ಸಾರಾಂಶ
ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲದ ಕೊರತೆ ಕಾಡುತ್ತಿರುವುದು ಅವರನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತಿದೆ.
ದೊಡ್ಡಬಳ್ಳಾಪುರ:
ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಉದ್ಯೋಗಾವಕಾಶ ಪಡೆಯಲು ಇಂಗ್ಲಿಷ್ ಭಾಷಾ ಸಂವಹನ ಕೌಶಲ ಅತ್ಯಂತ ಪ್ರಮುಖ ಎಂದು ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ತಿಳಿಸಿದರು.ಇಲ್ಲಿನ ಶ್ರೀ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ 10 ದಿನಗಳ ಕೌಶಲ್ಯ ತರಬೇತಿ ಉಚಿತ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸಂವಹನ ಕೌಶಲದ ಕೊರತೆ ಕಾಡುತ್ತಿರುವುದು ಅವರನ್ನು ಅವಕಾಶ ವಂಚಿತರನ್ನಾಗಿ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ಉಚಿತವಾಗಿ ಭಾಷಾ ಹಾಗೂ ಸಂವಹನ ಕೌಶಲ್ಯವನ್ನು ವೃದ್ಧಿಸುವ ಶಿಬಿರ ಆಯೋಜಿಸಲಾಗಿತ್ತು. ಶಿಬಿರದಲ್ಲಿ ಪಾಲ್ಗೊಂಡಿರುವ ಹಲವು ವಿದ್ಯಾರ್ಥಿಗಳು ಉತ್ತಮ ಪ್ರತಿಕ್ರಿಯೆ ನೀಡಿರುವುದು ಶಿಬಿರದ ಯಶಸ್ಸಿನ ಭಾಗವಾಗಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿವಂಗತ ಆರ್.ಎಲ್.ಜಾಲಪ್ಪ ಅವರ ಆಶಯದಂತೆ ಗ್ರಾಮೀಣ ಮತ್ತು ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶಗಳನ್ನು ಒದಗಿಸಿಕೊಡುವ ಜೊತೆಗೆ ಸಮಕಾಲೀನ ಅಗತ್ಯಗಳಿಗೆ ಪೂರಕವಾಗಿ ಪ್ರಜ್ಞಾವಂತಿಕೆ ಬೆಳೆಸುವ ಉದ್ದೇಶ ಹೊಂದಲಾಗಿದೆ ಎಂದರು.ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯತು.
ಪ್ರಾಂಶುಪಾಲ ಡಾ.ನಾಗರಾಜ್, ಉದ್ಯೋಗ ತರಬೇತುದಾರ ಬಾಬು ಸಾಬಿ, ಐಕ್ಯೂಎಸಿ ಸಂಯೋಜಕ ಪ್ರೊ.ಕೆ.ಆರ್.ರವಿಕಿರಣ್, ಉಪಪ್ರಾಂಶುಪಾಲ ಪ್ರೊ.ದಕ್ಷಿಣಾಮೂರ್ತಿ, ವಿಭಾಗ ಮುಖ್ಯಸ್ಥರಾದ ಡಾ.ಚಿಕ್ಕಣ್ಣ, ಪಿ.ಚೈತ್ರ, ಸಿ.ಪಿ.ಪ್ರಕಾಶ್, ಉಪನ್ಯಾಸಕರಾದ ಮಧುಶ್ರೀ, ನಂದನ, ಸ್ವಾತಿ, ಶ್ವೇತಾ ಮತ್ತಿತರರು ಉಪಸ್ಥಿತರಿದ್ದರು. 15ಕೆಡಿಬಿಪಿ4- ದೊಡ್ಡಬಳ್ಳಾಪುರದ ಶ್ರೀ ದೇವರಾಜ ಅರಸು ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದಲ್ಲಿ 10 ದಿನಗಳ ಕೌಶಲ್ಯ ತರಬೇತಿ ಉಚಿತ ಶಿಬಿರ ಸಮಾರೋಪ ಕಾರ್ಯಕ್ರಮ ನಡೆಯಿತು.