮತ್ತೊಂದು ವರ್ಷದ ಶೈಕ್ಷಣಿಕ ಸಾಧನೆಗಾಗಿ ಶಾಲಾಯತ್ತ ಮುಖ ಮಾಡಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾದ್ಯಾಯ ವೈ.ಸಿ. ಕುಮಾರ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಜೋವಿಟಾ ವಾಸ್ ಹಾಗೂ ಗದ್ದೆಹಳ್ಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾದ್ಯಾಯಿನಿ ಹೇಮಾಕುಮಾರಿ, ಇತರ ಶಾಲೆಗಳ ಸಹ ಶಿಕ್ಷಕರು ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಬರಮಾಡಿಕೊಂಡರು. ವಿವಿಧ ಶಾಲೆಗಳ ಮಕ್ಕಳು ಶಾಲೆಯ ಸಮವಸ್ತ್ರ ಧರಿಸಿಕೊಂಡು ಲವಲವಿಕೆಯಿಂದ ಶಾಲೆಗಳಿಗೆ ಆಗಮಿಸಿದರು.