ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಇಂದಿನ ದಿನಗಳಲ್ಲಿ ಯುವಜನತೆಯು ದುಶ್ಚಟಗಳಿಗೆ ದಾಸರಾಗುವ ಮೂಲಕ ಮಾರಕ ರೋಗಗಳನ್ನು ತಂದುಕೊಳ್ಳುತ್ತಿರುವುದು ವಿಷಾದನೀಯ ಸಂಗಾತಿ. ಯುವಜನತೆ ದುಶ್ಚಟಗಳಿಂದು ದೂರ ಉಳಿಯಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಹೇಳಿದರು.ಇತ್ತೀಚೆಗೆ ಸುಂಟಿಕೊಪ್ಪ ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಜಾಗೃತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ತಂಬಾಕು ಸೇರಿದಂತೆ ದುಶ್ಚಟಗಳಿಗೆ ಯುವಜನತೆಯು ಆಕರ್ಷಿತಗೊಳ್ಳದೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಜಾಗೃತಿ ಮೂಡಿಸುತ್ತಿದೆ ಎಂದರು.ಸುಂಟಿಕೊಪ್ಪ ಪೊಲೀಸ್ ಠಾಣೆಯ ಎಎಸ್ಐ ಸುರೇಶ್ ಮಾತನಾಡಿ, ಅಪ್ರಾಪ್ತ ಮಕ್ಕಳು ತಂಬಾಕು ಖರೀದಿಸುವುದು ಮತ್ತು ಅಂಗಡಿಯವರು ಮಾರಾಟ ಮಾಡುವುದು ಕಾನೂನು ರೀತಿಯ ಅಪರಾಧ. ಇದು ದಂಡದೊಂದಿಗೆ ಜೈಲು ಶಿಕ್ಷೆಗೂ ಒಳಗಾಗಬಹುದಾಗಿದೆ. ಆದ್ದರಿಂದ ಅಂಗಡಿಯವರು ತಂಬಾಕು ಸೇರಿದಂತೆ ಗುಟ್ಕಾ ಪದಾರ್ಥಗಳನ್ನು ಅಪ್ರಾಪ್ತ ಮಕ್ಕಳಿಗೆ ಮಾರಾಟ ಮಾಡುವುದು ಅಪರಾಧವಾಗಿದೆ ಎಂದು ಹೇಳಿದರು.ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿಯ ಸದಸ್ಯರಾದ ಡಿ.ನರಸಿಂಹ, ಸುಂಟಿಕೊಪ್ಪ ಪ್ರೌಢಶಾಲೆಯ ಸಹಶಿಕ್ಷಕಿ ಚಿತ್ರಾ, ಯೋಜನಾಧಿಕಾರಿ ಪುರುಷೋತ್ತಮ್, ಒಕ್ಕೂಟ ಅಧ್ಯಕ್ಷರಾದ ಲೀಲಾವತಿ, ಸೇವಾ ಪ್ರತಿನಿಧಿಗಳಾದ ಯಶೋದಾ ಹಾಗೂ ನಂದಿನಿ ಉಪಸ್ಥಿತರಿದ್ದರು.ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸುಂಟಿಕೊಪ್ಪ ವಲಯ ಮೇಲ್ವಿಚಾರಕ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು. ಸೇವಾ ಪ್ರತಿನಿಧಿ ಚಿತ್ರ ಸ್ವಾಗತಿಸಿದರು. ಶಿಕ್ಷಕ ಪ್ರಕಾಶ್ ವಂದಿಸಿದರು.