ಸಾರಾಂಶ
ಹುಬ್ಬಳ್ಳಿ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಬಜೆಟ್ಗೆ ಮಹಾನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಸಚಿವರು, ಬಿಜೆಪಿ ಜನಪ್ರತಿನಿಧಿಗಳು, ಕೆಲ ಉದ್ಯಮಿಗಳು, ಚೇಂಬರ್ ಆಫ್ ಕಾಮರ್ಸ್ ಇದೊಂದು ವಿಕಸಿತ ಭಾರತದ, ಅಭಿವೃದ್ಧಿಗೆ ಪೂರಕವಾದ ಬಜೆಟ್ ಎಂದು ಬಣ್ಣಿಸಿದ್ದರೆ, ಪ್ರತಿಪಕ್ಷಗಳು, ಸಂಪೂರ್ಣ ಅಭಿವೃದ್ಧಿಗೆ ಪೂರಕವಾದ ಬಜೆಟ್ ಅಲ್ಲ ಎಂದು ಅಭಿಪ್ರಾಯಪಟ್ಟಿವೆ.ಕೆಸಿಸಿಐದಲ್ಲಿ ಬಜೆಟ್ ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಹೇಳಿದ ನೀಡಿದ ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ, ಎಂಎಸ್ಎಂಇ ಕ್ಷೇತ್ರಕ್ಕೆ ಉತ್ತೇಜನ ಮತ್ತು ತೆರಿಗೆ ಕಾನೂನು ಸರಳೀಕರಣ ಅಂಶಗಳು ಗಮನಸೆಳೆಯುತ್ತಿವೆ. ಅಭಿವೃದ್ಧಿಗೆ ಪೂರಕವಾದ ಬಜೆಟ್, ಕೃಷಿ ಉತ್ಪಾದನೆಗೆ ಪ್ರೋತ್ಸಾಹ, ಯುವ ಜನತೆಗೆ ಉದ್ಯೋಗ ಭರವಸೆ ಮತ್ತು ಕೌಶಲ್ಯಾಭಿವೃದ್ಧಿ, ಸಾಮಾಜಿಕ ನ್ಯಾಯ, ಉತ್ಪಾದನಾ ಕ್ಷೇತ್ರದ ಸಬಲೀಕರಣ, ನಗರಾಭಿವೃದ್ಧಿ, ಇಂಧನ ಭದ್ರತೆ , ಮೂಲ ಸೌಕರ್ಯಗಳ ಅಭಿವೃದ್ಧಿ ಸಂಶೋಧನೆ ಕ್ಷೇತ್ರ ಮತ್ತು ಮುಂದಿನ ತಲೆಮಾರಿಗೆ ಸುಧಾರಣೆಗಳ ಲಾಭ ತಲುಪುವ ಯೋಜನೆಗಳು ಬಜೆಟ್ನಲ್ಲಿ ಪ್ರಾಮುಖ್ಯತೆ ನೀಡಿರುವುದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಿಳಾ ಸಬಲೀಕರಣದ ಭಾಗವಾಗಿ ಆಸ್ತಿ ಖರೀದಿಸುವ ಮಹಿಳೆಯರಿಗೆ ಸ್ಟ್ಯಾಂಪ್ ಡ್ಯೂಟಿ ಸುಂಕ ಇಳಿಕೆಗೆ, ದುಡಿಯುವ ಮಹಿಳೆಯರಿಗೆ ಹಾಸ್ಟೆಲ್ ಸೌಲಭ್ಯ ಮತ್ತು ಶಿಶುಪಾಲನಾ ಕೇಂದ್ರಗಳ ಸ್ಥಾಪನೆ, ಮೂರು ಮಾದರಿಯ ಕ್ಯಾನ್ಸರ್ ರೋಗದ ಶಮನಕ್ಕೆ ಬೇಕಾಗುವ ಔಷಧಿಗಳ ಆಮದಿನ ಮೇಲಿನ ಸುಂಕಕ್ಕೆ ವಿನಾಯಿತಿ ಘೋಷಿಸಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಮುದ್ರಾ ಸಾಲದ ಮಿತಿಯನ್ನು ₹ 10ರಿಂದ ₹ 20 ಲಕ್ಷಗಳಿಗೆ ಏರಿಸಲಾಗಿದೆ. ಆನ್ಲೈನ್ ವೇದಿಕೆಯಲ್ಲಿ ವಹಿವಾಟಿನ ಮಿತಿಯನ್ನು ಖರೀದಿದಾರರಿಗೆ ಅನುಕೂಲವಾಗುವಂತೆ ₹ 500ರಿಂದ ₹ 250 ಕೋಟಿಗೆ ಇಳಿಸಲಾಗಿದೆ. ರಫ್ತು ಹೆಚ್ಚಿಸಲು ಇ-ಕಾಮರ್ಸ್ ಕೇಂದ್ರಗಳನ್ನು ಪಿಪಿಪಿ ಮಾದರಿಯಲ್ಲಿ ಉತ್ತೇಜನಾ ಕ್ರಮಗಳು ಅಭಿವೃದ್ಧಿಗೆ ಪೂರಕವಾಗಿವೆ ಎಂದು ಹೇಳಿದ್ದಾರೆ.
ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಸಹ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ, ಮಾಜಿ ಅಧ್ಯಕ್ಷ ರಮೇಶ ಪಾಟೀಲ, ತೆರಿಗೆ ಸಮಿತಿ ಚೇರಮನ್ನ ಕಾರ್ತಿಕ ಶೆಟ್ಟಿಹಾಗೂ ವೈ.ಎಂ. ಖಟಾವಕರ, ಚನ್ನವೀರ ಮುಂಗರವಾಡಿ. ಕಪಿಲ ಭಂಡಾರಕರ, ಬ್ರಹ್ಮಕುಮಾರ ಬೀಳಗಿ, ವಿಶ್ವನಾಥ ಹಿರೇಗೌಡರ, ಶಶಿಧರ ಶೆಟ್ಟರ ಹಾಗೂ ಇತರರು ಉಪಸ್ಥಿತರಿದ್ದರು.