ಎಂಪಿಸಿಎಸ್‌ಗಳ ಅಭಿವೃದ್ಧಿಗೆ ಅಧಿಕ ಹಾಲು ಪೂರೈಸಿ

| Published : Sep 12 2024, 01:47 AM IST

ಸಾರಾಂಶ

ದೊಡ್ಡಬಳ್ಳಾಪುರ: ಹಾಲು ಉತ್ಪಾದಕರ ಸಹಕಾರ ಸಂಘಗಳು ಅಭಿವೃದ್ಧಿಯತ್ತ ಸಾಗಬೇಕಾದರೆ ಸಂಘಕ್ಕೆ ಹಾಲಿನ ಪೂರೈಕೆ ಹೆಚ್ಚಾಗಬೇಕು ಎಂದು ದೊಡ್ಡಬಳ್ಳಾಪುರ ಹಾಲು ಶೀತಲ ಕೇಂದ್ರದ ವಿಸ್ತರಣಾಧಿಕಾರಿ ಎಂ.ಅನಿತಾ ಹೇಳಿದರು.

ದೊಡ್ಡಬಳ್ಳಾಪುರ: ಹಾಲು ಉತ್ಪಾದಕರ ಸಹಕಾರ ಸಂಘಗಳು ಅಭಿವೃದ್ಧಿಯತ್ತ ಸಾಗಬೇಕಾದರೆ ಸಂಘಕ್ಕೆ ಹಾಲಿನ ಪೂರೈಕೆ ಹೆಚ್ಚಾಗಬೇಕು ಎಂದು ದೊಡ್ಡಬಳ್ಳಾಪುರ ಹಾಲು ಶೀತಲ ಕೇಂದ್ರದ ವಿಸ್ತರಣಾಧಿಕಾರಿ ಎಂ.ಅನಿತಾ ಹೇಳಿದರು.

ತಾಲೂಕಿನ ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 2023 - 2024ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಶುದ್ಧವಾದ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿದರೆ ಸಂಘವು ಉಳಿಯುತ್ತದೆ ಮತ್ತು ಸರ್ಕಾರದ ಪ್ರೋತ್ಸಾಹ ಧನ ರೈತರಿಗೆ ಬರಲು ಅನುಕೂಲವಾಗುತ್ತದೆ, ರೈತರು ಕೃಷಿ ಚಟುವಟಿಕೆ ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಯಾವುದೇ ನಷ್ಟ ಇಲ್ಲ, ರಾಸುಗಳಿಗೆ ಯಾವಾಗಲೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು, ಹಾಲು ಹಿಂಡಲು ಮತ್ತು ಹಾಲನ್ನು ಸಂಘಕ್ಕೆ ತರಲು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳನ್ನೇ ಬಳಸಿದರೆ ಬಹಳ ಒಳ್ಳೆಯದು, ಹಾಲು ಕರೆಯುವ ಮೊದಲು ಕೈಗಳನ್ನು ಸಾಬೂನಿನಿಂದ ತೊಳೆದುಕೊಂಡು ಕೆಚ್ಚಲನ್ನು ಶುದ್ಧ ನೀರಿನಿಂದ ತೊಳೆದು ಒಣ ಬಟ್ಟೆಯಿಂದ ಒರೆಸಬೇಕು ಎಂದರು.

ಸಂಘದ ಅಧ್ಯಕ್ಷ ಮುನಿಅಂಜಿನಪ್ಪ ಮಾತನಾಡಿ, ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಹೊರ ರಾಜ್ಯಗಳಿಗೆ ಅಲ್ಲದೆ ಪಾಶ್ಚಾತ್ಯ ದೇಶಗಳಲ್ಲಿ ಮಾರುಕಟ್ಟೆಯನ್ನು ವಿಸ್ತರಿಸಿರುವುದು ಉತ್ಕೃಷ್ಟತೆಗೆ ಸಾಕ್ಷಿ, ಆರೋಗ್ಯವಂತ ರಾಸುವಿನ ಶುದ್ಧ ಗುಣಮಟ್ಟದ ಹಾಲನ್ನು ಮಾತ್ರ ಸಂಘವು ತೆಗೆದುಕೊಳ್ಳುತ್ತದೆ, ಕೆಚ್ಚಲು ಬಾವು ಇರುವ ಹಾಲನ್ನು ಸಂಘಕ್ಕೆ ಸರಬರಾಜು ಮಾಡಬಾರದು,ಉತ್ತಮ ಗುಣಮಟ್ಟದ ಹಾಲಿಗೆ ಮಾತ್ರ 5 ರುಪಾಯಿ ಪ್ರೋತ್ಸಾಹ ಧನ ಬರುತ್ತದೆ, ಬಮೂಲ್ ನಿಂದ ರೈತರಿಗೆ ಜೋಳ, ರಾಸುಗಳಿಗೆ ಮ್ಯಾಟ್, ಮೇವು ಕತ್ತರಿಸುವ ಯಂತ್ರಗಳು, ಹಾಲು ಕರೆಯುವ ಯಂತ್ರಗಳು, ಸಂಘದ ಕಟ್ಟಡ ಕಟ್ಟಲು ಕೆ.ಎಂ.ಎಫ್ ನಿಂದ ಅನುದಾನಗಳು, ಬೆಂಗಳೂರು ಹಾಲು ಒಕ್ಕೂಟದಿಂದ ಅನುದಾನಗಳು, ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ,ನೂತನ ಕಟ್ಟಡಗಳಿಗೆ ಪೀಠೋಪಕರಣಗಳು, ಪಶು ಆಹಾರ, ಸಂಘದ ಒಳಿತಿಗಾಗಿ ಸಾಲ ಸೌಲಭ್ಯ ಮತ್ತಿತರ ಸೇವೆ, ಸೌಲಭ್ಯಗಳನ್ನು ರೈತರು ಮತ್ತು ಸಂಘಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಡಾ.ಎಂ ಚಿಕ್ಕಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು. ಉಪಾಧ್ಯಕ್ಷ ಹನುಮಂತ ಗೌಡ, ನಿರ್ದೇಶಕರಾದ ಎಂ.ರಾಮಪ್ಪ, ಎಂ.ಮಾರಪ್ಪ, ಕೃಷ್ಣಪ್ಪ, ಮುನಿಕೃಷ್ಣ, ಅಕ್ಕಯಮ್ಮ,ನಾರಾಯಣಪ್ಪ, ವೆಂಕಟಲಕ್ಷ್ಮಮ್ಮ, ಅಕ್ಕಯಮ್ಮ, ಭಾಗ್ಯಮ್ಮ, ಮತ್ತಿತರರು ಹಾಜರಿದ್ದರು.

ಫೋಟೋ-

11ಕೆಡಿಬಿಪಿ6- ದೊಡ್ಡಬಳ್ಳಾಪುರ ತಾಲೂಕು ಮೋಪರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದ್ಯರ ಸಭೆ ನಡೆಯಿತು.